ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಬಹುಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರಾಗಿದ್ದ ಪ್ರಮುಖ ಆರೋಪಿ ಹಾಗೂ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾಗೆ ಸ್ಥಳೀಯ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಪೋಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿಗೆ ಜಾಮೀನು ಲಭಿಸಿದ್ದು, ಪ್ರಬಲ ಸಾಕ್ಷ್ಯಾಧಾರಗಳ ಕೊರತೆಯನ್ನು ನ್ಯಾಯಾಲಯ ಎತ್ತಿ ತೋರಿಸಿದೆ. ಸುಮಾರು 10 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ರಿವೆಲ್ಟೊ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದ ಆರೋಪ ಶಿವಂ ಮಿಶ್ರಾ ಮೇಲಿತ್ತು.
ಘಟನೆಯು ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾನ್ಪುರದ ವಿಐಪಿ ರಸ್ತೆಯಲ್ಲಿ ನಡೆದಿತ್ತು. ಅತಿವೇಗದಲ್ಲಿದ್ದ ಐಷಾರಾಮಿ ಕಾರು ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಹಾಗೂ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಡಿವೈಡರ್ಗೆ ಅಪ್ಪಳಿಸಿ ನಿಂತಿತ್ತು. ಈ ಅಪಘಾತದಲ್ಲಿ ಗಾಯಗೊಂಡ ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ ಎಂಬುವವರು ದೂರು ದಾಖಲಿಸಿದ್ದರು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಶಿವಂ ಪತ್ತೆಗೆ 5 ತಂಡಗಳನ್ನು ರಚಿಸಲಾಗಿತ್ತು. ಅಂತಿಮವಾಗಿ ಬಂಧನಕ್ಕೊಳಗಾದ ಶಿವಂ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕೋರ್ಟ್ಗೆ ಹಾಜರುಪಡಿಸಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!
ನ್ಯಾಯಾಲಯದಲ್ಲಿ ಪೊಲೀಸರು ಆರೋಪಿ ಶಿವಂ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದರು. ಆದರೆ, ನ್ಯಾಯಾಲಯವು ಪೊಲೀಸರ ಈ ಮನವಿಯನ್ನು ತಿರಸ್ಕರಿಸಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ತನಿಖೆ ಮುಂದುವರಿಯುವ ಷರತ್ತಿನೊಂದಿಗೆ 20,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿತು.
ಈ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸಲು ಹಲವು ನಾಟಕೀಯ ಪ್ರಯತ್ನಗಳು ನಡೆದಿದ್ದವು. ಅಪಘಾತದ ನಂತರ ಮೋಹನ್ ಎಂಬ ವ್ಯಕ್ತಿ ತಾನೇ ಕಾರು ಚಲಾಯಿಸುತ್ತಿದ್ದೆ ಎಂದೂ, ಶಿವಂಗೆ ಫಿಟ್ಸ್ (seizure) ಬಂದಿತ್ತು ಎಂಬ ಕಥೆಯನ್ನು ಪೊಲೀಸರ ಮುಂದೆ ಹೇಳಿದ್ದ. ಆದರೆ, ಪೊಲೀಸರು ಹಾಗೂ ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿದವು. ಇದಲ್ಲದೆ, ಉದ್ಯಮಿ ಕೆ.ಕೆ. ಮಿಶ್ರಾ ಕೂಡ ತಮ್ಮ ಮಗ ಕಾರು ಚಲಾಯಿಸುತ್ತಿರಲಿಲ್ಲ ಎಂದು ವಾದಿಸಿದ್ದರು ಮತ್ತು ಅಪಘಾತದ ಸ್ಥಳದಲ್ಲಿ ಬೌನ್ಸರ್ಗಳು ಕಾರಿನ ನಂಬರ್ ಪ್ಲೇಟ್ ಕಿತ್ತುಹಾಕಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಆರೋಪಿಗೆ ಅಷ್ಟು ಬೇಗ ಜಾಮೀನು ಸಿಕ್ಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. “ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯವೇ?” ಎಂದು ನೆಟ್ಟಿಗರು ವ್ಯವಸ್ಥೆಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. “ಸಾಮಾನ್ಯ ವ್ಯಕ್ತಿಯೊಬ್ಬ ಸಣ್ಣ ವಾಹನದಲ್ಲಿ ಅಪಘಾತವೆಸಗಿದ್ದರೆ ಇಷ್ಟೊತ್ತಿಗೆ ಕಂಬಿ ಹಿಂದೆ ಕೊಳೆಯುತ್ತಿದ್ದ. ಆದರೆ, 10 ಕೋಟಿ ಬೆಲೆಯ ಕಾರು ಚಲಾಯಿಸಿ, ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡಿದ ಸಿರಿವಂತನ ಮಗನಿಗೆ ಠಾಣೆಗೆ ಹೋದ ವೇಗದಲ್ಲೇ ರಾಜಾತಿಥ್ಯದೊಂದಿಗೆ ಜಾಮೀನು ಸಿಗುತ್ತದೆ,” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣವಿದ್ದವರ ಮುಂದೆ ಸಾಕ್ಷ್ಯಾಧಾರಗಳು ಮೌನವಾಗುತ್ತವೆಯೇ ಮತ್ತು ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.





