ಮಣಿಪುರ ರಾಜಧಾನಿ ಇಂಫಾಲ್ನಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಹತ್ಯೆಯನ್ನು ವಿರೋಧಿಸಿ ಮಂಗಳವಾರ (ಸೆ.26) ನಡೆದ ಬೃಹತ್ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
17 ವರ್ಷದ ಬಾಲಕಿ ಹಿಜಾಮ್ ಲಿಂಥೋಯಿಂಗಂಬಿ ಮತ್ತು 20 ವರ್ಷದ ಫಿಜಾಮ್ ಹೇಮ್ಜಿತ್ ಅವರ ಭಾವಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಸಮಸ್ಯೆ ಶುರುವಾಗಿದೆ. ಜನಾಂಗೀಯ ಹಿಂಸಾಚಾರವು ಉತ್ತುಂಗದಲ್ಲಿದ್ದ ಜುಲೈ ಆರಂಭದಲ್ಲಿ ಇವರಿಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಒಂದು ಭಾವಚಿತ್ರದಲ್ಲಿ, ಇಬ್ಬರು ವಿದ್ಯಾರ್ಥಿಗಳು ಹುಲ್ಲಿನ ಕಾಂಪೌಂಡ್ ಮೇಲೆ ಕುಳಿತಿದ್ದು, ಇವರಿಬ್ಬರ ಹಿಂದೆ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ನಿಂತಿದ್ದಾರೆ. ಇನ್ನೊಂದು ಭಾವಚಿತ್ರದಲ್ಲಿ ವಿದ್ಯಾರ್ಥಿ ಹೇಮ್ಜಿತ್ನ ತಲೆಯು ಕಾಣೆಯಾಗಿರುವಂತೆ ಇಬ್ಬರ ಮೃತದೇಹವನ್ನು ತೋರಿಸಲಾಗಿದೆ.
ಹತ್ಯೆಯನ್ನು ಖಂಡಿಸಿ ಮತ್ತು ಕೊಲೆಯಾದ ಇಬ್ಬರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಮಂಗಳವಾರ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಪ್ರತಿಭಟನಾಕಾರರು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ, ಅವರನ್ನು ಚದುರಿಸಲು ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ ಅಶ್ರುವಾಯು ಶೆಲ್ ಮತ್ತು ಸ್ಪೋಕ್ ಬಾಂಬ್ಗಳನ್ನು ಹಾರಿಸಿದರು. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಚುನಾವಣಾ ಪ್ರಚಾರದಲ್ಲಿ ಸಿಎಂ ಶಿವರಾಜ್ ಸಿಂಗ್ ಮೂಲೆಗುಂಪು; ಟಿಕೆಟ್ ನಿರಾಕರಣೆ ಸಾಧ್ಯತೆ?
ಭಾವಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮುಖ್ಯಮಂತ್ರಿಗಳ ಸಚಿವಾಲಯವು ಸೋಮವಾರ ರಾತ್ರಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಸಂಯಮದಿಂದ ಇರಬೇಕು ಮತ್ತು ತನಿಖೆಯನ್ನು ನಿರ್ವಹಿಸಲು ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದೆ.
“ಇಬ್ಬರು ವಿದ್ಯಾರ್ಥಿಗಳ ಭಾವಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ರಾಜ್ಯದ ಜನರ ಇಚ್ಛೆಯಂತೆ ಈ ಪ್ರಕರಣವನ್ನು ಈಗಾಗಲೇ ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂಬುದನ್ನು ಗಮನಿಸಬಹುದು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ಇವರಿಬ್ಬರ ನಾಪತ್ತೆಯ ಸುತ್ತಲಿನ ಸಂದರ್ಭಗಳನ್ನು ನಿರ್ಧರಿಸಲು ಮತ್ತು ಅವರನ್ನು ಹತ್ಯೆ ಮಾಡಿದವರನ್ನು ಗುರುತಿಸಲು ಸಂಸ್ಥೆಯು ಪೊಲೀಸರ ನೆರವನ್ನು ಕೋರಿದೆ.
ಏತನ್ಮಧ್ಯೆ, ರಾಜ್ಯ ಸರ್ಕಾರ ಬುಧವಾರದಿಂದ ಶುಕ್ರವಾರದವರೆಗೆ ಎಲ್ಲ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚಲು ಆದೇಶಿಸಲಾಗಿದೆ.





