2023ರಲ್ಲಿ ಮಲ ಹೊರುವ ಪದ್ದತಿ ನಿಷೇಧ ಹಾಗೂ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಕಾಯ್ದೆ ನಡೆಸಿದ ಸಮೀಕ್ಷೆಯ ವರದಿಯಂತೆ 2013ರಲ್ಲಿ ದೇಶದ ಯಾವ ಜಿಲ್ಲೆಗಳಲ್ಲೂ ಮಲಹೊರುವ ಪದ್ದತಿ ಕಂಡುಬಂದಿಲ್ಲ ಎಂದು ಸರ್ಕಾರ ಘೋಷಿಸಿತು. ಆದರೆ, ಸಫಾಯಿ ಕರ್ಮಚಾರಿಗಳು ನೇರ ಮಲಗುಂಡಿಗೆ ಇಳಿಯದಂತೆ, ಮಲ ಹೊರದಂತೆ ಜಾರಿಗೆ ತಂದ ಕಾಯ್ದೆಗಳ ಯಾವ ನಿಯಮಗಳೂ ಪರಿಪೂರ್ಣವಾಗಿ ಇಂದಿಗೂ ಜಾರಿಗೆ ಬಂದಿಲ್ಲ.
ಗುರುವಾರ ಲೋಕಸಭೆಯಲ್ಲಿ ಇಕ್ರ ಹಸನ್ ಪ್ರಸ್ತಾಪಿಸಿದ ವರದಿಯ ಪ್ರಕಾರ 2017ರಿಂದ ಈಚೆಗೆ ಸುಮಾರು 622 ಸಫಾಯಿ ಕರ್ಮಚಾರಿಗಳು ಸಫಾಯಿ ಕಾರ್ಯದಲ್ಲಿ ತೊಡಗಿದ್ದಾಗ ಮೃತಪಟ್ಟಿದ್ದಾರೆ. ಅದರಲ್ಲಿ 57 ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಪರಿಹಾರ ದೊರಕಿಲ್ಲ. 6 ಪ್ರಕರಣಗಳನ್ನು ಪರಿಗಣಿಸದೇ ಕೈಬಿಡಲಾಗಿದೆ.
ಸಮಾಜವಾದಿ ಪಕ್ಷದ ಸಂಸದೆ ಇಕ್ರ ಚೌಧರಿ ಸಫಾಯಿ ಕರ್ಮಚಾರಿಗಳ ಕುರಿತ ಸರ್ಕಾರದ ನಿರ್ಲಕ್ಷ್ಯವನ್ನು ಅಂಕಿ ಅಂಶಗಳ ಮುಖೇನ ಪ್ರಶ್ನಿಸಿದರು. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಮುಂದೆ ಇದುವರೆಗೂ ಪ್ರಾಣ ಕಳೆದುಕೊಂಡ ಸಫಾಯಿ ಕರ್ಮಚಾರಿಗಳ ಪಟ್ಟಿ ಅದರಲ್ಲಿ ಪರಿಹಾರ ಸಿಗದ ಸಂತ್ರಸ್ಥರ ಕಟುಂಬಗಳ ಕುರಿತು ಕಳವಳ ವ್ಯಕ್ತಪಡಿಸಿದರು.
2023ರಲ್ಲಿ ಮಲ ಹೊರುವ ಪದ್ದತಿ ನಿಷೇಧ ಹಾಗೂ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಕಾಯ್ದೆ ನಡೆಸಿದ ಸಮೀಕ್ಷೆಯ ವರದಿಯಂತೆ 2013ರಲ್ಲಿ ದೇಶದ ಯಾವ ಜಿಲ್ಲೆಗಳಲ್ಲೂ ಮಲಹೊರುವ ಪದ್ದತಿ ಕಂಡುಬಂದಿಲ್ಲ ಎಂದು ಸರ್ಕಾರ ಘೋಷಿಸಿತು. ಸಫಾಯಿ ಕರ್ಮಚಾರಿಗಳು ನೇರ ಮಲಗುಂಡಿಗೆ ಇಳಿಯದಂತೆ, ಮಲ ಹೊರದಂತೆ ಜಾರಿಗೆ ತಂದ ಕಾಯ್ದೆಗಳ ಯಾವ ನಿಯಮಗಳು ಪರಿಪೂರ್ಣವಾಗಿ ಇಂದಿಗೂ ಜಾರಿಗೆ ಬಂದಿಲ್ಲ ಎಂಬುದು ಸಂಸದೆ ಮುಂದಿಟ್ಟ ಕಳಕಳಿಯಾಗಿತ್ತು.

