ಮನರೇಗಾದಲ್ಲಿನ ಪ್ರಸ್ತಾವಿತ ಬದಲಾವಣೆಗಳ ವಿರುದ್ಧ ಎಡರಂಗ ಮತ್ತು ಕಮ್ಯುನಿಸ್ಟ್ ಪಕ್ಷಗಳು ಸೋಮವಾರ ಲಕ್ನೋದಲ್ಲಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದವು.
“ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MGNREGA)ಯ ಮೂಲ ಆಶಯವನ್ನು ದುರ್ಬಲಗೊಳಿಸುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಕೇಂದ್ರ ಸರ್ಕಾರವು ಮನರೇಗಾದಂತಹ ಐತಿಹಾಸಿಕ ಯೋಜನೆಯನ್ನು ಕೊನೆಗೊಳಿಸುವತ್ತ ಹೆಜ್ಜೆ ಇಡುತ್ತಿದೆ. ‘ವಿಕಸಿತ್ ಭಾರತ್ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ)'(ವಿಬಿ ಜಿ ರಾಮ್ ಜಿ)ನಂತಹ ಹೊಸ ನಿಬಂಧನೆಗಳ ಮೂಲಕ ಮನರೇಗಾವನ್ನು ಕ್ರಮೇಣ ತೆಗೆದುಹಾಕಲು ಸರ್ಕಾರ ಮುಂದಾಗಿದೆ. ಇದರಿಂದ ಗ್ರಾಮೀಣ ಕಾರ್ಮಿಕರು ಮತ್ತು ರೈತರಿಗೆ ಹಾನಿಉಂಟಾಗುತ್ತದೆ” ಎಂದು ಆರೋಪಿಸಿದರು.
ಹಣಕಾಸಿನ ಪಾಲಿನ ಕುರಿತು ಪ್ರಶ್ನೆ
“ಮನರೇಗಾದಲ್ಲಿ ಈ ಹಿಂದೆ ಕೇಂದ್ರ ಸರ್ಕಾರವು ಪ್ರಮುಖ ಕೊಡುಗೆ ನೀಡುತ್ತಿತ್ತು. ಆದರೆ ಹೊಸ ಮಸೂದೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸಿನ ಪಾಲನ್ನು ಬದಲಾಯಿಸಲಾಗುತ್ತಿದ್ದು, ರಾಜ್ಯಗಳ ಮೇಲೆ ಹೆಚ್ಚಿನ ಹೊರೆಯನ್ನು ಹೇರಲಾಗುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರಗಳು ಈ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದು ಯೋಜನೆಯನ್ನು ಸ್ವಯಂಚಾಲಿತವಾಗಿ ದುರ್ಬಲಗೊಳಿಸುತ್ತದೆ” ಎಂದು ಎಡಪಕ್ಷಗಳು ಆರೋಪಿಸಿವೆ.
“ಲಕ್ಷಾಂತರ ಮಂದಿ ಗ್ರಾಮೀಣ ಕಾರ್ಮಿಕರಿಗೆ ಮನರೇಗಾ ಉದ್ಯೋಗ ಖಾತರಿಯಾಗಿದೆ. ಈ ಯೋಜನೆ ದುರ್ಬಲಗೊಂಡರೆ, ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಮತ್ತು ವಲಸೆ ಹೆಚ್ಚಾಗುತ್ತದೆ. ಹಾಗಾಗಿ ಮನರೇಗಾ ಸ್ವರೂಪ ಬದಲಾವಣೆ ಕಾರ್ಮಿಕ ವಿರೋಧಿ ನಡೆಯಾಗಿದೆ” ಎಂದು ಕರೆದರು.
ಈ ಸುದ್ದಿ ಓದಿದ್ದೀರಾ? ಮನರೇಗಾ ಹೆಸರು ಬದಲಾವಣೆ ವಿರುದ್ಧ ಅಭಿಯಾನ: ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಘೋಷಣೆ
“ವಿಕಸಿತ್ ಭಾರತ್ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್(ಗ್ರಾಮೀಣ) ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು. ಮನರೇಗಾದಂತಹ ಐತಿಹಾಸಿಕ ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳು ಯಾವುದೇ ಬದಲಾವಣೆಗಳಿಲ್ಲದೆ ಮುಂದುವರೆಯಬೇಕು” ಒತ್ತಾಯಿಸಿದರು.
“ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳಿಗೆ ಗಮನ ಕೊಡದಿದ್ದರೆ, ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.





