ಸೀರೆಯ ಬದಲಿಗೆ ಚೂಡಿದಾರ್ ಧರಿಸಿ ಶಾಲೆಗೆ ಬಂದರು ಎಂಬ ಕಾರಣಕ್ಕಾಗಿ ಅನುದಾನಿತ ಶಾಲೆಯೊಂದರ ಮುಖ್ಯಶಿಕ್ಷಕಿಯನ್ನು ಶಾಲಾ ಆವರಣದೊಳಗೆ ಪ್ರವೇಶಿಸದಂತೆ ತಡೆಯಲಾದ ಘಟನೆ ಕೇರಳದ ಕೊಟ್ಟಾರಕ್ಕರದಲ್ಲಿ ನಡೆದಿದೆ.
ಈ ಘಟನೆ ಶಿಕ್ಷಕರ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕೊಟ್ಟಾರಕ್ಕರ ಸಮೀಪದ ನೆಡುವತ್ತೂರಿನ ಇವಿಎಚ್ಎಸ್ಎಸ್ ಶಾಲೆಯಲ್ಲಿ ಬೆಳಿಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದೆ. ಶಾಲೆಯ ಮುಖ್ಯಶಿಕ್ಷಕಿ ಸಿಂಧು ಎಸ್. ನಾಯರ್ ಅವರನ್ನು ಶಾಲಾ ಮ್ಯಾನೇಜರ್ ಕೆ. ಸುರೇಶ್ ಕುಮಾರ್ ಅವರ ಸೂಚನೆಯ ಮೇರೆಗೆ ಗೇಟ್ ಬಳಿಯೇ ತಡೆಹಿಡಿಯಲಾಯಿತು. ಶಿಕ್ಷಕಿಯರು ಚೂಡಿದಾರ್ ಧರಿಸಲು ಅವಕಾಶ ನೀಡಿ ಸರ್ಕಾರಿ ಆದೇಶವಿದ್ದರೂ, ಮ್ಯಾನೇಜರ್ ಮಾತ್ರ ಶಾಲೆಗೆ ಸೀರೆಯನ್ನೇ ಉಟ್ಟು ಬರಬೇಕೆಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಮುಖ್ಯಶಿಕ್ಷಕಿ ಸಿಂಧು ಅವರು ಶಾಲೆಯ ಬಿಸಿಯೂಟ ಯೋಜನೆಗೆ ಅಗತ್ಯವಿರುವ ಮೊಟ್ಟೆ ಹಾಗೂ ಇತರೆ ಸಾಮಗ್ರಿಗಳನ್ನು ಆಟೋರಿಕ್ಷಾದಲ್ಲಿ ತಂದಿದ್ದರು. ಅವರು ಚೂಡಿದಾರ್ ಧರಿಸಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಮ್ಯಾನೇಜರ್ ಆದೇಶದಂತೆ ಗೇಟ್ ತೆಗೆಯಲು ನಿರಾಕರಿಸಿದರು. ಇದನ್ನು ಪ್ರತಿಭಟಿಸಿ ಸಿಂಧು ಅವರು ಶಾಲಾ ಗೇಟ್ ಮುಂಭಾಗದಲ್ಲೇ ಸಾಮಗ್ರಿಗಳೊಂದಿಗೆ ಕುಳಿತು ಧರಣಿ ನಡೆಸಿದರು. ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿ ಬಂದರೂ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇಸ್ರೇಲ್ ಸಂಗದಲ್ಲಿ ‘ಶಿಕಾರಿ’- ಪ್ಯಾಲೆಸ್ತೀನ್ ಜೊತೆ ‘ಪರಾರಿ’; ಕಪಟ ನಾಟಕವಲ್ಲವೇ ಮೋದೀಜಿ?
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಅಜಿತ್ ಕುಮಾರ್ ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದರು. ನಂತರ ಪೊಲೀಸರ ಭದ್ರತೆಯಲ್ಲಿ ಮುಖ್ಯಶಿಕ್ಷಕಿಯನ್ನು ಶಾಲಾ ಕಚೇರಿಗೆ ಕರೆದೊಯ್ಯಲಾಯಿತು.
ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅವಮಾನಿಸಿದ ಆರೋಪದಡಿ ಮ್ಯಾನೇಜರ್ ಸುರೇಶ್ ಕುಮಾರ್ ಮತ್ತು ಹಂಗಾಮಿ ಭದ್ರತಾ ಸಿಬ್ಬಂದಿ ಶಶಾಂಕನ್ ವಿರುದ್ಧ ಸಿಂಧು ಅವರು ಕೊಟ್ಟಾರಕ್ಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಲಿಖಿತ ದೂರು ಬಂದ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ತಿಳಿಸಿದೆ.
ಮ್ಯಾನೇಜರ್ ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಂಧು ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆ ಚುನಾವಣಾ ಕರ್ತವ್ಯದ ತರಬೇತಿಗೆ ತೆರಳುವಾಗಲೂ ಇದೇ ರೀತಿ ಗೇಟ್ ಬಳಿ ತಡೆಯಲಾಗಿತ್ತು. ಕ್ಷುಲ್ಲಕ ಕಾರಣಗಳಿಗೆ ಪದೇ ಪದೇ ಮೆಮೋ ನೀಡಲಾಗುತ್ತಿದೆ.
ಈ ಹಿಂದೆ ಮಹಿಳಾ ಸಿಬ್ಬಂದಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಮ್ಯಾನೇಜರ್ಗೆ ನ್ಯಾಯಾಲಯ ದಂಡ ವಿಧಿಸಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದ್ದಂತೆಯೇ, ಶಿಕ್ಷಕರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮ್ಯಾನೇಜರ್ ಕ್ರಮವನ್ನು ‘ಕಾನೂನುಬಾಹಿರ ಮತ್ತು ತಾರತಮ್ಯದ ನಡೆ’ ಎಂದು ಖಂಡಿಸಿವೆ.





