ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮತ್ತು ಮತದಾನವು ಮಾರ್ಚ್ 9 ರಂದು ನಡೆಯಲಿದೆ. ವಿರಾಮದ ಬಳಿಕ ಸಂಸತ್ತಿನ ಅಧಿವೇಶನ ಪುನರಾರಂಭಗೊಂಡ ದಿನವೇ (ಮಾರ್ಚ್ 9) ಇದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ತಿಳಿಸಿದ್ದಾರೆ.
ಮಾರ್ಚ್ 9 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದ ಎರಡನೇ ಹಂತವು ಅತ್ಯಂತ ‘ಕುತೂಹಲಕಾರಿ’ ಆಗಿರಲಿದೆ. ಏಕೆಂದರೆ ಹಲವಾರು ಪ್ರಮುಖ ಕಾನೂನುಗಳು ಮತ್ತು ನಿರ್ಣಾಯಕ ಮಸೂದೆಗಳನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷಗಳು ಅಧಿವೇಶನದ ಮೊದಲ ಹಂತದಲ್ಲಿ ಮಾಡಿದಂತೆ ಪ್ರತಿಭಟನೆಯನ್ನು ಮುಂದುವರಿಸಿದರೆ, ಅದು ಅಂತಿಮವಾಗಿ ಅವರಿಗೆ ನಷ್ಟ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಮಾರ್ಚ್ 9 ರಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಬಗ್ಗೆ ನಾವು ಚರ್ಚೆ ನಡೆಸಲಿದ್ದೇವೆ. ನಿಯಮದ ಪ್ರಕಾರ ಅಧಿವೇಶನ ಪುನರಾರಂಭಗೊಂಡ ಮೊದಲ ದಿನವೇ ಇದನ್ನು ಕೈಗೆತ್ತಿಕೊಳ್ಳಬೇಕು. ಚರ್ಚೆಯ ನಂತರ ಮತದಾನ ನಡೆಯಲಿದೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜನವರಿ 28 ರಂದು ರಾಷ್ಟ್ರಪತಿಗಳ ಭಾಷಣದೊಂದಿಗೆ ಆರಂಭವಾಗಿದ್ದ ಬಜೆಟ್ ಅಧಿವೇಶನಕ್ಕೆ ಫೆಬ್ರವರಿ 12 ರಿಂದ ವಿರಾಮ ನೀಡಲಾಗಿದೆ. ಅಧಿವೇಶನವು ಮಾರ್ಚ್ 9 ರಂದು ಪುನರಾರಂಭಗೊಂಡು ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿದೆ.





