ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ), ಅಂಗನವಾಡಿ ಕಾರ್ಯಕರ್ತೆಯರು, ಪೂರ್ವ ಪ್ರಾಥಮಿಕ ಶಿಕ್ಷಕರು ಹಾಗೂ ಸಾಕ್ಷರತಾ ಬೋಧಕರಿಗೆ ನೀಡಲಾಗುವ ಗೌರವಧನದಲ್ಲಿ 1,000 ರೂ. ಹೆಚ್ಚಳ ಮಾಡಲಾಗುತ್ತದೆ ಎಂದು ಕೇರಳ ಸರ್ಕಾರ ಘೋಷಿಸಿದೆ.
ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ 2026-27ರ ಆರ್ಥಿಕ ವರ್ಷದ ಆಯವ್ಯಯ ಮಂಡಿಸಿದ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್, ಗೌರವಧನ ಹೆಳ್ಳವನ್ನು ಘೋಷಿಸಿದ್ದಾರೆ. “ಅಂಗನವಾಡಿ ಸಹಾಯಕಿಯರಿಗೂ ಮಾಸಿಕ 500 ರೂ.ಗಳ ಗೌರವಧನ ಹೆಚ್ಚಳ ಮಾಡಲಾಗಿದೆ. ಮಧ್ಯಾಹ್ನದ ಊಟದ ಅಡುಗೆಯವರಿಗೆ ದೈನಂದಿನ ವೇತನವನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿದೆ” ಎಂದು ಭರವಸೆ ನೀಡಿದ್ದಾರೆ. ಈ ಹೆಚ್ಚಳವು 2026ರ ಏಪ್ರಿಲ್ನಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇತರ ಪ್ರಮುಖ ಘೋಷಣೆಗಳು:
- 2024ರಲ್ಲಿ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಮೊದಲ ಹಂತದ ಮನೆಗಳನ್ನು ಫೆಬ್ರವರಿ ಮೂರನೇ ವಾರದಲ್ಲಿ ಹಸ್ತಾಂತರಿಸಲಾಗುವುದು.
- ದಿವಂಗತ ಕಮ್ಯುನಿಸ್ಟ್ ನಾಯಕ, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರ ಸ್ಮರಣಾರ್ಥ ತಿರುವನಂತಪುರದಲ್ಲಿ ‘ವಿ.ಎಸ್. ಸೆಂಟರ್’ ಅನ್ನು ಸ್ಥಾಪಿಸಲಾಗುವುದು, ಇದಕ್ಕಾಗಿ 20 ಕೋಟಿ ರೂ. ಹಂಚಿಕೆ ಮಾಡಲಾಗುತ್ತದೆ.
- ತಿರುವನಂತಪುರಂನಿಂದ ಕಾಸರಗೋಡಿಗೆ 583 ಕಿ.ಮೀ. ಹೈಸ್ಪೀಡ್ ರೈಲು ಪ್ರಯಾಣವನ್ನು ಒಳಗೊಂಡಿರುವ ಪ್ರಸ್ತಾವಿತ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ (ಆರ್ಆರ್ಟಿಎಸ್) ಪ್ರಾಥಮಿಕ ಕಾಮಗಾರಿಗಳಿಗಾಗಿ 100 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
- ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ 20 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
- ಆಟೋರಿಕ್ಷಾ ಕಾರ್ಮಿಕರಿಗೆ ಸ್ಕ್ರ್ಯಾಪೇಜ್ ಬೋನಸ್ ಮತ್ತು ಸಾಲದ ಬಡ್ಡಿ ಮನ್ನಾ.
- ಉದ್ಯೋಗ ಖಾತರಿ ಯೋಜನೆಗೆ ಹೆಚ್ಚುವರಿಯಾಗಿ 1,000 ಕೋಟಿ ರೂ. ಹಂಚಿಕೆ.
- ಕ್ಯಾನ್ಸರ್ ಮತ್ತು ಏಡ್ಸ್ ರೋಗಿಗಳಿಗೆ ಮಾಸಿಕ ಪಿಂಚಣಿಯಲ್ಲಿ 1,000 ರೂ. ಹೆಚ್ಚಳ.
- ಲಾಟರಿ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಮತ್ತು ಆಟೋರಿಕ್ಷಾ ಕಾರ್ಮಿಕರಿಗೆ ವಿಮಾ ಯೋಜನೆಗಳು.
- ಸರ್ಕಾರಿ ಮತ್ತು ಅನುದಾನಿತ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ.
- ಸಹಕಾರಿ ಕಾರ್ಮಿಕರಿಗೆ ಮೆಡಿಸೆಪ್ ಮಾದರಿ ವಿಮಾ ಯೋಜನೆ.
- ಆಟೋ ಮತ್ತು ಟ್ಯಾಕ್ಸಿ ಕಾರ್ಮಿಕರಿಗೆ ಆರೋಗ್ಯ ವಿಮಾ ಯೋಜನೆ.
- ಕಾರುಣ್ಯ ಆರೋಗ್ಯ ಸುರಕ್ಷಾ ಪದ್ಧತಿಯ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ಹೊಸ ಆರೋಗ್ಯ ವಿಮಾ ಯೋಜನೆ.
- ಕೇರಳದ ನಿವಾಸಿಗಳಿಗೆ ನೇಟಿವಿಟಿ ಕಾರ್ಡ್ಗಳನ್ನು ಒದಗಿಸುವ ಪ್ರಕ್ರಿಯೆಗಾಗಿ 20 ಕೋಟಿ ರೂ. ಹಂಚಿಕೆ.
- ಮೀನುಗಾರರಿಗೆ ವಿಮಾ ಯೋಜನೆಗಾಗಿ 100 ಕೋಟಿ ರೂ. ಹಂಚಿಕೆ.
- ವನ್ಯಜೀವಿ ದಾಳಿಯನ್ನು ಎದುರಿಸಲು 100 ಕೋಟಿ ರೂ. ಹೆಚ್ಚುವರಿ ಹಂಚಿಕೆ.
- ಪಂಚಾಯತ್ ಮಟ್ಟದಲ್ಲಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲು 20 ಕೋಟಿ ರೂ. ಅನುದಾನ.
- ಹತ್ತನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಅಪಘಾತ ವಿಮೆ
- ಸಂಶೋಧಕರಿಗೆ ಮಾಸಿಕ 15,000 ರೂ.ಗಳನ್ನು ನೀಡಲು 38.76 ಕೋಟಿ ರೂ. ಅನುದಾನ.
- ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದ ಯೋಜನೆಗೆ 266.66 ಕೋಟಿ ರೂ. ಹೆಚ್ಚುವರಿ ಅನುದಾನ
- ವೃದ್ಧರಿಗೆ ನ್ಯುಮೋಕೊಕಲ್ ಲಸಿಕೆ ಯೋಜನೆ.
- ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಫೆಬ್ರವರಿ-ಮಾರ್ಚ್ನಲ್ಲಿ ಡಿಎ/ಡಿಆರ್ ಬಾಕಿ ವಿತರಿಣೆಗೆ ಕ್ರಮ.




