ಕರೂರಿನಲ್ಲಿ ನಡೆದಿರುವ ಕಾಲ್ತುಳಿತ ಪ್ರಕರಣದ ಬಗ್ಗೆ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ. ತನಿಖಾ ಆಯೋಗ ಪ್ರಕರಣದ ತನಿಖೆ ನಡೆಸಲಿದೆ. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, “ಕರೂರು ಕಾಲ್ತುಳಿತ ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ತನಿಖಾ ಆಯೋಗ ರಚಿಸಲಾಗಿದೆ. ಆಯೋಗವು ತನಿಖೆ ನಡೆಸಲಿದೆ. ಪ್ರಕರಣ ಸಂಬಂಧ ಯಾವುದೇ ರಾಜಕೀಯ ಹೇಳಿಕೆ ನೀಡಲು ನಾನು ಇಚ್ಚಿಸುವುದಿಲ್ಲ” ಎಂದಿದ್ದಾರೆ.
ಸ್ಟಾಲಿನ್ ಅವರು ಘಟನೆ ನಡೆದ ಶನಿವಾರ ರಾತ್ರಿಯೇ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಮೃತರ ಕುಟುಂಬಸ್ಥರಿಗೂ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬೌದ್ಧರು, ಮುಸ್ಲಿಮರನ್ನು ಒಂದು ಮಾಡಿದೆ ಅಸ್ಮಿತೆಯ ಹೋರಾಟ: ಬಿಜೆಪಿ ಕುತಂತ್ರಕ್ಕಿಲ್ಲ ಆಸ್ಪದ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಪಕ್ಷದ ನಾಯಕ, ನಟ ವಿಜಯ್, “ಘಟನೆಯಿಂದ ನನ್ನ ಹೃದಯ ಚೂರಾಗಿದೆ. ದುಃಖದಿಂದ ನರಳುತ್ತಿದ್ದೇನೆ. ಘಟನೆಯು ನಿಜಕ್ಕೂ ನಮಗೆ ತುಂಬಲಾಗದ ನಷ್ಟ ಉಂಟುಮಾಡಿದೆ. ಸಾಂತ್ವನದ ಮಾತುಗಳು ಪ್ರೀತಿಪಾತ್ರರ ನಷ್ಟವನ್ನು ಭರಿಸಲಾರದು. ಇಂತಹ ಸಂದರ್ಭಗಳಲ್ಲಿ ನಾನು ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಕ್ಕೆ ನಿಮ್ಮ ಕುಟುಂಬದ ಸದಸ್ಯನಾಗಿ 20 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ನೀಡಲು ನಾನು ಉದ್ದೇಶಿಸಿದ್ದೇನೆ” ಎಂದು ಹೇಳಿದ್ದಾರೆ.




