ಭಾರತದ ಜಾಹೀರಾತು ಲೋಕದ ಪ್ರಮುಖರಾಗಿದ್ದ ಪಿಯೂಷ್ ಪಾಂಡೆ (70) ಅವರು ಶುಕ್ರವಾರ ನಿಧನರಾದರು. ಫೆವಿಕಾಲ್, ವೊಡಾಫೋನ್ನ ಪಗ್ ಜಾಹೀರಾತು ಮತ್ತು “ಅಬ್ ಕಿ ಬಾರ್, ಮೋದಿ ಸರ್ಕಾರ್” ಘೋಷವಾಕ್ಯದಂತಹ ಪ್ರಮುಖ ಜಾಹೀರಾತುಗಳಿಗೆ ಹೆಸರಾದ ಅವರು, ಭಾರತೀಯ ಜಾಹೀರಾತು ಕ್ಷೇತ್ರದಲ್ಲಿ ಪ್ರಮುಖ ಸಾಧನೆಗಳನ್ನು ಮಾಡಿದ್ದರು.
ಕ್ಯಾಡ್ಬರಿಯ “ಕುಚ್ ಖಾಸ್ ಹೈ”, ಏಷಿಯನ್ ಪೇಂಟ್ಸ್ನ “ಹರ್ ಖುಶಿ ಮೇ ರಂಗ್ ಲಾಯೆ”, ಫೆವಿಕಾಲ್ನ ಸ್ಮರಣೀಯ ಜಾಹೀರಾತುಗಳು ಮತ್ತು ವೊಡಾಫೋನ್ನ ಪಗ್ ಜಾಹೀರಾತುಗಳನ್ನು ನಿರ್ಮಿಸಿ ಹೆಸರುಗಳಿಸಿದ್ದರು. 2014ರ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ರಚಿಸಿದ “ಅಬ್ ಕಿ ಬಾರ್, ಮೋದಿ ಸರ್ಕಾರ್” ಘೋಷವಾಕ್ಯ ರಾಜಕೀಯ ಕ್ಷೇತ್ರದಲ್ಲೂ ದೊಡ್ಡ ಮನ್ನಣೆ ಗಳಿಸಿಕೊಟ್ಟಿತ್ತು. ಬಾಲಮುರಳಿ ಕೃಷ್ಣನ್ ಅವರ ಎಲ್ಲ ಭಾಷೆಗಳನ್ನು ಒಳಗೊಂಡ ‘ಮಿಲೆ ಸುರ್ ಮೇರಾ ತುಮಾರಾ’ ಜಾಹೀರಾತನ್ನು ಕೂಡ ಪಿಯೂಷ್ ಪಾಂಡೆ ರಚಿಸಿದ್ದರು.
ತಮ್ಮ ಖ್ಯಾತಿಯ ಹೊರತಾಗಿಯೂ, ಪಾಂಡೆ ತಮ್ಮನ್ನು ಜಾಹೀರಾತು ತಂಡದ ಒಬ್ಬ ಸದಸ್ಯನಾಗಿಯೇ ಗುರುತಿಸಿಕೊಂಡಿದ್ದರು. ಕ್ರಿಕೆಟ್ನ ಉತ್ಸಾಹಿಯಾಗಿದ್ದ ಅವರು ತಮ್ಮ ಜಾಹೀರಾತುಗಳನ್ನು ಕ್ರಿಕೆಟ್ ತಂಡಕ್ಕೆ ಹೋಲಿಸಿದರು. “ಬ್ರಿಯಾನ್ ಲಾರಾ ಒಬ್ಬನೇ ವೆಸ್ಟ್ ಇಂಡೀಸ್ಗೆ ಗೆಲುವು ತರಲಾರ,” ಎಂದು ಅವರು ಒಮ್ಮೆ ಹೇಳಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಲಸಗಾರ ಕಂದಾಯ ಸಚಿವರು ಭಕ್ತರ ಕ್ಯೂ ಕಾಯಲು ನಿಲ್ಲುವುದು ತರವಲ್ಲ
