ಗಾಯಕ, ರ್ಯಾಪರ್ ಬಾದ್ಶಾ ಅವರ ಹೊಸ ಹಾಡು ‘ಟಟೀರಿ’ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಬಗ್ಗೆ ಆಕ್ಷೇಪಾರ್ಹ ಸಾಹಿತ್ಯವಿದೆ ಎಂದು ಆರೋಪ ಕೇಳಿಬಂದ ಕೆಲವು ದಿನಗಳ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾದ್ಶಾ ಅವರಿಗೆ ಜೀವ ಬೆದರಿಕೆ ಹಾಕಿದೆ.
ಈ ಬಗ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, “ಗಾಯಕ ಬಾದ್ಶಾ, ನೀವು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸಿದ್ದೀರಿ. 2024ರಲ್ಲಿ ನಿಮ್ಮ ಕ್ಲಬ್ನಲ್ಲಿ ನಾವು ನಿಮಗೆ ಟ್ರೇಲರ್ ತೋರಿಸಿದ್ದೇವೆ. ಮುಂದಿನ ಬಾರಿ ನಾವು ನಿಮ್ಮ ಹಣೆಗೆ ನೇರವಾಗಿ ಗುಂಡು ಹಾರಿಸುತ್ತೇವೆ” ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಇದನ್ನು ಓದಿದ್ದೀರಾ? ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ; ಝಡ್ ಭದ್ರತೆ ಕೋರಿದ ಬಿಹಾರ ಸಂಸದ ಪಪ್ಪು ಯಾದವ್
2024ರಲ್ಲಿ ಚಂಡೀಗಢದ ಗಾಯಕ ಮತ್ತು ರ್ಯಾಪರ್ ಬಾದ್ಶಾ ಒಡೆತನದ ಸೆವಿಲ್ಲೆ ಬಾರ್ ಮತ್ತು ಲೌಂಜ್ ಕ್ಲಬ್ನ ಹೊರಗೆ ಸ್ಫೋಟ ಸಂಭವಿಸಿದೆ. ಇದಕ್ಕೆ ಲಾರೆನ್ಸ್ ಬಿಷ್ಣೋಯ್ಗೆ ಸಂಬಂಧ ಹೊಂದಿರುವ ಕೆನಡಾ ಮೂಲದ ಭಯೋತ್ಪಾದಕ ಗೋಲ್ಡಿ ಬ್ರಾರ್ ಹೊಣೆ ಹೊತ್ತಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯರು ಎಂದು ಹೇಳಲಾದ ರಂದೀಪ್ ಮಲಿಕ್ ಮತ್ತು ಅನಿಲ್ ಪಂಡಿತ್, ಪಾಣಿಪತ್ನ ಕಚೇರಿಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಟಟೀರಿ ಹಾಡಿನ ವಿವಾದಕ್ಕೆ ಬಾದ್ಶಾ ಕ್ಷಮೆ
ಬಾದ್ಶಾ ಅವರ ಇತ್ತೀಚಿನ ಹರ್ಯಾಣವಿ ಹಾಡು ‘ಟಟೀರಿ’ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಈ ಹಾಡು ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿದೆ. ಪಂಚಕುಲ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಬಾದ್ಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಾಡನ್ನು ಬಾದ್ಶಾ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ವೈರಲ್ ಆಗಿದೆ. ಕಳೆದ ವಾರ, ಬಾದ್ಶಾ ಅವರು ಕ್ಷಮೆಯಾಚಿಸಿದ್ದು ಸದ್ಯ ಹಾಡನ್ನು ತೆಗೆದುಹಾಕಿದ್ದಾರೆ.
“ನನ್ನ ಹೊಸ ಹಾಡು ಬಿಡುಗಡೆಯಾಗಿದೆ. ಅದರ ಸಾಹಿತ್ಯ ಮತ್ತು ದೃಶ್ಯ ಪ್ರಾತಿನಿಧ್ಯವು ಬಹಳಷ್ಟು ಜನರಿಗೆ, ವಿಶೇಷವಾಗಿ ಹರಿಯಾಣದವರಿಗೆ, ಬಹಳಷ್ಟು ನೋವುಂಟು ಮಾಡಿದೆ ಎಂದು ನಾನು ನೋಡುತ್ತಿದ್ದೇನೆ. ಮೊದಲನೆಯದಾಗಿ, ನಾನು ಹರಿಯಾಣದವನು ಎಂದು ಹೇಳಲು ಬಯಸುತ್ತೇನೆ. ನನ್ನನ್ನು ತಿಳಿದಿರುವವರು ನನ್ನ ಸಂಪೂರ್ಣ ಗುರುತು ಅದರ ಮೇಲೆ ನಿಂತಿದೆ ಎಂದು ದೃಢೀಕರಿಸುತ್ತಾರೆ. ನಾನು ಹೆಮ್ಮೆಯ ಹರ್ಯಾಣವಿ. ಹರಿಯಾಣದ ಯಾವುದೇ ಮಹಿಳೆಯರು ಅಥವಾ ಮಕ್ಕಳ ಬಗ್ಗೆ ಈ ರೀತಿ ಮಾತನಾಡುವ ಉದ್ದೇಶ ಅಥವಾ ಗುರಿ ನನಗೆ ಎಂದಿಗೂ ಇರಲಿಲ್ಲ” ಎಂದು ಹೇಳಿದ್ದಾರೆ.