2013 ಮತ್ತು 2018 ರ ಸಮೀಕ್ಷೆಗಳು 58,098 ಜನ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿದೆ. ಇದರಲ್ಲಿ 32,473 ಕರ್ಮಾಚಾರಿಗಳು ಉತ್ತರ ಪ್ರದೇಶ ಒಂದರಲ್ಲೇ ಗುರುತಿಸಿಲಾಗಿದೆ.
ಒದಗಿಸಿದ ದತ್ತಾಂಶಗಳ ಪ್ರಕಾರ 2017 ರಿಂದ ಇಲ್ಲಿಯವರೆಗೆ ಭಾರತದಲ್ಲಿ ಮಲದ ಗುಂಡಿ ಮತ್ತು ಒಳಚರಂಡಿಗಳ ಸ್ವಚ್ಛತೆಯಲ್ಲಿ ತೊಡಗಿದ್ದ ಒಟ್ಟು 622 ಕಾರ್ಮಿಕರ ಸಾವು. 539 ಕುಟುಂಬಗಳಿಗೆ ಪೂರ್ಣ ಪರಿಹಾರ ಪಾವತಿ. 25 ಕುಟುಂಬಗಳಿಗೆ ಅರೆಪರಿಹಾರ. 52 ಕುಟುಂಬಗಳಿಗೆ ಪರಿಹಾರವೇ ದೊರೆತಿಲ್ಲ. 6 ಪ್ರಕರಣಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಇಕ್ರಾ ಹೇಳಿದ್ದಾರೆ. ಇದರಲ್ಲಿ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು 86 ಸಾವು ಉತ್ತರಪ್ರದೇಶದಲ್ಲಿ, ಮಹಾರಾಷ್ಟ್ರ 82, ತಮಿಳುನಾಡಿನಲ್ಲಿ 77, ಹರಿಯಾಣದಲ್ಲಿ 76, ಗುಜರಾತಿನಲ್ಲಿ 73 ದೆಹಲಿಯಲ್ಲಿ 62 ಸಫಾಯಿ ಕರ್ಮಚಾರಿಗಳ ಸಾವು ಸಂಭವಿಸಿದೆ. ಮೃತರಿಗೆ ಪರಿಹಾರ ಒದಗಿಸುವುದರಲ್ಲೂ ಉತ್ತರಪ್ರದೇಶ ಹಿಂದೆ ಬಿದ್ದಿದೆ.
ಇದಕ್ಕೆ ಉತ್ತರಿಸಿದ ಸರ್ಕಾರ NAMASTE ಯೋಜನೆಯು ಯಂತ್ರಗಳನ್ನು ಬಳಸಿ ನೈರ್ಮಲ್ಯ ನಿರ್ವಹಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು ಇದು ಸಫಾಯಿ ಕರ್ಮಾಚಾರಿಗಳು ನೇರವಾಗಿ ಮಲಗುಂಡಿಗಳಿಗೆ ಇಳಿದು ಕೈಯಿಂದ ಮಲ ಹೊರುವುದನ್ನು ನಿಷೇಧಿಸುವ ಸಲುವಾಗಿಯೇ ಜಾರಿಯಾದ ವ್ಯವಸ್ಥೆಯಾಗಿದೆ ಎಂದು ಹೇಳಿದೆ.
ಪ್ರಸ್ತುತ ಯೋಜನೆಯು ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಕಾರ್ಮಿಕರಿಗೆ ಪುನರ್ವಸತಿ ಹಾಗೂ ಕೌಶಲ್ಯ ತರಬೇತಿ ನೀಡುವ ಆರ್ಥಿಕ ನೆರವು ಹಾಗೂ ಸುರಕ್ಷತಾ ಸಲಕರಣೆಗಳನ್ನು ಒದಗಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದಿದೆ ಸರ್ಕಾರ.