1955ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಅವರು ತಮ್ಮ ವಿದ್ಯಾಭ್ಯಾಸದ ನಂತರ ಒಗಿಲ್ವಿ ಇಂಡಿಯಾ ಜಾಹೀರಾತು ಕಂಪನಿಗೆ 1982ರಲ್ಲಿ ಕಾಪಿರೈಟರ್ ಆಗಿ ಸೇರಿದರು. ವೃತ್ತಿ ಜೀವನ ಪ್ರಾರಂಭಿಸುವ ಮುನ್ನ ರಾಜಸ್ಥಾನದ ರಣಜಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಆಗ ಇಂಗ್ಲಿಷ್ನಿಂದ ಆವೃತವಾಗಿದ್ದ ಜಾಹೀರಾತು ಜಗತ್ತನ್ನು ಬದಲಾಯಿಸಿದರು. ಹಿಂದಿ ಮತ್ತು ಭಾರತೀಯ ಆಡುಮಾತುಗಳನ್ನು ಜಾಹೀರಾತುಗಳಲ್ಲಿ ತಂದು, ಹಾಸ್ಯ, ಸೌಮ್ಯತೆ ಮತ್ತು ಮಾನವೀಯತೆಯಿಂದ ಕೂಡಿದ ಕಥನಗಳನ್ನು ರಚಿಸಿದ್ದರು.
ಒಗಿಲ್ವಿ ಇಂಡಿಯಾದ ಅಧ್ಯಕ್ಷರಾಗಿ, ಅವರು ಏಜೆನ್ಸಿಯನ್ನು ವಿಶ್ವದ ಅತ್ಯಂತ ಪ್ರಶಸ್ತಿ ಪಡೆದ ಏಜೆನ್ಸಿಗಳಲ್ಲಿ ಒಂದನ್ನಾಗಿ ಮಾಡಿದರು. 2018ರಲ್ಲಿ, ತಮ್ಮ ಸಹೋದರ, ಚಿತ್ರ ನಿರ್ಮಾಪಕ ಪ್ರಸೂನ್ ಪಾಂಡೆ ಅವರೊಂದಿಗೆ ಜಾಹೀರಾತು ಕ್ಷೇತ್ರದ ಅತ್ಯುನ್ನತ ಕಾನ್ಸ್ ಲಯನ್ಸ್ (Cannes Lions) ಉತ್ಸವದಲ್ಲಿ ನೀಡುವ Lion of St. Mark ಗೌರವವನ್ನು ಪಡೆದ ಮೊದಲ ಏಷ್ಯನ್ನರೆಂಬ ಖ್ಯಾತಿ ಪಿಯೂಷ್ ಪಾಂಡೆ ಅವರದಾಗಿತ್ತು.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಪಾಂಡೆಯವರ ನಿಧನಕ್ಕೆ ಸಂತಾಪ ಸೂಚಿಸಿ, ಎಕ್ಸ್ನಲ್ಲಿ ಬರೆದಿದ್ದಾರೆ: “ಪಿಯೂಷ್ ಪಾಂಡೆ ಜಾಹೀರಾತು ಜಗತ್ತಿನಲ್ಲಿ ಒಂದು ವಿಶಿಷ್ಟ ವ್ಯಕ್ತಿತ್ವವಾಗಿದ್ದರು. ಅವರ ಸೃಜನಶೀಲತೆಯು ಕಥನಕ್ಕೆ ಹೊಸ ರೂಪ ನೀಡಿತು. ನನಗೆ ಅವರು ಒಬ್ಬ ಉತ್ತಮ ಸ್ನೇಹಿತರಾಗಿದ್ದರು, ಅವರ ಪ್ರಾಮಾಣಿಕತೆ, ಸೌಮ್ಯತೆ ಮತ್ತು ಹಾಸ್ಯದಿಂದ ಹೆಸರುಗಳಿಸಿದ್ದರು. ಅವರ ಜೊತೆಗಿನ ಸಂವಾದಗಳು ಎಂದಿಗೂ ಮರೆಯಲಾಗದವು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು” ಎಂದಿದ್ದಾರೆ.





