ನಮ್ಮ ಪೂರ್ವಜರು ಜೈಲಿನಲ್ಲಿದ್ದಾಗ, ನಿಮ್ಮವರು ಬ್ರಿಟೀಷರ ಗುಲಾಮರಾಗಿದ್ದರು ಎಂದು ದೇಶಪ್ರೇಮವನ್ನು ಪ್ರಶ್ನಿಸಿದ ಸಂಘಪರಿವಾರದ ವ್ಯಕ್ತಿಯೊಬ್ಬನಿಗೆ ಬಾಲಿವುಡ್ನ ಖ್ಯಾತ ಸಾಹಿತಿ ಹಾಗೂ ಕವಿಗಳಾದ ಜಾವೇದ್ ಅಖ್ತರ್ ಅವರು ತಿರುಗೇಟು ನೀಡಿದ್ದಾರೆ.
ನಿನ್ನೆ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತ – ಪಾಕ್ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕದಿಂದ ಟೀಂ ಇಂಡಿಯಾ 6 ವಿಕೆಟ್ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಭಾರತದ ಜಯವನ್ನು ಸಂಭ್ರಮಿಸಿ ಸಾಹಿತಿ ಜಾವೇದ್ ಅಖ್ತರ್ ಅವರು “ ವಿರಾಟ್ ಕೊಹ್ಲಿ ಜಿಂದಾಬಾದ್, ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದರು.
ಜಾವೇದ್ ಅಖ್ತರ್ ಅವರ ದೇಶಪ್ರೇಮವನ್ನು ಪ್ರಶ್ನಿಸಿದ ‘ಪ್ರೊಫೆಸರ್ ಸಾಹೇಬ್’ ಎಂಬ ಹೆಸರಿನ ಸಂಘಪರಿವಾರದ ವ್ಯಕ್ತಿಯೊಬ್ಬ ಪೋಸ್ಟ್ಗೆ ಪ್ರತ್ಯುತ್ತರ ನೀಡಿ ‘ ಇಂದು ಸೂರ್ಯ ಎಲ್ಲಿಂದ ಹುಟ್ಟಿದ್ದಾನೆ, ಒಳಗಡೆ ನಿಮಗೆ ತುಂಬ ದುಃಖ ಆಗುತ್ತಿದೆ ತಾನೆ’ ಎಂದು ಕೀಳಾಗಿ ನುಡಿದಿದ್ದ. ಜಾವೇದ್ ಅಖ್ತರ್ ಅವರು ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕೆ ಮತಾಂಧತೆಯನ್ನು ತೋರಿಸಿದ್ದ.
ಇದಕ್ಕೆ ತಿರುಗೇಟು ನೀಡಿದ್ದ ಜಾವೇದ್ ಅಖ್ತರ್ ಅವರು “ಮಗಾ, ನಿಮ್ ತಾತ ಮುತ್ತಾತ, ಬ್ರಿಟಿಷರ ಬೂಟು ನೆಕ್ತಾ ಇದ್ದಾಗ, ನಮ್ ತಾತ ಮುತ್ತಾತ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರು, ಕರಿ ನೀರಿನ ಶಿಕ್ಷೆ ಅನುಭವಿಸ್ತಿದ್ರು…” ಎಂದು ಮತ್ತೊಂದು ಪೋಸ್ಟ್ ಹಾಕಿ ಸಂಘ ಪರಿವಾರದ ವ್ಯಕ್ತಿಯ ಬೆವರಿಳಿಸಿದ್ದಾರೆ.
ಜಾವೇದ್ ಅಖ್ತರ್ ಅವರ ವೈಯಕ್ತಿಕ ನೀವನಕ್ಕೆ ಬಂದಾಗ ಅವರು ನಾಸ್ತಿಕವಾದಿಗಳು. ಅವರ ಮುತ್ತಾತ ಫಜಲ್ ಎ ಹಖ್ ಖೈರಾಬಾದಿ ಅವರು ಭಾರತದ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದವರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಎದೆ ಸೆಟೆಸಿದ್ದವರು. ಅವರಿಗೆ ಕರಿನೀರಿನ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸಲಾಯಿತು. 1861ರ ಆಗಸ್ಟ್ 19ರಂದು ಅಲ್ಲಿಯೇ ಜೀವ ಬಿಟ್ಟರು ಅವರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು
ಜಾವೇದ್ ಅಖ್ತರ್ ತಮ್ಮ ದೇಶಪ್ರೇಮವನ್ನು ಸಾಬೀತು ಮಾಡುವಂತೆ ಜಾವೇದ್ ಅಖ್ತರ್ ಅವರಿಗೆ ಸವಾಲು ಹಾಕಲಾಗುತ್ತಿದೆ. ವಿರಾಟ್ ಕೊಹ್ಲಿ ಆಟವನ್ನು ಸೂಪರ್ ಸೂಪರ್ ಎಂದು ಹೊಗಳಿದ ನಂತರವೂ… ಅವರನ್ನು ಹಿಂದೂ ಮತಾಂಧರು ಪಾಕಿಸ್ತಾನಿ ಪಾಕಿಸ್ತಾನಿ ಎಂದು ನಿಂದಿಸುತ್ತಿದ್ದಾರೆ. ಜಾವೇದ್ ಅಖ್ತರ್ ನಾಸ್ತಿಕವಾದಿ. ಅವರ ಉರ್ದೂ ಹೆಸರು ನೋಡಿ ಅವರನ್ನು ಪಾಕಿಸ್ತಾನಿ ಅಂತ ನಿಂದಿಸಲಾಗುತ್ತಿದೆ. ದೇಶದಲ್ಲೇ ಖ್ಯಾತಿ ಗಳಿಸಿದ ಇಂತಹವರನ್ನೇ ಹೀಗೆ ನಿಂದಿಸಿದರೆ ಇನ್ನು ಸಾಮಾನ್ಯ ಮುಸಲ್ಮಾನರ ಗತಿಯೇನು ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾವೇದ್ ಅಖ್ತರ್ ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ಗೀತ ರಚನೆಕಾರರಾಗಿದ್ದು, ನೂರಾರು ಸಿನಿಮಾಗಳಿಗೆ ಸಾವಿರಾರು ಹಾಡುಗಳನ್ನು ಬರೆದಿದ್ದಾರೆ. ಅವರ ನೂರಾರು ಹಾಡುಗಳು ಸೂಪರ್ ಹಿಟ್ ಆಗಿವೆ. ಉತ್ತಮ ಗೀತ ರಚನೆಗಾಗಿ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಿನಿಮಾ ರಂಗದ ಹತ್ತಾರು ಪ್ರಶಸ್ತಿಗಳಲ್ಲದೆ ಕೇಂದ್ರ ಸರ್ಕಾರವು ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಒಮ್ಮೆ ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.






