ಲಡಾಖ್ನಲ್ಲಿ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟ ಮುಂದುವರೆದಿದ್ದು, ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಲ್ಲಿ ಮಾರ್ಚ್ 16ರಂದು ರ್ಯಾಲಿ ನಡೆಯಲಿದೆ. ಮಾರ್ಚ್ 12ರಂದು ಈ ಹೋರಾಟವನ್ನು ನಿಗದಿಪಡಿಸಲಾಗಿತ್ತು. ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಮತ್ತು ಪರಿಸರವಾದಿ ಸೋನಮ್ ವಾಂಗ್ಚುಕ್ ಬಂಧನವನ್ನು ವಿರೋಧಿಸಿ, ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಈ ಮೆರವಣಿಗೆ ನಡೆಸಲಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿರುವ ಲಡಾಖ್ ಹೋರಾಟಗಾರ, ಕೆಡಿಎ ಸದಸ್ಯ ಸಜ್ಜಾದ್ ಕಾರ್ಗಿಲಿ, “ಮಾರ್ಚ್ 16ರಂದು ರ್ಯಾಲಿ ನಡೆಯಲಿದೆ. ಈ ಸಂಬಂಧ ನಾಳೆ (ಮಾರ್ಚ್ 12) ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಗುತ್ತದೆ. ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು, ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?
ಸಿಂಗೇ ನಮ್ಗ್ಯಾಲ್ ಚೌಕ್ನಿಂದ ಲೇಹ್ನ ಪೋಲೋ ಮೈದಾನಕ್ಕೆ ಮೆರವಣಿಗೆ ನಡೆಸಲಿದ್ದಾರೆ. ಅಲ್ಲಿ ನಾಯಕರು ಬಹಿರಂಗ ಸಭೆ ನಡೆಸಿ ಜನರನ್ನು ಉದ್ದೇಶಿ ಮಾತನಾಡಲಿದ್ದಾರೆ.
2025ರ ಸೆಪ್ಟೆಂಬರ್ 24ರಂದು ಲೇಹ್ನಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 80 ಮಂದಿ ಗಾಯಗೊಂಡಿದ್ದಾರೆ. ಇದಾದ ಬಳಿಕ ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಲಡಾಖ್ನ ಪ್ರಸಿದ್ಧ ಶಿಕ್ಷಣ ಸುಧಾರಕ, ಇಂಜಿನಿಯರ್, ಪರಿಸರವಾದಿ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸೋನಮ್ ವಾಂಗ್ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಬಂಧಿಸಲಾಗಿದೆ. ಇಂದಿಗೂ ಸೋನಮ್ ಅವರು ರಾಜಸ್ಥಾನದ ಜೋಧಪುರ ಜೈಲಿನಲ್ಲೇ ಇದ್ದಾರೆ. ಅವರ ಪತ್ನಿ ಗೀತಾಂಜಲಿ ಅಂಗಮೋ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಈ ಹಿಂಸಾಚಾರ ನಡೆದ ಬಳಿಕ ಮೊದಲ ಬಾರಿಗೆ ರ್ಯಾಲಿ ನಡೆಸಲಾಗುತ್ತಿದೆ.
ಇನ್ನು ಸೆಪ್ಟೆಂಬರ್ 24ರಂದು ಲೇಹ್ನಲ್ಲಿ ನಡೆದ ಹಿಂಸಾಚಾರದ ತನಿಖೆಗಾಗಿ ಗೃಹ ವ್ಯವಹಾರಗಳ ಸಚಿವಾಲಯವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ ಎಸ್ ಚೌಹಾಣ್ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಆಯೋಗವನ್ನು ನೇಮಿಸಿದ್ದು, ತನಿಖೆ ಮುಂದುವರೆದಿದೆ.