2025ರಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗವು ವೇತನ ಪಾವತಿಸದಿರುವುದು, ಸುರಕ್ಷತಾ ಸಲಕರಣೆಗಳನ್ನು ಒದಗಿಸದಿರುವುದು ಜಾತಿ ಆಧಾರಿತ ತಾರತಮ್ಯದ ವಿರುದ್ಧ 842 ದೂರುಗಳನ್ನು ಸ್ವೀಕರಿಸಿದೆ. ದೆಹಲಿಯಲ್ಲಿ 140 ದೂರುಗಳು ದಾಖಲಾಗಿದೆ, ಉತ್ತರಪ್ರದೇಶದಲ್ಲಿ 130 ದೂರುಗಳು ದಾಖಲಾಗಿದೆ. ಯಾಂತ್ರೀಕರಣದ ಆದೇಶಗಳನ್ನು ಕಡೆಗಣಿಸುವ ಗುತ್ತಿಗೆದಾರರ ಮೇಲೆ ಹಾಗೂ ನಾಗರಿಕ ಸಂಸ್ಥೆಗಳ ಮೇಲೆ ಜರುಗಿಸಲಾದ ಕ್ರಮಗಳ ಕುರಿತ ನಿರ್ವಹಣೆ ಆಯಾ ರಾಜ್ಯದ ಕೆಲಸವಾಗಿದೆ. ಇದರಲ್ಲಿ ಕೇಂದ್ರದ ಭಾಗಿತ್ವ ಇರುವುದಿಲ್ಲ ಎಂಬ ಸರ್ಕಾರದ ಹೇಳಿಕೆ ಈವರೆಗೂ ಸರ್ಕಾರ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿಯ ಪರವಾಗಿ ಮಾಡಲಾಗಿದೆ ಎಂದ ಎಲ್ಲಾ ಹೇಳಿಕೆಗಳ ವಿರುದ್ದವಾಗಿದೆ.
ಮಲಹೊರುವ ಪದ್ದತಿ ನಿಷೇಧ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದರೂ ಭಾರತದಲ್ಲಿ ಈಗಲೂ ಕೈಯಿಂದ ಮಲಬಾಚುವ ಪದ್ದತಿ ಹಾಗೆಯೇ ಮುಂದುವರೆದು ಬಂದಿರುವುದು ರೇಜಿಗೆಯ ವಿಷಯ. ಮಲ ಹೊರುವ ಪದ್ದತಿ ನಿಷೇಧಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ ಯೋಜನೆ ಎಷ್ಟರ ಮಟ್ಟಿಗೆ ಅನ್ವಯವಾಗಿದೆ ಎಂಬುದು ತನ್ನ ವ್ಯಾಪ್ತಿಗೆ ಒಳಪಡುವ ವಿಷಯವಲ್ಲ ಎಂದು ರಾಜ್ಯಗಳ ಪಾಲಿಗೆ ಬಿಟ್ಟಿರುವುದು ನ್ಯಾಯ ಸಮ್ಮತವಲ್ಲ.
