ಕಳ್ಳತನ ಮಾಡಿದ್ದಾರೆಂಬ ಅನುಮಾನದ ಮೇಲೆ ವಲಸೆ ಕಾರ್ಮಿಕರನನ್ನು ಬರ್ಬರಾಗಿ ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯ ವಲಯಾರ್ನಲ್ಲಿ ನಡೆದಿದೆ.
ವಲಯಾರ್ನ ಸ್ಥಳೀಯ ನಿವಾಸಿಗಳ ಗುಂಪೊಂದು ಛತ್ತೀಸ್ಗಢ ಮೂಲದ ವಲಸೆ ಕಾರ್ಮಿಕ ರಾಮನಾರಾಯಣ್ ಭಯಾರ್ (31) ಅವರನ್ನು ಕ್ರೂರವಾಗಿ ಹೊಡೆದು ಕೊಂದಿದೆ. ಮರಣೋತ್ತರ ಪರೀಕ್ಷೆ ವೇಳೆ ರಾಮನಾರಾಯಣ್ ಅವರ ಮೃತದೇಹದಲ್ಲಿ 80ಕ್ಕೂ ಹೆಚ್ಚು ಗಾಯಗಳು ಕಂಡುಬಂದಿವೆ ಎಂದು ವರದಿ ತಿಳಿಸಿದೆ.
ರಾಮನಾರಾಯಣ್ ಅವರು ಕಂಜಿಕೋಡ್ನಲ್ಲಿ ವಾಸಿಸುತ್ತಿದ್ದರು. ಬುಧವಾರ (ಡಿ.17) ಸಂಜೆ ವಲಯಾರ್ನ ಅಟ್ಟಪ್ಪಲ್ಲಂ ಬಳಿ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ, ಹಲವಾರು ಮನೆಗಳ ಮೇಲೆ ಕಣ್ಣಿಟ್ಟಿದ್ದರು ಎಂದು ಸ್ಥಳೀಯ ಗುಂಪು ಆರೋಪಿ, ಭೀಕರವಾಗಿ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ರಾಮನಾರಾಯಣ್ ಅವರನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿದೆ. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಸಂಬಂಧಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ರಾಮನಾರಾಯಣ್ ಅವರು ಕೆಲಸ ಹುಡುಕಿಕೊಂಡು ಕೇವಲ ನಾಲ್ಕು ದಿನಗಳ ಹಿಂದೆ ಕೇರಳಕ್ಕೆ ಬಂದಿದ್ದರು. ಸೂಕ್ತ ಉದ್ಯೋಗ ಸಿಗದ ಕಾರಣ, ಊರಿಗೆ ಹಿಂದಿರುಗಲು ಯೋಜಿಸುತ್ತಿದ್ದರು. ಆ ಪ್ರದೇಶಕ್ಕೆ ಅವರು ಹೊಸಬರಾಗಿದ್ದರಿಂದ, ಅವರಿಗೆ ರಸ್ತೆಗಳು ತಿಳಿಯದೆ, ದಾರಿ ತಪ್ಪಿ ಅಡ್ಡಾಡುತ್ತಿದ್ದರು. ಘಟನೆ ನಡೆದ ಸ್ಥಳಕ್ಕೆ ಅವರು ದಾರಿ ತಪ್ಪಿ ಹೋಗಿದ್ದರು. ಅವರ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಗಳು ಈವರೆಗೆ ಎಲ್ಲಿಯೂ ದಾಖಲಾಗಿಲ್ಲ. ಅವರು ಅಮಾಯಕ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ದಾರುಣವಾಗಿದೆ ಬಾಲ ನ್ಯಾಯ ವ್ಯವಸ್ಥೆ; ನ್ಯಾಯಕ್ಕಾಗಿ ಕಾಯುತ್ತಿದ್ದಾರೆ 50,000 ಬಾಲಾಪರಾಧಿಗಳು
ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ರಾಮನಾರಾಯಣ್ ಅವರ ಮೇಲೆ ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ತಲೆಯಿಂದ ಕಾಲಿನವರೆಗೆ 80ಕ್ಕೂ ಹೆಚ್ಚು ಗಾಯಗಳಾಗಿವೆ. ತೀವ್ರವಾದ ಹಲ್ಲೆ ಮತ್ತು ತಲೆಗೆ ಆದ ಗಾಯಗಳಿಂದ ಉಂಟಾದ ಅತಿಯಾದ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
ಈ ಹಿಂದೆ, 2018ರಲ್ಲಿ ಅಟ್ಟಪ್ಪಾಡಿಯ ಕಾಡುಕುಮಣ್ಣ ಪ್ರದೇಶದಲ್ಲಿ ಬುಡಕಟ್ಟು ಯುವಕ ಮಧು ಎಂಬವರನ್ನು ಕಳ್ಳತನದ ಆರೋಪದ ಮೇಲೆ ಗುಂಪೊಂದು ಹೊಡೆದು ಕೊಂದಿತ್ತು. ಆ ಪ್ರಕರಣದಲ್ಲಿ 13 ಮಂದಿಯನ್ನು ಅಪರಾಧಿಗಳು ಎಂದು ಘೋಷಿಸಿ, ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿತ್ತು.




