ತಮಿಳುನಾಡಿನ ಕರೂರು ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ (ಜೋಸೆಫ್ ವಿಜಯ್ ಚಂದ್ರಶೇಖರ್) ಸೋಮವಾರ ಸಿಬಿಐ ಎದುರು ಹಾಜರಾಗಿದ್ದರು. ಸುಮಾರು 6 ಗಂಟೆಗಳ ಕಾಲ ವಿಜಯ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. 90 ಪ್ರಶ್ನೆಗಳನ್ನು ಕೇಳಿದೆ. ಸಿಬಿಐ ಪ್ರಶ್ನೆಗಳಿಗೆ ವಿಜಯ್ ಲಿಖಿತವಾಗಿ ಉತ್ತರ ನೀಡಿದ್ದಾರೆ ಎಂದು ವರದಿಯಾಗಿದೆ.
ವಿಜಯ್ ಬೆಳಗ್ಗೆ 11:30ರ ವೇಳೆಗೆ ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಯಲ್ಲಿ ಹಾಜರಿದ್ದರು. ಅವರನ್ನು ತನಿಖಾಧಿಕಾರಿಗಳು ಸಂಜೆ 6:15ರವರೆಗೆ ವಿಚಾರಣೆ ನಡೆಸಿದ್ದಾರೆ. ಕಚೇರಿಯ ಹೊರಗೆ ವಿಜಯ್ ಬೆಂಬಲಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸ್ಥಳದಲ್ಲಿ ಜನಸಂದಣಿಯನ್ನು ನಿಭಾಯಿಸಲು ಕೇಂದ್ರ ಅರೆಸೈನಿಕ ಪಡೆಗಳು ಮತ್ತು ದೆಹಲಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು.
ಕರೂರಿನಲ್ಲಿ ನಡೆದ ಟಿವಿಕೆ ಸಮಾವೇಶದ ವೇಳೆ ಕಾಲ್ತುಳಿತಕ್ಕೆ ಕಾರಣವಾದ ಜನಸಂದಣಿ ನಿಯಂತ್ರಣ ವೈಫಲ್ಯಗಳು, ಸುರಕ್ಷತಾ ವ್ಯವಸ್ಥೆಗಳ ಉಲ್ಲಂಘನೆ, ಕಾರ್ಯಕ್ರಮಕ್ಕೆ ಪಡೆದ ಅನುಮತಿಗಳ ಪುರಾವೆ, ಜನಸಂದಣಿ ನಿಯಂತ್ರಣಕ್ಕೆ ನಿಯೋಜಿಸಲಾದ ಸ್ವಯಂಸೇವಕರ ಸಂಖ್ಯೆ ಹಾಗೂ ತುರ್ತು ಸಿದ್ಧತೆಗಳ ಕುರಿತು ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಜೊತೆಗೆ, ವಿಜಯ್ ಅವರು ಸಮಾವೇಶದಲ್ಲಿ ಹಾಜರಾದ ಮತ್ತು ನಿರ್ಗಮಿಸಿದ ಸಮಯ, ಏಳು ಗಂಟೆಗಳಿಗಿಂತ ಹೆಚ್ಚು ವಿಳಂಬ ಸೇರಿದಂತೆ ವೇಳಾಪಟ್ಟಿಯಲ್ಲಿನ ಬದಲಾವಣೆಗಳು ಜನಸಂದಣಿ ಹೆಚ್ಚಳಕ್ಕೆ ಕಾರಣವಾಗಿವೆಯೇ ಎಂಬುದರ ಕುರಿತೂ ಪ್ರಶ್ನಿಸಲಾಗಿದೆ. ಸಿಬಿಐ ಅಧಿಕಾರಿಗಳು 90 ಪ್ರಶ್ನೆಗಳನ್ನು ಪಟ್ಟಿ ಮಾಡಿ, ವಿಜಯ್ ಅವರಿಗೆ ನೀಡಿದ್ದರು. ಅವುಗಳಿಗೆ ವಿಜಯ್ ಲಿಖಿತ ಉತ್ತರ ನೀಡಿದ್ದು, ಅವುಗಳನ್ನಾಧರಿಸಿ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ.
