ಗುಜರಾತ್ ರಾಜ್ಯದಲ್ಲಿ ಕಟ್ಟುನಿಟ್ಟಾದ ಪಾನ ನಿರೋಧ ನಿಷೇಧ ನೀತಿಯನ್ನು ಭಾಗಶಃ ರದ್ದುಗೊಳಿಸಿ ‘ಗಿಫ್ಟ್ ಸಿಟಿ’ ಯೋಜನೆಯಡಿ ಮದ್ಯವನ್ನು ಅನುಮತಿಸುವ ಬಿಜೆಪಿ ಸರ್ಕಾರದ ನಿರ್ಧಾರದ ಕುರಿತು ವಿರೋಧ ಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರವು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಯೋಜನೆಯಡಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.
ಯುವಕರನ್ನು ಹಾಳು ಮಾಡುವ ನಿರ್ಧಾರ ದುರದೃಷ್ಟಕರ ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಹೇಳಿದರೆ, ಬಿಜೆಪಿಯು ಈ ಪ್ರದೇಶದಲ್ಲಿ ವ್ಯಾಪಾರದ ಅಭಿವೃದ್ಧಿಗೆ ಸೂಕ್ತ ವಾತಾವರಣವನ್ನು ಒದಗಿಸುವುದಾಗಿದೆ ಎಂದು ಸಮರ್ಥಿಸಿಕೊಂಡಿದೆ.
“ಇದು ಅತ್ಯಂತ ದುರದೃಷ್ಟಕರ ನಿರ್ಧಾರ. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪಾನ ನಿಷೇಧವನ್ನು ತೆಗೆದುಹಾಕಲು ಬಯಸಿದೆ ಮತ್ತು ಅವರು ಅದನ್ನು ಗಿಫ್ಟ್ ಸಿಟಿಯೊಂದಿಗೆ ಪ್ರಾರಂಭಿಸಿದ್ದಾರೆ. ನಾಳೆ ಅವರು ರಾಜ್ಯದ ವಿವಿಧ ನಗರಗಳಲ್ಲಿ ಮದ್ಯ ನಿಷೇಧವನ್ನು ತೆಗೆದುಹಾಕಲು ಬಯಸುತ್ತಾರೆ” ಎಂದು ವಿಪಕ್ಷದ ನಾಯಕ ಅಮಿತ್ ಚಾವ್ಡ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
“ಇದರಿಂದ ಯುವಜನತೆ ಹಾಳಾಗುತ್ತದೆ. ಗಿಫ್ಟ್ ಸಿಟಿಯಿಂದ ಮದ್ಯಪಾನ ಮಾಡಿ ಹೊರಗೆ ಬರುವವರು ಅಪಘಾತಗಳನ್ನು ಉಂಟುಮಾಡುತ್ತಾರೆ ಮತ್ತು ನಮ್ಮ ಮಹಿಳೆಯರಿಗೆ ಹಾನಿ ಮಾಡುತ್ತಾರೆ. ಅವರು (ಸರ್ಕಾರ) ಮದ್ಯ ನಿಷೇಧವನ್ನು ತೆಗೆದು ಹಾಕುವುದರಿಂದ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ಅವರು (ಸರ್ಕಾರ) ಭಾವಿಸುತ್ತಾರೆಯೇ” ಎಂದು ಅವರು ಪ್ರಶ್ನಿಸಿದರು.
ಕಾನೂನು ಮತ್ತು ಸುವ್ಯವಸ್ಥೆ, ಮಹಿಳೆಯರ ಘನತೆ ಕಾಪಾಡಲು ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಹೇಳಿದ ಕಾಂಗ್ರೆಸ್ ಶಾಸಕ ಗನಿಬೆನ್ ಠಾಕೂರ್, ಜನರು ಗುಜರಾತ್ನಿಂದ ಹೊರಗೆ ಹೋಗುವ ಬದಲು ಗಿಫ್ಟ್ ಸಿಟಿಗೆ ಕುಡಿಯಲು ಹೋಗುತ್ತಾರೆ ಎಂದು ಹೇಳಿದರು.
ಬೊಟಾಡ್ನ ಕ್ಷೇತ್ರದ ಎಎಪಿ ಶಾಸಕ ಉಮೇಶ್ ಮಕ್ವಾನಾ, ಗಿಫ್ಟ್ ಸಿಟಿಯಲ್ಲಿನ ನಿಷೇಧವನ್ನು ತೆಗೆದುಹಾಕುವ ನಿರ್ಧಾರವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ಗೆ ಪತ್ರ ಬರೆದಿದ್ದಾರೆ.
ವಿಪಕ್ಷಗಳ ವಾದಗಳನ್ನು ಸಮರ್ಥಿಸಿಕೊಂಡಿರುವ ಸಚಿವ ರುಶಿಕೇಶ್ ಪಟೇಲ್, ರಾಜ್ಯದ ಹೊರಗಿನಿಂದ ಬರುವ ಉದ್ಯಮಿಗಳಿಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
“ಮದ್ಯ ನಿಷೇಧವಿಲ್ಲದ ಸ್ಥಳಗಳಲ್ಲಿ ಉದ್ಯಮಿಗಳಿಗೆ ಅದೇ ಜೀವನಶೈಲಿಯನ್ನು ಒದಗಿಸಲು ಯೋಜನೆಯನ್ನು ಆರಂಭಿಸಲಾಗಿದೆ. ಗಿಫ್ಟ್ ಸಿಟಿಗೆ 500 ಕ್ಕೂ ಹೆಚ್ಚು ಕಂಪನಿಗಳು ಸೇರ್ಪಡೆಯಾಗಿವೆ. ಮುಂದಿನ ದಿನಗಳಲ್ಲಿ ಈ ನಿರ್ಧಾರದ ಪ್ರಾಮುಖ್ಯತೆಯನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ಪಟೇಲ್ ಹೇಳಿದರು.





