ಗಲ್ಫ್ ಪ್ರದೇಶದಲ್ಲಿನ ಯುದ್ಧದ ಕಾರಣದಿಂದಾಗಿ ಅಡುಗೆ ಅನಿಲದ (LPG) ಕೊರತೆಯ ಬಗ್ಗೆ ಆತಂಕಗಳು ಉಂಟಾಗಿವೆ. ಇದೇ ಸಮಯದಲ್ಲಿ, ‘ಉದ್ಯಮ’ ಎಂಬ ಪದಕ್ಕೆ 1978ರಲ್ಲಿ ನ್ಯಾಯಾಲಯ ನೀಡಿದ್ದ ವ್ಯಾಖ್ಯಾನವನ್ನು ಪರಿಶೀಲಿಸುತ್ತಿದ್ದ ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಾಧೀಶರ ಪೀಠವು, ‘LPG ಉದ್ಯಮಕ್ಕೆ ಹೊಡೆತ ನೀಡಿದೆ’ ಎಂಬುದನ್ನು ಗಮನಿಸಿದೆ. ಆದರೆ, ನ್ಯಾಯಾಲಯದ ಈ ಹೇಳಿಕೆ ಕೋರ್ಟ್ ಅವರಣದಲ್ಲಿದ್ದವರನ್ನು ಅಚ್ಚರಿಗೊಳಿಸಿದೆ. ಯಾಕೆಂದರೆ, ನ್ಯಾಯಾಲಯವು ‘ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ’ (ಎಲ್ಪಿಜಿ) ಕುರಿತು ಮಾತನಾಡಿದ್ದರೆ, ಅಲ್ಲಿದ್ದವರು ಅಡುಗೆ ಅನಿಲದ (ಎಲ್ಪಿಜಿ) ಎಂದು ಅರ್ಥೈಸಿಕೊಂಡಿದ್ದಾರೆ.
ಸುಮಾರು 50 ವರ್ಷಗಳಷ್ಟು ಹಳೆಯದಾದ ‘ಉದ್ಯಮ’ ಎಂಬ ಪದದ ವಿಸ್ತಾರವಾದ ವ್ಯಾಖ್ಯಾನವು ಈಗಿನ ಕಾಲಕ್ಕೆ ಹೇಗೆ ಅಪ್ರಸ್ತುತವಾಗಿದೆ ಎಂದು ಅಟಾರ್ನಿ ಜನರಲ್ (AG) ಆರ್. ವೆಂಕಟರಮಣಿ ನ್ಯಾಯಾಲಯದಲ್ಲಿ ವಿವರಿಸುತ್ತಿದ್ದರು. ಈ ವೇಳೆ, ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “LPG ಉದ್ಯಮಗಳಿಗೆ ಗಣನೀಯ ಹೊಡೆತ ನೀಡಿದೆ’ ಎಂದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಎಜಿ, “ದೇಶದಲ್ಲಿ ಇಂದು ಅಡುಗೆ ಅನಿಲದ (LPG) ಕೊರತೆಯಿಲ್ಲ” ಎಂದು ಹೇಳಿದರು. ಅವರ ಹೇಳಿಕೆಯು ನ್ಯಾಯಾಲಯವನ್ನು ಹಾಸ್ಯಮಯಗೊಳಿಸಿತು.
ಎಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ತಾವು ‘LPG’ ಎಂದರೆ ಉದಾರೀಕರಣ (Liberalisation), ಖಾಸಗೀಕರಣ (Privatisation) ಮತ್ತು ಜಾಗತೀಕರಣ (Globalisation) ಎಂಬುದನ್ನು ಉಲ್ಲೇಖಿಸಿದ್ದಾಗಿ ವಿವರಿಸಿದರು.
“1970ರ ದಶಕದ ನಂತರ ಈ ಮೂರೂ (LPG) ರಂಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನ್ಯಾಯಾಲಯವು ಈ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. 1978ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೀಠವು ನೀಡಿದ ಉದ್ಯಮದ ವ್ಯಾಖ್ಯಾನವನ್ನು ಮರುಪರಿಶೀಲಿಸಲು ಪ್ರಯತ್ನಿಸುತ್ತದೆ” ಎಂದು ಪೀಠವು ಹೇಳಿದೆ.
ತಮ್ಮ ವಾದವನ್ನು ಮುಂದಿಟ್ಟ ಎಜಿ, “ಸಮಾಜವಾದವು ರಾಜಕೀಯ ಮತ್ತು ಆರ್ಥಿಕತೆಯ ಪ್ರಮುಖ ಲಕ್ಷಣವಾಗಿದ್ದ 50 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಉದ್ಯಮದ ವ್ಯಾಖ್ಯಾನವನ್ನು ನೀಡಿತ್ತು. 1990ರ ದಶಕದಿಂದ ಮಾರುಕಟ್ಟೆಗಳು ಗಣನೀಯವಾಗಿ ಮುಕ್ತವಾಗಿವೆ,” ಎಂದು ವಿವರಿಸಿದರು.




