ಕೇರಳ ಮೂಲ ಸೌಕರ್ಯ ಹೂಡಿಕೆ ನಿಧಿ ಮಂಡಳಿಯ (ಕಿಫ್ಬಿ) ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ದಾಖಲಾಗಿರುವ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಮುಖ್ಯಮಂತ್ರಿ ವಿಜಯನ್ ಜೊತೆಗೆ ಮಾಜಿ ಹಣಕಾಸು ಸಚಿವ ಹಾಗೂ ಸಿಪಿಎಂ ನಾಯಕ ಡಾ. ಥಾಮಸ್ ಐಸಕ್ ಮತ್ತು ಕೆಐಐಎಫ್ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಅಬ್ರಹಾಂ ಅವರಿಗೂ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್
ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 2019ರಲ್ಲಿ ಕೆಐಐಎಫ್ಬಿ 2,150 ಕೋಟಿ ರೂಪಾಯಿ ಸಂಗ್ರಹಿಸಲು ಮಸಾಲಾ ಬಾಂಡ್ (ವಿದೇಶದಲ್ಲಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ಆವೃತ್ತಿ ಮಾಡುವ ಬಾಂಡ್ಗಳು) ಹೊರಡಿಸಿತ್ತು. ಈ ವಹಿವಾಟಿನಲ್ಲಿ ಅಕ್ರಮಗಳಿವೆ ಎಂಬ ಇಡಿ ವರದಿಯ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA)ಯಡಿ ಪ್ರಕರಣವನ್ನು ಪರಿಗಣಿಸುತ್ತಿರುವ ಅಧಿಕಾರಿಗಳು ಈ ನೋಟಿಸ್ಗಳನ್ನು ಜಾರಿಗೊಳಿಸಿದ್ದಾರೆ.
ಈ ಹಿಂದೆ ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲ (ಸಿಎಜಿ) ಕೂಡ ಕೆಐಐಎಫ್ಬಿ ಮಸಾಲಾ ಬಾಂಡ್ ವಹಿವಾಟು ಸಂವಿಧಾನ ವಿರೋಧಿಯೆಂದು ಟೀಕಿಸಿ, ಗಂಭೀರ ಅಕ್ರಮಗಳನ್ನು ಎತ್ತಿ ತೋರಿಸಿದ್ದರು.
ಪ್ರಸ್ತುತ ಯುಎಇ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬೆಳವಣಿಗೆ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.





