ದೇವಾಲಯಗಳಿಗೆ ಹಿಂದುಯತರರು ಪ್ರವೇಶಿಸದಂತೆ ನಿರ್ಬಂಧ ಹೇರುವ ನಿಯಮಗಳ ಬಗ್ಗೆ ಕೇರಳ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ. ಹಿಂದುಯೇತರರು ದೇವಾಲಯ ಪ್ರವೇಶಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ನಿಯಮಗಳು ಸಮುದಾಯಗಳ ನಡುವೆ ಒಡಕು ಹುಟ್ಟುಹಾಕುವ ಸಾಧನಗಳಾಗಲು ಅನುಮತಿಸಬಾರದು ಎಂದು ಹೇಳಿದೆ.
2023ರಲ್ಲಿ ಪತ್ತನಂತಿಟ್ಟದ ಅಡೂರ್ನಲ್ಲಿರುವ ಪಾರ್ಥಸಾರಥಿ ದೇವಾಲಯಕ್ಕೆ ಇಬ್ಬರು ಕ್ರಿಶ್ಚಿಯನ್ ಪುರೋಹಿತರು ಅತಿಥಿಗಳಾಗಿ ಭಾಗವಹಿಸಿದ್ದರು. ದೇವಸ್ಥಾನಕ್ಕೆ ಅವರ ಪ್ರವೇಶವನ್ನು ಪ್ರಶ್ನಿಸಿ ಕುಲನಾಡದ ಸನಿಲ್ ನಾರಾಯಣನ್ ನಂಬೂದಿರಿ ಅವರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. “ಮತ್ತೊಂದು ಧರ್ಮದ ಮುಖಂಡರು ದೇವಾಲಯ ಪ್ರವೇಶಿಸುವುದು ದೇವಾಲಯದ ಸ್ಥಾಪಿತ ವಿಧಿವಿಧಾನಗಳು, ಬಳಕೆಗಳು ಹಾಗೂ ಪದ್ಧತಿಗಳ ಉಲ್ಲಂಘನೆಯೆಂದು ಅರ್ಥೈಸಲಾಗುವುದಿಲ್ಲ” ಎಂದು ಹೇಳಿದೆ.
ಗಮನಾರ್ಹವಾಗಿ, ಕೆಲವು ದೇವಾಲಯಗಳು ಹಿಂದುಯೇತರರಿಗೆ ಪ್ರವೇಶ ನಿರ್ಬಂಧ ಹೇರುವ ನಿಮಯಗಳನ್ನು ಜಾರಿಗೊಳಿಸಿವೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, “ಹಿಂದುಯೇತರರಿಗೆ ಸಾರ್ವಜನಿಕ ಪೂಜಾ ಸ್ಥಳಕ್ಕೆ ಪ್ರವೇಶಿಸುವುದು ‘ಕೇರಳ ಹಿಂದು ಸಾರ್ವಜನಿಕ ಪೂಜಾ ಸ್ಥಳಗಳ ಕಾಯ್ದೆ-1965’ (ಮಾತೃ ಕಾಯ್ದೆ)ಗೆ ಹೊಂದಿಕೆಯಾಗುವುದಿಲ್ಲ. ಕಾಯ್ದೆಯ ಸೆಕ್ಷನ್ 3ಎ (ಪ್ರವೇಶ ಅಧಿಕಾರ), ಅಡಿಯಲ್ಲಿ ಧಾರ್ಮಿಕ ಪೂಜಾ ಸ್ಥಳಕ್ಕೆ ಹಿಂದುಯೇತರರಿಗೆ ಪ್ರವೇಶದ ಕುರಿತು ಚರ್ಚೆಗಳಿದ್ದು, ಅದನ್ನು ಸರ್ಕಾರವು ಪರಿಶೀಲಿಸಬೇಕು” ಎಂದು ಸೂಚಿಸಿದೆ.
“ಕಾನೂನಿನ ಉದ್ದೇಶ ಸಾಮಾಜಿಕ ಸಾಮರಸ್ಯವನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಾಗರಿಕರ ಕಲ್ಯಾಣವನ್ನು ಉತ್ತೇಜಿಸುವುದು. ಕಾನೂನು ಸ್ಥಿರವಲ್ಲ; ಅದು ಬದಲಾಗುತ್ತಿರುವ ಸಮಾಜದ ಅಗತ್ಯತೆಗಳು ಮತ್ತು ವಾಸ್ತವಗಳೊಂದಿಗೆ ವಿಕಸನಗೊಳ್ಳುತ್ತದೆ. ಸಮಾಜವು ಮುಂದುವರೆದು ಹೆಚ್ಚು ಎಲ್ಲರನ್ನೂ ಒಳಗೊಳ್ಳುವಂತೆ, ಶಾಸನಬದ್ಧ ನಿಬಂಧನೆಗಳು ಮತ್ತು ಅಧೀನ ಶಾಸನಗಳನ್ನು ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಮಾಜಿಕ ಒಗ್ಗಟ್ಟನ್ನು ಮುನ್ನಡೆಸುವ ರೀತಿಯಲ್ಲಿ ವ್ಯಾಖ್ಯಾನಿಸಬೇಕು” ಎಂದು ಕೋರ್ಟ್ ಹೇಳಿದೆ.
“ಶಾಸನಗಳು, ನಿಯಮಗಳು ಹಾಗೂ ನಿಬಂಧನೆಗಳು ವಿವಿಧ ಧರ್ಮಗಳು, ಜಾತಿಗಳು, ಉಪಜಾತಿಗಳು ಅಥವಾ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಅಥವಾ ಅಸಂಗತತೆಯನ್ನು ಹುಟ್ಟುಹಾಕುವ ಸಾಧನಗಳಾಗಲು ಅನುಮತಿಸಬಾರದು. ಇದಕ್ಕೆ ವಿರುದ್ಧವಾಗಿ, ಕಾನೂನು ಚೌಕಟ್ಟು ಪರಸ್ಪರ ಗೌರವ ಮತ್ತು ಸಹಬಾಳ್ವೆಯನ್ನು ಬೆಳೆಸುವ ಏಕೀಕೃತ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು” ಎಂದು ಅದು ಹೇಳಿದೆ.





