ಕರೂರು ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಸೋಮವಾರ ದೆಹಲಿಯಲ್ಲಿರುವ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ಆಗಮಿಸಿದ್ದಾರೆ.
ಈಗಾಗಲೇ ಅವರಿಗೆ ಭದ್ರತೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದರು.
ಜನವರಿ 6 ಎಂದು ಸಿಬಿಐ ನೀಡಿರುವ ಸಮನ್ಸ್ ನಲ್ಲಿ ವಿಜಯ್ ಅವರು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿತ್ತು. ಅದೇ ರೀತಿಯಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಗೆ ಚೆನ್ನೈನಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ದೆಹಲಿಗೆ ತೆರಳಿದ್ದಾರೆ ಎಂದು ಟಿವಿಕೆ ಮೂಲಗಳು ಹೇಳಿವೆ.
ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯು ‘ಟಿವಿಕೆ’ಯ ಹಲವಾರು ಪದಾಧಿಕಾರಿಗಳನ್ನು ಸಹ ವಿಚಾರಣೆ ನಡೆಸಲಿದೆ.
ಘಟನೆಯ ಹಿನ್ನೆಲೆ
2025 ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ವಿಜಯ್ ಪಾಲ್ಗೊಂಡಿದ್ದ ರಾಜಕೀಯ ಸಭೆಯಲ್ಲಿ ಉಂಟಾದ ಕಾಲ್ತುಳಿತಕ್ಕೆ 41 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ‘ಎಸ್ಐಟಿ’ಯನ್ನು ರಚಿಸಿತ್ತು. ಸುಪ್ರೀಂ ಕೋರ್ಟಿನ ಆದೇಶದ ನಂತರ ‘ಎಸ್ಐಟಿ’ಯಿಂದ ಪ್ರಕರಣದ ತನಿಖೆಯನ್ನು ‘ಸಿಬಿಐ’ಗೆ ವರ್ಗಾಹಿಸಲಾಯಿತು.





