ಬಡತನದ ಬೇಗೆಯಲ್ಲಿ ನಲುಗುತ್ತಿರುವ ದೇಶದ ಶೇ.90 ರಷ್ಟು ಬಡವರಿಗೆ ನ್ಯಾಯ ಒದಗಿಸುವ ನಮ್ಮ ಯೋಜನೆಯು ಕೇವಲ ರಾಜಕೀಯ ವಿಷಯವಲ್ಲ. ತಮ್ಮನ್ನು ತಾವು ದೇಶ ಭಕ್ತರೆನಿಸಿಕೊಂಡವರು ಜಾತಿ ಗಣತಿ ನಡೆಸುವ ನಮ್ಮ ಉದ್ದೇಶಕ್ಕೆ ನಲುಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಸಮೃದ್ಧ ಭಾರತಿ ಫೌಂಡೇಷನ್ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಣಾಳಿಕೆ ದೊಡ್ಡ ಉದ್ಯಮಿಗಳಿಗೆ ನೀಡಲಾದ ಸಣ್ಣ ಪಾಲನ್ನು ಶೇ.90 ರಷ್ಟಿರುವ ದೇಶದ ಬಡ ಜನತೆಗೆ ನೀಡಲು ಬಯಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಿಂದೂಗಳ ಸಂಪತ್ತನ್ನು ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.
ರಾಮ ಮಂದಿರ ಅಥವಾ ನೂತನ ಸಂಸತ್ತಿನ ಕಟ್ಟಡದ ಉದ್ಘಾಟನೆಯಲ್ಲಿ ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ ಒಳಗೊಂಡು ಒಬ್ಬ ದಲಿತ ಅಥವಾ ಬುಡಕಟ್ಟು ಅಥವಾ ಒಬಿಸಿ ಸಮುದಾಯದ ಒಬ್ಬರನ್ನು ಆಹ್ವಾನಿಸಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಇದೊಂದು ಕ್ರಾಂತಿಕಾರಕ ಪ್ರಣಾಳಿಕೆಯಾಗಿದ್ದು, ಮೋದಿ ಇದರಿಂದ ಭಯಗೊಂಡಿದ್ದಾರೆ. ಮೋದಿಯವರು ಕಳೆದ ಹತ್ತು ವರ್ಷಗಳಿಂದ ನಾನೊಬ್ಬ ಒಬಿಸಿ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಜಾತಿ ಸಮೀಕ್ಷೆಯ ಬಗ್ಗೆ ಮಾತನಾಡುವಾಗ ಪ್ರಧಾನಿ ಯಾವುದೇ ಜಾತಿಯಿಲ್ಲ ಎಂದು ಹೇಳುತ್ತಾರೆ ಎಂದು ರಾಹುಲ್ ಗಾಂಧಿ ಪ್ರದಾನಿಯ ವಿರುದ್ಧ ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಅನ್ಯ ರಾಜ್ಯಗಳ 9 ನಾಯಕರನ್ನು ಲೋಕಸಭೆಗೆ ಚುನಾಯಿಸಿದ ಕರ್ನಾಟಕದ ಮತದಾರರು
“ನಿಮಗೆ ಯಾವುದೇ ಜಾತಿಯಿಲ್ಲದಿದ್ದರೆ ನೀವು ಹೇಗೆ ಒಬಿಸಿ ಎಂದು ಹೇಳುತ್ತೀರಿ. ಬಡವರು ಮತ್ತು ಶ್ರೀಮಂತರು ಇರುವುದೆಂದು ಅವರು ಹೇಳುತ್ತಾರೆ. ನೀವು ಈ ರೀತಿ ಹೇಳಿದರೆ ನೀವು ಬಡವರನ್ನು ಎಣಿಕೆ ಮಾಡಿ ಅದರಲ್ಲಿ ಶೇ. 90 ಮಂದಿ ದಲಿತರು, ಆದಿವಾಸಿಗಳು ಹಾಗೂ ಒಬಿಸಿಗಳೆ ಇರುತ್ತಾರೆ. ನೀವು ಅವರೊಳಗಿನ ಶ್ರೀಮಂತರನ್ನು ಹುಡುಕಬೇಡಿ. ಇದು ನನಗೆ ರಾಜಕೀಯ ವಿಷಯವಲ್ಲ. ಇದು ನನ್ನ ಜೀವನ ಯೋಜನೆ. ರಾಜಕೀಯ ವಿಷಯಕ್ಕೂ ಜೀವನ ಯೋಜನೆಗೂ ವ್ಯತ್ಯಾಸವಿದೆ. ರಾಜಕೀಯದಲ್ಲಿ ರಾಜಿ ಮಾಡಿಕೊಳ್ಳಬಹುದು, ಆದರೆ ಜೀವನ ಯೋಜನೆಯಲ್ಲಿ ರಾಜಿ ಮಾಡಿಕೊಳ್ಳಬಾರದು” ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ಕಾಂಗ್ರೆಸ್ ಒಮ್ಮೆ ಅಧಿಕಾರ ರಚಿಸಿದರೆ ನಮ್ಮ ಮೊದಲ ಅಜೆಂಡಾ ಜಾತಿ ಸಮೀಕ್ಷೆ ಕೈಗೊಂಡು ಮಾಧ್ಯಮ, ನ್ಯಾಯಾಂಗ, ಖಾಸಗಿ ಆಸ್ಪತ್ರೆ ಹಾಗೂ ದೊಡ್ಡ ಕಂಪನಿಗಳ ವಲಯಗಳಲ್ಲಿ ಕಡಿಮೆ ಪ್ರಸ್ತುತತೆ ಹೊಂದಿರುವ ದಲಿತ, ಆದಿವಾಸಿ ಹಾಗೂ ಒಬಿಸಿ ಸಮುದಾಯದವರಿಗೆ ನ್ಯಾಯ ಒದಗಿಸುವುದು” ಎಂದು ರಾಹುಲ್ ಗಾಂಧಿ ಹೇಳಿದರು.
“ನಿಜವಾಗಿಯೂ ನನಗೆ ಜಾತಿಯಲ್ಲಿ ಆಸಕ್ತಿಯಿಲ್ಲ. ನನಗೆ ನ್ಯಾಯದಲ್ಲಿ ಆಸಕ್ತಿಯಿದೆ. ಇಂದು ಭಾರತದ ಶೇ.90 ರಷ್ಟು ಜನರು ಅನ್ಯಾಯಕ್ಕೊಳಗಾಗಿದ್ದಾರೆ. ಅನ್ಯಾಯ ಆಗುತ್ತಿರು ಬಗ್ಗೆ ನಾನು ಮಾತನಾಡಿದರೆ ಪ್ರತಿಯೊಬ್ಬರೂ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳುತ್ತಾರೆ. ದೇಶವನ್ನು ಆರಾಧಿಸುವ ವ್ಯಕ್ತಿ ಉತ್ತಮ ಭಾರತ ಹಾಗೂ ಅಧಿಕಾರವು ಶೇ.90 ರಷ್ಟು ಜನರಿಗೆ ಬರಬೇಕೆಂದು ಬಯಸುತ್ತಾನೆ. ಆದರೆ ತಮ್ಮನ್ನು ತಾವು ದೇಶ ಭಕ್ತರೆಂದು ಹೇಳಿಕೊಳ್ಳುವವರು ಜಾತಿ ಗಣತಿಗೆ ಭಯ ಪಡುತ್ತಾರೆ” ಎಂದು ರಾಹುಲ್ ಗಾಂಧಿ ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





