ಕರ್ನೂಲ್ ಬಸ್ ದುರಂತ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಹೊಸ ಮಾಹಿತಿಯನ್ನು ಹೊರಬಿದಿದ್ದು, ಬಸ್ನಲ್ಲಿ ಸುಮಾರು 234 ಸ್ಮಾರ್ಟ್ಫೋನ್ಗಳನ್ನು ಸಾಗಿಸಲಾಗುತ್ತಿತ್ತು. ಅವುಗಳ ಬ್ಯಾಟರಿಗಳು ಸ್ಪೋಟಗೊಂಡಿದ್ದು, ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿವೆ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.
ಬಸ್ನಲ್ಲಿ ರಿಯಲ್ಮಿ ಕಂಪನಿಯ 234 ಹೊಸ ಸ್ಮಾರ್ಟ್ಫೋನ್ಗಳನ್ನು ಸಾಗಿಸಲಾಗುತ್ತಿತ್ತು. ಇವುಗಳನ್ನು ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್ ಅವರು ಬೆಂಗಳೂರಿಗೆ ರವಾನಿಸುತ್ತಿದ್ದರು. ಬಸ್ ಅಪಘಾತಕ್ಕೀಡಾದಾಗ, ಈ ಫೋನ್ಗಳ ಬ್ಯಾಟರಿಗಳು ಸ್ಫೋಟಗೊಂಡಿವೆ ಎಂದು ತಜ್ಞರು ಸೂಚಿಸಿದ್ದಾರೆ.
ಫೋನ್ಗಳು ಬೆಂಕಿಗೆ ಆಹುತಿಯಾದಾಗ ಬ್ಯಾಟರಿಗಳು ಸ್ಫೋಟಗೊಳ್ಳುವುದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶ ಅಗ್ನಿಶಾಮಕ ಸೇವೆಗಳ ಇಲಾಖೆಯ ಮಹಾನಿರ್ದೇಶಕ ಪಿ. ವೆಂಕಟರಾಮನ್ ಹೇಳುವಂತೆ; ಸ್ಮಾರ್ಟ್ಫೋನ್ಗಳ ಸ್ಫೋಟದ ಜೊತೆಗೆ, ಬಸ್ನ ಹವಾನಿಯಂತ್ರಣ (ಎಸಿ) ವ್ಯವಸ್ಥೆಗೆ ಬಳಸಲಾದ ವಿದ್ಯುತ್ ಬ್ಯಾಟರಿಗಳು ಸಹ ಸಿಡಿದಿವೆ. ಪರಿಣಾಮವಾಗಿ, ಶಾಖವು ತುಂಬಾ ತೀವ್ರಗೊಂಡಿದ್ದು, ಬಸ್ನ ತಳಕ್ಕೆ ಹಾಸಲಾಗಿದ್ದ ಅಲ್ಯೂಮಿನಿಯಂ ಪದರಗಳು ಕರಗಿಹೋಗಿವೆ ಎಂದು ಹೇಳಿದ್ದಾರೆ.
ಬೈಕ್ಗೆ ಬಸ್ ಡಿಕ್ಕಿಹೊಡೆದಾಗ, ಬಸ್ನ ಕೆಳಗೆ ಬೈಕ್ ಸಿಕ್ಕಿಕೊಂಡಿದೆ. ಈ ವೇಳೆ, ಇಂಧನ ಸರಬರಾಜು ಪೈಪ್ಗೆ ಹಾನಿಯಾಗಿದ್ದು, ಡೀಸೆಲ್ ಚಿಮ್ಮಲು ಆರಂಭಿಸಿದೆ. ಬೆಂಕಿ ಕಿಡಿ ಡೀಸೆಲ್ಗೆ ತಗುಲಿದ್ದು, ಬಸ್ ಮುಂಭಾಗದಲ್ಲಿ ಮೊದಲಿಗೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ, ಇಡೀ ಬಸ್ಗೆ ಬೆಂಕಿ ವ್ಯಾಪಿಸಿದೆ ಎಂದು ಅವರು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ತೆರಿಗೆ ಹಂಚಿಕೆ | ಕರ್ನಾಟಕಕ್ಕೆ ಮತ್ತೆ ಕಾದಿದೆಯಾ ಭಾರೀ ಅನ್ಯಾಯ? ಕೇಂದ್ರದ ಸಮರ್ಥನೆಗೆ ರಾಜ್ಯ ಬಿಜೆಪಿ ಸಿದ್ದ
ವಾಹನದ ತೂಕವನ್ನು ಕಡಿಮೆ ಮಾಡಲು ಮತ್ತು ವೇಗವನ್ನು ಹೆಚ್ಚಿಸಲು ಸಾಮಾನ್ಯವಾಗಿ ಬಳಸಲಾಗುವ ಕಬ್ಬಿಣದ ಬದಲಿಗೆ ಹಗುರವಾದ ಅಲ್ಯೂಮಿನಿಯಂ ವಸ್ತುಗಳನ್ನು ಬಳಸಲಾಗಿದೆ. ಇದು, ತುರ್ತು ಸಮಯದಲ್ಲಿ ಹಾನಿ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಶುಕ್ರವಾರ ಮುಂಜಾನೆ ಕರ್ನೂಲ್ ಬಳಿ, ಬೈಕ್ಗೆ ಡಿಕ್ಕಿಹೊಡೆದಿತ್ತು. ಬೈಕ್ ಬಸ್ನ ಅಡಿಭಾಗಕ್ಕೆ ಸಿಕ್ಕಿಕೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡು ಇಡೀ ಬಸ್ ಸುಟ್ಟುಹೋಗಿದೆ. ದುರಂತದಲ್ಲಿ 19 ಪ್ರಯಾಣಿಕರು ಜೀವ ಕಳೆದುಕೊಂಡು, ಸಜೀವದಹನವಾಗಿದ್ದಾರೆ.




