ಭಾರತದಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ. ಸಾವು-ನೋವುಗಳು ಸಂಭವಿಸುತ್ತಿವೆ. ಜೊತೆಗೆ, ದೇಶವು ಭವಿಷ್ಯದ ಆಹಾರ ಸಮಸ್ಯೆಯ ಆತಂಕದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ತರಕಾರಿ ಬೆಲೆಗಳ ಏರಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.
ಭಾರತದ ವಿವಿಧ ನಗರಗಳಲ್ಲಿ ಟೊಮೆಟೊ ಬೆಲೆಯು ಕೆ.ಜಿ.ಗೆ 100 ರೂಪಾಯಿಗಳನ್ನು ಮೀರಿದೆ. ಉದಾಹರಣೆಗೆ, ರಾಂಚಿಯಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ 110-120 ರೂಪಾಯಿ ಇದೆ. ಚೆನ್ನೈನಲ್ಲಿ ಟೊಮೆಟೊ ಬೆಲೆ ಈಗಾಗಲೇ 100 ರೂಪಾಯಿ ದಾಟಿದೆ ಎಂದು ವರದಿಯಾಗಿದೆ.
ಆಂಧ್ರದ ಪ್ರಾದೇಶಿಕ ತರಕಾರಿ ಪೂರೈಕೆಯ ಪ್ರಮುಖ ಕೇಂದ್ರವಾದ ವಿಜಯವಾಡದಲ್ಲಿ ಟೊಮೆಟೊ ಬೆಲೆ ಒಂದೇ ದಿನದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಶುಕ್ರವಾರ 24 ರೂ. ಇದ್ದ ಬೆಲೆ, ಶನಿವಾರ 70 ರೂ.ಗೆ ಏರಿಕೆ ಕಂಡಿದೆ. ಇದೇ ವೇಳೆ, ಸ್ಥಳೀಯ ವ್ಯಾಪಾರಿಗಳು ಕೆ.ಜಿ ಟೊಮೆಟೊವನ್ನು 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಟೊಮೆಟೊ ಬೆಲೆ ಏರಿಕೆಗೆ ಭಾರೀ ಮಳೆಯು ಒಂದು ಪ್ರಮುಖ ಕಾರಣಗಳಲ್ಲಿ ಒಂದು ಎಂಬುದರಲ್ಲಿ ಸಂದೇಹವಿಲ್ಲ. ಉತ್ತರ ಭಾರತದ ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲಿ ಅತಿಯಾದ ಮಳೆಯು ಗಂಭೀರ ಪರಿಣಾಮಗಳನ್ನು ಬೀದಿದೆ. ಟೊಮೆಟೊ ಬೆಳೆವ ರೈತರು ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ತೀವ್ರ ನಷ್ಟ ಎದುರಿಸುತ್ತಿದ್ದಾರೆ. ಭಾರೀ ಮಳೆಯು ರೈತರಿಗೆ ಮಾತ್ರವಲ್ಲದೆ ವ್ಯಾಪಾರ ಮಾರ್ಗಗಳು ಮತ್ತು ರಸ್ತೆ ಸಂಪರ್ಕದ ಮೇಲೂ ಪರಿಣಾಮ ಬೀರುತ್ತಿದೆ.
ಸರ್ಕಾರ ಕೂಡ ಬೆಲೆ ಏರಿಕೆಗೆ ಭಾರೀ ಮಳೆಯೇ ಕಾರಣವೆಂದು ದೂಷಿಸುತ್ತಿದೆ. ಭಾರೀ ಮಳೆಯಿಂದ ಟೊಮೆಟೊ ಇಳಿವಳಿಯಲ್ಲಿ ನಷ್ಟವಾಗಿದೆ. ಹೀಗಾಗಿ, ಬೆಲೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮಳೆ ಇಲ್ಲದ ದಿನಗಳಾದ ಜೂನ್ ಆರಂಭದಲ್ಲಿ ರೈತರು ಕಿ.ಜಿ. ಟೊಮೆಟೊವನ್ನು ಕೇವಲ 8 ರೂ.ನಿಂದ 15 ರೂ.ಗೆ ಮಾರಾಟ ಮಾಡುವ ಪರಿಸ್ಥಿತಿ ಇತ್ತು. ಆಗಲೂ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ 30 ರೂ.ಗಳ ಆಸುಪಾಸಿನಲ್ಲಿತ್ತು. ಅಂದರೆ, ಲಾಭದ ಬಹುಪಾಲು ಭಾಗವು ಮಧ್ಯವರ್ತಿಗಳಿಗೆ ಅಥವಾ ವ್ಯಾಪಾರ ಕಂಪನಿಗಳಿಗೆ ಹೋಗಿತ್ತು.