ಇಂದಿಗೂ ರೈಲ್ವೇ ಹಳಿಯ ಮಲ ತ್ಯಾಜ್ಯ ಬಾಚಲು ಸರ್ಕಾರ ಸಫಾಯಿ ಕರ್ಮಚಾರಿಗಳನ್ನೇ ನೇಮಿಸಿದೆ, ಅವರಿಗೆ ಸರಿಯಾದ ಸುರಕ್ಷಾ ಸಲಕರಣೆಗಳನ್ನು ಒದಗಿಸದೆ ಅವರ ಆರೋಗ್ಯ ಹಾಗೂ ಘನತೆಯ ಜೊತೆಗೆ ಚೆಲ್ಲಾಟವಾಡುತ್ತಿದೆ. ಸಾಲದಾಗಿ ನಮ್ಮ ಸಮಾಜ ಜಾತಿ ಮತ್ತು ವೃತ್ತಿ ಆಧರಿಸಿ ಮಾನಸಿಕವಾಗಿ ದೈಹಿಕವಾಗಿ ಕರ್ಮಚಾರಿ ವರ್ಗವನ್ನು ಶೋಷಣೆಗೆ ಒಳಮಾಡಿದೆ. “ಸರ್ಕಾರ ಸಫಾಯಿ ಕೆಲಸವನ್ನು ಒಂದು ವೃತ್ತಿಯಾಗಿ ಕಾಣಿ, ಜಾತಿಯಾಗಿ ಅಲ್ಲ” ಎಂದು ಹೇಳಿಕೆ ನೀಡಿದೆ. ಆದರೆ ವಾಸ್ತವದಲ್ಲಿ ಮಲಹೊರುವವರು ಪೌರ ಕಾರ್ಮಿಕರು ತಲತಲಾಂತರದಿಂದಲೂ ಜಾತಿಯಾಧರಿಸಿಯೇ ಈ ಕೆಲಸಕ್ಕೆ ನೂಕಲ್ಪಟ್ಟವರು.

ʼರುದ್ರನೆಂಬರು, ಶಿವನೆಂಬರು ಎನ್ನ ಹೇಸುವರು, ಅಂಜುವರು ಜಲಗಾರನೆನಲುʼ ಕುವೆಂಪು ಬರೆದ ಜಲಗಾರ ನಾಟಕದ ಸಾಲುಗಳಿವು. ಇಂದಿಗೂ ನಮ್ಮ ಸಮಾಜದ ವಾಸ್ತವತೆ ಹೀಗೆ ಇದೇ ಸಫಾಯಿ ಕರ್ಮಚಾರಿಗಳು ಕಾರ್ಯ ನಿರ್ವಹಿಸುವಾಗ ಮಲಗುಂಡಿಗಳಲ್ಲಿ ಕಾಲುಜಾರಿ ಬಿದ್ದು ಪ್ರಾಣ ಕಳೆದುಕೊಂಡರು. ಸರ್ಕಾರ ಇಷ್ಟು ಮೊತ್ತದ ಪರಿಹಾರ ಘೋಷಿಸಿದೆ ಎಂಬ ಸುದ್ದಿ ಮಾಮೂಲಾಗಿ ಹೋಗಿದೆ. ವ್ಯವಸ್ಥೆಯ ನಿರ್ಲಕ್ಷ್ಯದಿಂದ ಹೋದ ಜೀವಗಳು ಕಳೆದ ಘನತೆಯ ಬದುಕು ಯಾವ ಸರ್ಕಾರದ ಪರಿಹಾರ ಧನದಿಂದಲೂ ಸಿಗಲಾರದು. ಬದಲಿಗೆ ಅವರು ಸಪಾಯಿ ಕಾರ್ಯದಲ್ಲಿ ತೊಡಗುವಾಗ ಅಗತ್ಯವಿರುವ ಮುನ್ನೆಚ್ಚರಿಕ ಕ್ರಮಗಳನ್ನು, ಸುರಕ್ಷತ ಕ್ರಮಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರ ತೆಗೆದುಕೊಳ್ಳಬೇಕು.
ಭೂಮಿಯಿಂದ ಚಂದ್ರ, ಮಂಗಳನ ಅಂಗಳದವರೆಗೂ ಜಿಗಿಯಲು ತಂತ್ರಜ್ಞಾನ ಬಳಕೆಯಾಗುತ್ತಿರುವಾಗ, ಒಳಚರಂಡಿಗಳ, ಮಲಗುಂಡಿಗಳ ನಿರ್ವಹಣೆಗೆ ಸಾರ್ವಜನಿಕ ವಲಯದ ನೈರ್ಮಲ್ಯ ವೃದ್ಧಿಗೆ ಬೇಕಾದ ತಂತ್ರಜ್ಞಾನ ಯಾಂತ್ರಿಕ ಉಪಕರಣ ಲಭ್ಯವಿಲ್ಲದೇ ಇರುವುದು ಈ ದೇಶ ಒಂದು ನಿರ್ದಿಷ್ಟ ಸಮುದಾಯದ ಕುರಿತು ತಳೆದಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿ.





