NCERT ಇತ್ತೀಚೆಗೆ ಬಿಡುಗಡೆ ಮಾಡಿದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ “ನ್ಯಾಯಾಂಗದಲ್ಲಿನ ಭ್ರಷ್ಟಾಚಾರ” ಎಂಬ ಅಧ್ಯಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ವಿವಾದಿತ ಪಠ್ಯಪುಸ್ತಕವನ್ನು ನಿಷೇಧಿಸಿದೆ. ಈ ಕುರಿತು ವಿವರಣೆಯನ್ನು ಕೋರಿ NCERT ನಿರ್ದೇಶಕರಿಗೆ ನೋಟಿಸ್ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರ ಪೀಠವು, ಇದು ಆಳವಾಗಿ ಬೇರೂರಿರುವ ಪಿತೂರಿಯ ಭಾಗವಾಗಿದೆ ಮತ್ತು ಇದಕ್ಕೆ ಹೊಣೆಗಾರರಾಗಿರುವವರನ್ನು ಕಾನೂನಿನ ಮುಂದೆ ತರಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ನ್ಯಾಯಾಲಯವು ಶಾಲಾ ಶಿಕ್ಷಣ ಇಲಾಖೆ ಮತ್ತು NCERT ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ʼನ್ಯಾಯಾಲಯ ನಿಂದನೆʼಗೆ ಸಂಬಂಧಿಸಿ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯ ನಿಂದನೆ ಆರೋಪದಡಿ ಸೂಕ್ತ ಕ್ರಮ ಕೈಗೊಳ್ಳದಿರಲು ಕಾರಣ ತಿಳಿಸುವಂತೆ ಸೂಚಿಸಿದೆ.
ಇದನ್ನು ಓದಿದ್ದೀರಾ? ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ: ಸುಪ್ರೀಂ ಕೆಂಗಣ್ಣು – ಕೇಸರೀಕರಣ, ಇತಿಹಾಸ ತಿರುಚುವಿಕೆಗೂ ಬೀಳುವುದೇ ಕಡಿವಾಣ?
ಇದಲ್ಲದೆ ಪುಸ್ತಕದ ಎಲ್ಲಾ ಪ್ರತಿಗಳನ್ನು ಡಿಜಿಟಲ್ ಅಥವಾ ಸಾರ್ವಜನಿಕ ವೇದಿಕೆಯಿಂದ ತೆಗೆದು ಹಾಕುವಂತೆ NCERT, ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳಿಗೆ ನ್ಯಾಯಾಲಯ ಆದೇಶಿಸಿದೆ.
ಪುಸ್ತಕದ ಉತ್ಪಾದನೆ ಮತ್ತು ವಿತರಣೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಿದ ಸುಪ್ರೀಂ ಕೋರ್ಟ್ ಮತ್ತು ಆಕ್ಷೇಪಾರ್ಹ ಅಧ್ಯಾಯವನ್ನು ಬರೆದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯ ಸದಸ್ಯರ ಬಗ್ಗೆಯೂ ವಿವರಗಳನ್ನು ಕೇಳಿದೆ.





