‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದ ಕಾರಣಕ್ಕಾಗಿ ದೇಶದ್ರೋಹ ಪ್ರಕರಣದಡಿ ಬಂಧಿತಳಾಗಿದ್ದ ಪಶ್ಚಿಮ ಬಂಗಾಳದ ಮೂಲದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಪೊಲೀಸರು ಕಾನೂನು ಜಾರಿ ಪ್ರಕ್ರಿಯೆಯಲ್ಲಿ ಲೋಪದೋಷ ಎಸಗಿದ್ದಾರೆ ಮತ್ತು ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ಗಮನಿಸಿರುವ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಮೂಲತಃ ಪಶ್ಚಿಮ ಬಂಗಾಳದ ನಂದಿಗ್ರಾಮ ನಿವಾಸಿ ಸರ್ಭಾನು ಖಾತೂನ್ ಅವರು ಬೆಂಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ವಾಸಿಸುತ್ತಿದ್ದರು. ಅವರು ವಾಸವಿದ್ದ ಜಮೀನು ಎಲ್ಲಾರೆಡ್ಡಿ ಎಂಬುವವರಿಗೆ ಸೇರಿತ್ತು ಎನ್ನಲಾಗಿದೆ. ಹೀಗಾಗಿ, ಆ ಜಮೀನಿನಲ್ಲಿ ಅನಧಿಕೃತ ಮನೆಗಳನ್ನು ತೆರವುಗೊಳಿಸಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ, ಸರ್ಭಾನು ಖಾತೂನ್ ಅವರು ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾರೆಂದು ಆರೋಪಿಸಲಾಗಿತ್ತು. ಇದೇ ಆರೋಪದ ಮೇಲೆ ಅವರ ವಿರುದ್ಧ ಬಿ.ಎನ್.ಎಸ್ ಸೆಕ್ಷನ್ 152 (ರಾಷ್ಟ್ರದ್ರೋಹ), 196, 197(1) ಹಾಗೂ 353(1) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಅವರು ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಅವರ ಅರ್ಜಿಯನ್ನು ಆಲಿಸಿರುವ ಹೈಕೋರ್ಟ್, “ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದರೆ, ಅಲ್ಲಿ ಮಹಿಳೆಯನ್ನು ಅಡ್ಡಗಟ್ಟಿ, ಕಿರುಕುಳ ನೀಡಿ, ಒತ್ತಡ ಹೇರಿ ಬಲವಂತವಾಗಿ ಆ ಘೋಷಣೆ ಕೂಗುವಂತೆ ಪ್ರಚೋದಿಸಲಾಗಿದೆ. ಇದು ಸ್ವ-ಇಚ್ಛೆಯಿಂದ ಮಾಡಿದ ಕೃತ್ಯವಲ್ಲ. ಆದ್ದರಿಂದ, ಅವರ ವಿರುದ್ಧ ಬಲವಂತದ ಕ್ರಮ ಸಲ್ಲದು” ಎಂದು ಹೇಳಿದೆ.
ಅಲ್ಲದೆ, “ಪೊಲೀಸರು ಡಿಜಿಪಿ ನಿರ್ದೇಶನಗಳನ್ನು ಗಾಳಿಗೆ ತೂರಿ, ವಿಡಿಯೋದ ಅಸಲಿಯತ್ತನ್ನು ಪರಿಶೀಲಿಸದೆ, ನೇರವಾಗಿ ‘ಸುಮೊಟೊ’ ಪ್ರಕರಣ ದಾಖಲಿಸಿದ್ದಾರೆ. ವಿದ್ಯುನ್ಮಾನ ಸಾಕ್ಷ್ಯಕ್ಕೆ ಅಗತ್ಯವಾದ ’63 ಬಿಎಸ್ಎ’ ಪ್ರಮಾಣಪತ್ರವೂ ದಾಖಲೆಯಲ್ಲಿಲ್ಲ. ಬಂಧನದ ವೇಳೆ ಪಾಲಿಸಬೇಕಾದ ನಿಯಮಗಳನ್ನು (ಸೆಕ್ಷನ್ 35 ನೋಟಿಸ್) ಪಾಲಿಸಿಲ್ಲ. ಅಲ್ಲದೆ, ಸಂವಿಧಾನದ ವಿಧಿ 22ರ ಅನ್ವಯ ಆರೋಪಿಗೆ ಆಕೆಯ ಭಾಷೆಯಲ್ಲಿ ‘ಬಂಧನದ ಕಾರಣ’ಗಳನ್ನು ತಿಳಿಸಿಲ್ಲ. ಇದು ವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ: ಭಾರತ ಕಲಿಯಬೇಕಿರುವ ಪಾಠವೇನು?
“ಆರೋಪಿ ಮಹಿಳೆ ಭಾರತೀಯ ಪ್ರಜೆಯಾಗಿದ್ದು, ಅದೇ ವಿಡಿಯೋದಲ್ಲಿ ಆಕೆ ಮೂರು ಬಾರಿ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿರುವುದು ದಾಖಲಾಗಿದೆ. ಇಲ್ಲಿ ಯಾವುದೇ ‘ಅಪರಾಧಿ ಮನಸ್ಸು’ ಕಂಡುಬರುತ್ತಿಲ್ಲ” ಎಂದು ಹೈಕೋರ್ಟ್ ಗಮನಿಸಿದೆ.
“ಪ್ರಕರಣವು ಗಂಭೀರವಾದದ್ದು ಎಂಬುದಕ್ಕಿಂತಲೂ, ಕಾನೂನು ಪ್ರಕ್ರಿಯೆಯಲ್ಲಿನ ಲೋಪಗಳು ಮತ್ತು ಪ್ರಚೋದನೆಯಿಂದ ನಡೆದ ಘಟನೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದೆ, ಕೇವಲ ಬಡ ಮಹಿಳೆಯನ್ನು ಗುರಿ ಮಾಡಿರುವುದು ಕಾನೂನಿನ ದುರ್ಬಳಕೆಯಾಗಿದೆ” ಎಂದಿರುವ ನ್ಯಾಯಾಲಯ, ಆರೋಪಿ ಮಹಿಳೆಗೆ ಜಾಮೀನು ಮಂಜೂರು ಮಾಡಿದೆ.