ಮಧ್ಯವರ್ತಿಗಳ ಹಾವಳಿಯ ಕಾರಣಕ್ಕಾಗಿ ಕಳೆದ ವರ್ಷಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಸರ್ಕಾರವು ಪಾಠ ಕಲಿಯಲಿಲ್ಲ. ಈ ಬಾರಿಯೂ ಮಧ್ಯವರ್ತಿಗಳು ಅಥವಾ ವ್ಯಾಪಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಪರಿಣಾಮವಾಗಿ, ಈ ಮಧ್ಯವರ್ತಿ/ಕಾರ್ಪೋರೇಟ್ ವ್ಯಾಪಾರಿಗಳು ಜೂನ್ ತಿಂಗಳಲ್ಲಿ ಕಡಿಮೆ ಬೆಲೆಗೆ ಟೊಮೆಟೊವನ್ನು ಖರೀದಿಸಿ, ಸಂಗ್ರಹಿಸಿಟ್ಟಿದ್ದರು. ಇದೀಗ, ಮಾರುಕಟ್ಟೆಯಲ್ಲಿ ಬೆಲೆ 100 ರೂ.ಗಳ ಗಡಿಯಲ್ಲಿರುವಾಗ, ತಮ್ಮ ಗೋಡೌನ್ನಿಂದ ಟೊಮೆಟೊವನ್ನು ಹೊರತೆಗೆಯುತ್ತಿದ್ದಾರೆ. ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಟೊಮೆಟೊ ಬೆಳೆದ ರೈತರು ನಷ್ಟದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ.
ಇಳುವರಿ ಹೆಚ್ಚಿದ್ದರೂ, ಕಡಿಮೆ ಇದ್ದರೂ ಗ್ರಾಹಕ ಮಾರುಕಟ್ಟೆಯಲ್ಲಿ ಬೆಲೆಯು ಏರಿಕೆಯಲ್ಲಿಯೇ ಇರುತ್ತದೆ. ಲಾಭ-ನಷ್ಟದ ಲೆಕ್ಕಾಚಾರದಲ್ಲಿ ರೈತರು ಮತ್ತು ಗ್ರಹಕರು ಹೊರ ಅನುಭವಿಸುತ್ತಾರೆ. ಬೆಲೆ ಏರಿಕೆ ಸಮಸ್ಯೆಯು ಕೇವಲ ಟೊಮೆಟೊಗೆ ಮಾತ್ರ ಸೀಮಿತವಾಗಿಲ್ಲ. ಈರುಳ್ಳು, ನುಗ್ಗೆಕಾಯಿ, ಕ್ಯಾರೇಟ್ ಸೇರಿದಂತೆ ಹಲವಾರು ತರಕಾರಿಗಳ ಬೆಲೆಯೂ ತೀವ್ರವಾಗಿ ಏರಿಕೆ ಕಂಡಿವೆ.
ಸರ್ಕಾರವು ಈಗಾಗಲೇ ಪ್ರಮುಖ ನಗರ ಕೇಂದ್ರಗಳಲ್ಲಿ ಬೆಲೆಗಳನ್ನು ಸ್ಥಿರಗೊಳಿಸಲು 3 ಲಕ್ಷ ಟನ್ಗಳ ಈರುಳ್ಳಿಯನ್ನು ಹೆಚ್ಚುವರಿ ಬಫರ್ ಸ್ಟಾಕ್ನಿಂದ ಹೊರ ತೆಗೆದಿದೆ. ಆದರೆ, ಈರುಳ್ಳಿ ಬೆಳೆವ ರೈತರು ಟೊಮೆಟೊ ಬೆಳೆಯುವ ರೈತರಿಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಯುವ ಪ್ರಮುಖ ಪ್ರದೇಶ ಲಾಸಲಗಾಂವ್ನಲ್ಲಿ ಈರುಳ್ಳಿ ಬೆಲೆಯು 15%ರಷ್ಟು ಕಡಿಮೆಯಾಗಿವೆ. ರೈತರಿಗೆ ಕ್ವಿಂಟಾಲ್ಗೆ ಸುಮಾರು 1,275 ರೂ. ದೊರೆಯುತ್ತಿದೆ. ಆದರೆ, ಗ್ರಾಹಕ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 2,500 ರೂ.ಗಿಂತ ಹೆಚ್ಚಿದೆ.
