ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರಾಜಧಾನಿಯಾಗಿರುವ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯಡಿ ಸೇರಿಸಿ, ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ನೇಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಮಸೂದೆಯ್ನು ರೂಪಿಸುತ್ತಿದೆ. ಕೇಂದ್ರ ಸರ್ಕಾರದ ಮಸೂದೆ ಮತ್ತು ಪ್ರಸ್ತಾವವನ್ನು ಪಂಜಾಬ್ ಸರ್ಕಾರ ವಿರೋಧಿಸಿದೆ.
ಚಂಡೀಗಢವು ಕೇಂದ್ರಾಡಳಿತ ಪ್ರದೇಶವಾಗಿದೆ. ಇಲ್ಲಿ, ಪಂಜಾಬ್ ರಾಜ್ಯಪಾಲರು ಆಡಳಿತ ನಡೆಸುತ್ತಿದ್ದಾರೆ. ಆದಾಗ್ಯೂ, ರಾಷ್ಟ್ರಪತಿ ಮೂಲಕ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ನೇಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಂಬರ್ 1ರಿಂದ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಸಂವಿಧಾನ 131 ತಿದ್ದುಪಡಿ ಮಸೂದೆ-2025ಅನ್ನು ಮಂಡಿಸಿ, ಅನುಮೋದನೆ ಪಡೆಯಲು ಸಿದ್ಧತೆ ನಡೆಸಿದೆ.
ಕೇಂದ್ರದ ಪ್ರಸ್ತಾಪಕ್ಕೆ ಪಂಜಾಬ್ನ ಆಡಳಿತಾರೂಢ ಎಎಪಿ ಮತ್ತು ವಿಪಕ್ಷ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿವೆ. ಹೊಸ ಪ್ರಸ್ತಾವವು ಪಂಜಾಬ್ನ ಹಕ್ಕನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
“ಕೇಂದ್ರ ಸರ್ಕಾರವು ರೂಪಿಸಿರುವ ‘ಸಂವಿಧಾನ (131 ನೇ ತಿದ್ದುಪಡಿ) ಮಸೂದೆ’ಯನ್ನು ನಾವು ಖಂಡಿಸುತ್ತೇವೆ. ಪ್ರಸ್ತಾವಿತ ತಿದ್ದುಪಡಿ ಪಂಜಾಬ್ನ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ” ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
“ಪ್ರಸ್ತಾವಿತ ಮಸೂದೆಯು ಪಂಜಾಬ್ ರಾಜಧಾನಿಯ ಮೇಲಿನ ಐತಿಹಾಸಿಕ, ಸಾಂವಿಧಾನಿಕ ಹಾಗೂ ಭಾವನಾತ್ಮಕ ಹಕ್ಕನ್ನು ದುರ್ಬಲಗೊಳಿಸುತ್ತದೆ. ಮಸೂದೆಯ ವಿರುದ್ಧ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು” ಎಂದು ಕಾಂಗ್ರೆಸ್ನ ಹಿರಿಯ ನಾಯಕ, ವಿಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಹೇಳಿದ್ದಾರೆ.




