ಕೇರಳದ ಎರ್ನಾಕುಲಂ ಜಿಲ್ಲೆಯ ಪುತ್ತನ್ವೇಲಿಕ್ಕರ ಗ್ರಾಮ ಪಂಚಾಯತ್ನಲ್ಲಿ 2018ರಲ್ಲಿ 60 ವರ್ಷದ ವೃದ್ಧೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಸ್ಸಾಂ ಮೂಲದ ವಲಸೆ ಕಾರ್ಮಿಕ ಪರಿಮಳ್ ಸಾಹು ಎಂಬಾತನನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿ ಡಾ. ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರನ್ನು ಒಳಗೊಂಡ ದ್ವಿಸದಸ್ಯ ವಿಭಾಗೀಯ ಪೀಠವು ಉತ್ತರ ಪರವೂರಿನ ಹೆಚ್ಚುವರಿ ಸೆಷನ್ಸ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ್ದು, ಆರೋಪಿಗೆ ಮರಣದಂಡನೆಯನ್ನು ವಿಧಿಸಲು ನಿರಾಕರಿಸಿದೆ.
ಇದನ್ನು ಓದಿದ್ದೀರಾ? ಕೋಲಾರದಲ್ಲಿ ಪೈಶಾಚಿಕ ಕೃತ್ಯ: ವೃದ್ದೆ ಮೇಲೆ ಅತ್ಯಾಚಾರ – ಕೊಲೆ
ಮೃತ ಮಹಿಳೆಯ ಪಕ್ಕದ ಮನೆಯಲ್ಲಿ ವಾಸವಿದ್ದ ಆರೋಪಿ ರಾತ್ರಿ 11 ಗಂಟೆ ಸುಮಾರಿಗೆ ಆಕೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿ, ಕೊಂದಿದ್ದಾನೆ. ಬಳಿಕ ಆಕೆಯೇ ಆತ್ಮಹತ್ಯೆ ಮಾಡಿದಂತೆ ಬಿಂಬಿಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಹಾಗೆಯೇ ತನಿಖೆಯ ದಾಳಿ ತಪ್ಪಿಸಲು ಮೃತಳ ವಿಶೇಷ ಚೇತನ ಮಗನ ಬಟ್ಟೆಗೆ ರಕ್ತ ಮೆತ್ತಿದ್ದ ಎಂದು ದೂರಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ(ಕೊಲೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸೆಕ್ಷನ್ 376A(ಅತ್ಯಾಚಾರ, ಕೊಲೆ) ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಯು ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿಯ ವಿಚಾರನೆ ನಡೆಸಿದ ಹೈಕೋರ್ಟ್ ಮೃತರ ನೆರೆಮನೆಯವ ಸಾಕ್ಷಿದಾರರಿಬ್ಬರು ಘಟನೆಯನ್ನು ನೇರವಾಗಿ ನೋಡಿಲ್ಲ ಎಂಬುದನ್ನು ಗಮನಿಸಿದೆ. ಹಾಗೆಯೇ ಪ್ರಕರಣದ ಪ್ರಮುಖ ಸಾಕ್ಷಿ ವಿಶೇಷ ಚೇತನ, ಆದ್ದರಿಂದ ಹೇಳಿಕೆಯನ್ನು ನಂಬಲಾಗದು ಎಂದಿದೆ.
ವೈದ್ಯರು ನೀಡಿದ ಸಾಕ್ಷ್ಯಗಳನ್ನೂ ಹೈಕೋರ್ಟ್ ಪರಿಶೀಲಿಸಿದ್ದು, ಮೃತ ಮಹಿಳೆಯ ಮಗನ ಐಕ್ಯೂ ಮಟ್ಟ ಸುಮಾರು ಏಳುವರೆ ವಯಸ್ಸಿನದ್ದಾಗಿದೆ ಎಂಬುದನ್ನು ಗಮನಿಸಿದೆ. “ಅಪರಾಧದಲ್ಲಿ ಅರೋಪಿ ಭಾಗಿಯಾಗಿದ್ದನ್ನು ಸಾಬೀತುಪಡಿಸಲು ವೈಜ್ಞಾನಿಕ ಪುರಾವೆಗಳು ಸಹಾಯ ಮಾಡಲ್ಲ. ಬದಲಿಗೆ ಆರೋಪಿ ಮುಗ್ಧ ಎಂದು ಸಾಬೀತುಪಡಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ ಹೈಕೋರ್ಟ್ ಆರೋಪಿಯನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ, ಜೈಲಿನಿಂದ ಬಿಡುಗಡೆ ಮಾಡಲು ನಿರ್ದೇಶಿಸಿದೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.