ಈ ಲೇಖನ ಓದಿದ್ದೀರಾ?; ಕಾನೂನಿನ ಮುಂದೆ ಎಲ್ಲರೂ ಸಮಾನರು; ಭರವಸೆ ಮೂಡಿಸಿದ ಪ್ರಜ್ವಲ್-ದರ್ಶನ್ ಪ್ರಕರಣ
ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆಗೆ ಅನಿಯಮಿತ ಮಳೆ ಮತ್ತು ಹವಾಮಾನ ಬದಲಾವಣೆಯು ಕಾರಣವೆಂದು ಸರ್ಕಾರ ಹೇಳುತ್ತಿದೆ. ಆದರೆ, ಮಧ್ಯವರ್ತಿಗಳು ಮತ್ತು ಕಾರ್ಪೋರೇಟ್ ವ್ಯಾಪಾರಿಗಳ ಹಾವಳಿಯನ್ನು ಸರ್ಕಾರ ನಿರ್ಲಕ್ಷಿಸಿದೆ. ಆದಾಗ್ಯೂ, ಹವಾಮಾನ ಬದಲಾವಣೆಯೇ ಕಾರಣವೆಂದು ಭಾವಿಸಿದರೂ, ಗಂಭೀರ ಪ್ರಶ್ನೆಯೊಂದು ಎದುರಾಗುತ್ತದೆ. ಅದು; ‘ನಮ್ಮ ಸುಧಾರಿತ ಹವಾಮಾನ ಮೇಲ್ವಿಚಾರಣೆ ಮತ್ತು ಮುನ್ಸೂಚನೆ ವ್ಯವಸ್ಥೆಗಳು ಏನಾಗಿವೆ ಮತ್ತು ಎಲ್ಲಿವೆ? ಎಂಬುದು. ಜೊತೆಗೆ, ಮೋದಿ ಸರ್ಕಾರವು ಹವಾಮಾನ ಮೇಲ್ವಿಚಾರಣೆಯಲ್ಲಿ ದೇಶು ಪ್ರಗತಿ ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಈ ಸುಧಾರಿತ ವ್ಯವಸ್ಥೆಗಳನ್ನು ಬಳಸಿಕೊಂಡು ಭವಿಷ್ಯದ ನಷ್ಟಗಳನ್ನು ಊಹಿಸಲು, ಎಚ್ಚರಿಕೆ ನೀಡಲು ಹಾಗೂ ತಡೆಗಟ್ಟಲು ಯಾಕೆ ಸರ್ಕಾರ ವಿಫಲವಾಗಿದೆ?
ಹವಾಮಾನವನ್ನು ದೂಷಿಸುವ ಬದಲು, ಮಾನ್ಸೂನ್ ಋತುವಿಗಾಗಿ ತರಕಾರಿಗಳನ್ನು ಸಂಗ್ರಹಿಸಲು ಮತ್ತು ಲಭ್ಯವಾಗುವಂತೆ ಮಾಡಲು ಸರ್ಕಾರವು ಹೆಚ್ಚಿನ ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಗೋದಾಮುಗಳು ಮತ್ತು ಅಗತ್ಯ ವ್ಯವಸ್ಥೆಯನ್ನು ಹೊಂದಿರಬೇಕು.
ಇದರಿಂದ, ಯಾವುದೇ ಸಂದರ್ಭದಲ್ಲಿ ರೈತರು ಹೆಚ್ಚು ತರಕಾರಿಯ ಇಳುವರಿ ಮಾಡಿದರೂ, ಕನಿಷ್ಠ ಬೆಂಬಲ ಬೆಲೆ ಮೂಲಕ ಖರೀದಿಸಬಹುದು. ಇದು, ರೈತರ ನಷ್ಟವನ್ನೂ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನೂ ನಿಭಾಯಿಸಲು ಉತ್ತಮ ಪರಿಹಾರ ಒದಗಿಸುತ್ತದೆ. ಹಾಗಿದ್ದರೂ, ಸರ್ಕಾರವು ಈ ಖರೀದಿ ಮತ್ತು ವಿತರಣಾ ವ್ಯವಸ್ಥೆಯನ್ನು ನಿರ್ಮಿಸಲು ಇಚ್ಚಾಶಕ್ತಿ ಹೊಂದಿಲ್ಲ ಎಂಬುದು ವಿಷಾಧನೀಯ ಮತ್ತು ಖಂಡನೀಯ.
ಮೋದಿ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ದಶಕಕ್ಕಿಂತಲೂ ಹೆಚ್ಚು ಕಾಲವಾಗಿದೆ. ಈ ‘ಅಮೃತ ಕಾಲ’ದಲ್ಲಿ ನಾವು ನಮ್ಮ ಜನಸಂಖ್ಯೆಗೆ ಮೂಲಭೂತ ಆಹಾರವನ್ನು ಪೂರೈಸಲಾಗದಿದ್ದರೆ, ಶತಕೋಟಿ ಜನಸಂಖ್ಯೆಯೊಂದಿಗೆ ಭಾರತವು ವಿಶ್ವಗುರು ಆಗಲು ಹೇಗೆ ಸಾಧ್ಯ?




