ಜಲಂಧರ್ನ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಪರವಾಗಿ ಕೇರಳ ಹೈಕೋರ್ಟ್ನಲ್ಲಿ ಕಾನೂನು ಪ್ರಕ್ರಿಯೆಗಳನ್ನು ನಿರ್ವಹಿಸಲು ಕೇರಳ ಸರ್ಕಾರ ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಿದೆ. ಈ ನಿಟ್ಟಿನಲ್ಲಿ ಸಂತ್ರಸ್ತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳ ಬಳಿಕ ಸಂತ್ರಸ್ತೆ ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.
ಶುಕ್ರವಾರ, ಮುಖ್ಯಮಂತ್ರಿ ಕಚೇರಿಯು ವಕೀಲ ಬಿ ಜಿ ಹರೀಂದ್ರನಾಥ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಿದ್ದು ಈ ಸಂಬಂಧ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಲೈಂಗಿಕ ಹಗರಣ | ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು
ಈ ಬಗ್ಗೆ ಕುರವಿಲಂಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ, “ವರದಿಗಳ ಮೂಲಕ ನೇಮಕಾತಿಯ ಬಗ್ಗೆ ತಿಳಿದುಕೊಂಡೆ. ಸರ್ಕಾರ, ಮುಖ್ಯಮಂತ್ರಿ, ಮಾಧ್ಯಮಗಳಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸರ್ಕಾರಕ್ಕೆ ವಿನಂತಿ ಸಲ್ಲಿಸಲು ನಡೆಸಿದ ಸಹಿ ಸಂಗ್ರಹ ಅಭಿಯಾನಕ್ಕೆ ಸಮಾಜದ ಹಲವರು ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
ಇನ್ನು ತನಗೆ ಮತ್ತು ತನ್ನ ಪರವಾಗಿ ಬೆಂಬಲಕ್ಕೆ ನಿಂತ ಸನ್ಯಾಸಿನಿಯರಿಗೆ ಪಡಿತರ ಚೀಟಿಗಳನ್ನು ನೀಡಿದ್ದಕ್ಕಾಗಿಯೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಏನಿದು ಬಿಷಪ್ ಮುಲಕ್ಕಲ್ ಅತ್ಯಾಚಾರ ಪ್ರಕರಣ?
ಭಾರತದಲ್ಲಿ ಬಿಷಪ್ ವಿರುದ್ಧ ದಾಖಲಾದ ಮೊದಲ ಅತ್ಯಾಚಾರ ದೂರು ಎಂದೇ ಈ ಪ್ರಕರಣವನ್ನು ಪರಿಗಣಿಸಲಾಗುತ್ತದೆ. 2014ರಿಂದ 2016ರ ನಡುವೆ ಜಲಂಧರ್ನ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ತನ್ನ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕ್ರೈಸ್ತ ಸನ್ಯಾಸಿನಿಯೊಬ್ಬರು 2018ರ ಜೂನ್ನಲ್ಲಿ ದೂರು ದಾಖಲಿಸಿದ್ದರು. ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯ ವಿರುದ್ಧ ದೂರು ನೀಡಲು ಭಯಪಟ್ಟಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದರು.
2018ರ ಸೆಪ್ಟೆಂಬರ್ನಲ್ಲಿ ಬಿಷಪ್ ಬಂಧನ ಮಾಡಲಾಗಿತ್ತು. ಅಕ್ಟೋಬರ್ನಲ್ಲಿ ಷರತ್ತುಬದ್ಧ ಜಾಮೀನು ಲಭಿಸಿತ್ತು. ಈ ನಡುವೆ ಸಂತ್ರಸ್ತೆಯನ್ನು ಬೆಂಬಲಿಸಿ ಕೇರಳದಲ್ಲಿ ಸನ್ಯಾಸಿನಿಯರು ಪ್ರತಿಭಟನೆ ನಡೆಸಿದ್ದು ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. 2019ರ ಏಪ್ರಿಲ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ 1400 ಪುಟಗಳ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಆರಂಭದಲ್ಲಿ ಸಂತ್ರಸ್ತೆ ಪರವಾಗಿದ್ದ 39 ಸಾಕ್ಷಿಗಳು 2020-21ರ ನಡುವೆ ನಡೆದ ವಿಚಾರಣೆ ವೇಳೆ ಸಂತ್ರಸ್ತೆ ವಿರುದ್ಧವಾಗಿ ಸಾಕ್ಷಿ ನುಡಿದಿದ್ದರು. ಈ ವೇಳೆ ಸಾಕ್ಷಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಚರ್ಚೆಯೂ ನಡೆದಿತ್ತು.

ಇದನ್ನು ಓದಿದ್ದೀರಾ? ‘ಅತ್ಯಾಚಾರ ಸಂತ್ರಸ್ತೆ ಮೇಲೆ ಪೊಲೀಸ್ ದೌರ್ಜನ್ಯ; ಭಾರತ ಸತ್ತ ಸಮಾಜವೂ ಆಗುತ್ತಿದೆ’
ಯಾವುದೇ ಸಾಕ್ಷಿ ಇಲ್ಲದ ಕಾರಣ 2022ರ ಜನವರಿಯಲ್ಲಿ ಕೊಟ್ಟಾಯಂ ಅಡಿಷನಲ್ ಸೆಷನ್ಸ್ ಕೋರ್ಟ್ ಬಿಷಪ್ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತು. ಖುಲಾಸೆಗೊಳಿಸುವಾಗ, “ಖುಲಾಸೆ ಎಂದರೆ ಸಂತ್ರಸ್ತೆ ಸುಳ್ಳು ಹೇಳಿದ್ದಾರೆ ಎಂದಲ್ಲ. ಆದರೆ ಪುರಾವೆಗಳ ಕೊರತೆಯಿಂದಾಗಿ ದೋಷಾರೋಪಣ ಸಾಧ್ಯವಾಗಲಿಲ್ಲ ಎಂದರ್ಥ” ಎಂದ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಅದೇ ವರ್ಷ ಸಂತ್ರಸ್ತೆ ಮತ್ತು ಕೇರಳ ಸರ್ಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತು. ಇವೆಲ್ಲವುದರ ನಡುವೆ 2023ರ ಜೂನ್ನಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ಜಲಂಧರ್ ಬಿಷಪ್ ಹುದ್ದೆಗೆ ರಾಜೀನಾಮೆ ನೀಡಿದ್ದು ಪೋಪ್ ಅಂಗೀಕರಿಸಿದರು.
ಈ ಎಲ್ಲ ಬೆಳವಣಿಗೆ ನಡುವೆ ಸಂತ್ರಸ್ತೆ ಪರವಾಗಿ ವಿಶೇಷ ಪ್ರಾಸಿಕ್ಯೂಟರ್ ನೇಮಕಕ್ಕೆ ಸಹಿ ಸಂಗ್ರಹ ಅಭಿಯಾನ ನಡೆದಿತ್ತು. ಇದೀಗ ಕೇರಳ ಸರ್ಕಾರ ಸಂತ್ರಸ್ತೆ ಪರ ವಿಶೇಷ ಪ್ರಾಸಿಕ್ಯೂಟರ್ ನೇಮಿಸಿದೆ. ಈ ಘಟನೆ ನಡೆದ ಒಂಬತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ಸಂತ್ರಸ್ತೆ ಸಾರ್ವಜನಿಕವಾಗಿ ಮಾತನಾಡಿ, “ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವೆ, ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ಗೆ ಹೋಗುವೆ” ಎಂದು ಹೇಳಿದ್ದಾರೆ.