ವಿಚಾರಣೆ ವೇಳೆ, ಈ ವಾರ ಮತ್ತೆ ವಿಚಾರಣೆಗೆ ಹಾಜರಾಗುವುದರಿಂದ ವಿಜಯ್ ವಿನಾಯತಿ ಕೇಳಿದ್ದಾರೆ. ಈ ವಾರ, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಇರುವ ಕಾರಣ, ವಿಚಾರಣೆಗೆ ಹಾಜರಾಗುವುದು ಕಷ್ಟಸಾಧ್ಯವೆಂದು ಸಿಬಿಐ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಅವರ ಮನವಿಯಂತೆ ವಿಚಾರಣಾ ದಿನಾಂಕವನ್ನು ಬದಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಟಿವಿಕೆ ಬೃಹತ್ ಸಮಾವೇಶ ಆಯೋಜಿಸಿತ್ತು. ಸಮಾವೇಶಕ್ಕೆ ವಿಜಯ್ ಅವರು ಸುಮಾರು 7 ಗಂಟೆಗಳ ಕಾಲ ತಡವಾಗಿ ಭಾಗವಹಿಸಿದ್ದರು. ಆದರೆ, ಬೃಹತ್ ಜನಸಂದಣಿಯು ವಿಜಯ್ ಅವರಿಗಾಗಿ ಕಾದಿತ್ತು. ಈ ವೇಳೆ, ಹಲವರು ಅಸ್ವಸ್ಥರಾಗಿದ್ದರು. ಕಾಲ್ತುಳಿತವೂ ಸಂಭವಿಸಿತು. ದುರ್ಘಟನೆಯಲ್ಲಿ 41 ಮಂದಿ ಸಾವನ್ನಪ್ಪಿದರು. ಅನೇಕರು ಗಾಯಗೊಂಡಿದ್ದರು.
ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಪ್ರಕರಣದ ತನಿಖೆಗಾಗಿ ತಮಿಳುನಾಡು ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಆದರೆ, ವಿಜಯ್ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಸ್ವತಂತ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿ ಟಿವಿಕೆ ತಮಿಳುನಾಡು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಸರ್ಕಾರಕ್ಕೆ ಆದೇಶಿಸಿತು.
ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್ ಆದೇಶವು ‘ರಾಜ್ಯದ ಸ್ವಾಯತ್ತತೆಗೆ ಧಕ್ಕೆ ಉಂಟುಮಾಡುತ್ತದೆ ಮತ್ತು ಫೆಡರಲ್ ವ್ಯವಸ್ಥೆಗೆ ಅಪಾಯಕಾರಿ’ ಎಂದು ವಾದಿಸಿತು. ಆದರೆ, ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದ ಸುಪ್ರೀಂ, ಪ್ರಕರಣವನ್ನು ಸಿಬಿಐ ಮೂಲಕವೇ ತನಿಖೆ ನಡೆಸಬೇಕೆಂದು ತೀರ್ಪು ನೀಡಿತು.
ಸುಪ್ರೀಂ ಕೋರ್ಟ್ ಆದೇಶದಂತೆ ಅಕ್ಟೋಬರ್ 26 ರಂದು ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು. ಜನವರಿ 12ರಂದು ವಿಚಾರಣೆ ಹಾಜರಾಗುವಂತೆ ವಿಜಯ್ಗೆ ಸಿಬಿಐ ನೋಟಿಸ್ ನೀಡಿತ್ತು. ವಿಜಯ್ ಜೊತೆಗೆ, ತಮಿಳುನಾಡು ಕೇಡರ್ನ ಹಿರಿಯ ಅಧಿಕಾರಿ, ಪ್ರಸ್ತುತ ರಾಜ್ಯದಲ್ಲಿ ಪೊಲೀಸ್ ಮಹಾನಿರ್ದೇಶಕ (ಸಶಸ್ತ್ರ ಪೊಲೀಸ್) ಆಗಿರುವ ಎಸ್ ಡೇವಿಡ್ಸನ್ ದೇವಶಿರ್ವಥಮ್ ಅವರನ್ನು ಸೋಮವಾರ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ದೇವಶಿರ್ವಥಮ್ ಅವರನ್ನು ಪ್ರತ್ಯೇಕವಾಗಿ ಪ್ರಶ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಸಿಬಿಐ ಅಧಿಕಾರಿಗಳು ಕರೂರಿಗೆ ಒಂದೆರಡು ಬಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಾಕ್ಷ್ಯಚಿತ್ರ ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಸಂತ್ರಸ್ತರ ಕುಟುಂಬಗಳು, ಪೊಲೀಸರು, ಪಕ್ಷದ ಕಾರ್ಯಕರ್ತರು ಸೇರಿದಂತೆ 200ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದ್ದಾರೆ.




