ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೈತರೊಬ್ಬರನ್ನು ಬಿಜೆಪಿ ನಾಯಕ ಮತ್ತು ಆತನ ಸಹಚರರು ಕ್ರೂರವಾಗಿ ಥಳಿಸಿ ಕೊಂದಿರುವ ಅಮಾನವೀಯ, ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗಣೇಶಪುರ ಗ್ರಾಮದ 40 ವರ್ಷದ ರೈತ ರಾಮಸ್ವರೂಪ್ ಧಕಾಡ್ ಅವರನ್ನು ಬಿಜೆಪಿ ನಾಯಕ ಮಹೇಂದ್ರ ನಗರ್ ಮತ್ತು ಆತನ ಸಹಚರರು ಕೋಲುಗಳು ಮತ್ತು ರಾಡ್ಗಳಿಂದ ಥಳಿಸಿದ್ದಾರೆ. ಬಳಿಕ, ರೈತನ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ರೈತನನ್ನು ರಕ್ಷಿಸಲು ಗ್ರಾಮಸ್ಥರು ಮುಂದಾದಾಗ ಅವರಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಂದೂಕು ಹಿಡಿದಿದ್ದ ಆರೋಪಿಗಳಿಗೆ ಹೆದರಿದ ಗ್ರಾಮಸ್ಥರು ನಿಸ್ಸಹಾಯಕರಾಗಿ ಕೃತ್ಯವನ್ನು ನೋಡುತ್ತಾ ನಿಂತಿದ್ದರು. ಆದಾಗ್ಯೂ, ರೈತನ ಹೆಣ್ಣು ಮಕ್ಕಳು ತಮ್ಮ ತಂದೆಯ ರಕ್ಷಣೆಗೆ ಧಾವಿಸಿದ್ದು, ಅವರ ಮೇಲೂ ಆರೋಪಿಗಳು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ವರದಿಯಾಗಿದೆ.
“ನಾನು ನನ್ನ ತಂದೆಯನ್ನು ಉಳಿಸಲು ಹೋದಾಗ, ಅವರು ನನ್ನನ್ನು ಕೆಳಗೆ ತಳ್ಳಿದರು. ನನ್ನ ಮೇಲೆ ಕುಳಿತು, ನನ್ನ ಬಟ್ಟೆಗಳನ್ನು ಹರಿದರು ನಮ್ಮನ್ನು ಹೆದರಿಸಲು ಗುಂಡು ಹಾರಿಸಿದರು. ನನ್ನ ತಾಯಿ ಮತ್ತು ತಂದೆ ಹೊಲಗಳಿಗೆ ಹೋಗುತ್ತಿದ್ದಾಗ ಅವರ ಮೇಲೆ ನಗರ್ನ ಸಹಚರರಾದ ಮಹೇಂದ್ರ, ಹರೀಶ್ ಮತ್ತು ಗೌತಮ್ ದಾಳಿ ಮಾಡಿದರು. ನಂತರ ಅವರು ನನ್ನ ತಂದೆಯ ಮೇಲೆ ಕಾರು ಹರಿಸಿದ್ದಾರೆ. ದಾಳಿಕೋರರು ಬಂದೂಕುಗಳನ್ನು ಹೊಂದಿದ್ದರಿಂದ, ಯಾರೂ ಸಹಾಯ ಮಾಡಲು ಧೈರ್ಯ ಮಾಡಲಿಲ್ಲ” ಎಂದು ಮೃತ ರೈತನ ಮಗಳು ವಿವರಿಸಿದ್ದಾರೆ.
ಸ್ಥಳೀಯರ ಪ್ರಕಾರ, ಬಿಜೆಪಿಯ ಸ್ಥಳೀಯ ಬೂತ್ ಸಮಿತಿ ಮುಖ್ಯಸ್ಥ ಮತ್ತು ಗುಣ ಜಿಲ್ಲೆಯ ಬಿಜೆಪಿ ರೈತ ವಿಭಾಗದ ಮಾಜಿ ಪದಾಧಿಕಾರಿ ಮಹೇಂದ್ರ ನಗರ್ ಎಂಬಾತ ಗಣೇಶಪುರ ಗ್ರಾಮದಲ್ಲಿ ದೀರ್ಘಕಾಲದಿಂದ ದಬ್ಬಾಳಿಕೆ ನಡೆಸುತ್ತಿದ್ದಾರೆ.
“ಅವರು ಕೆಲವು ವರ್ಷಗಳಿಂದ ರೈತರ ಭೂಮಿಯನ್ನು ಕಬಳಿಸುತ್ತಿದ್ದಾರೆ. ಕನಿಷ್ಠ 25 ರೈತರು ತಮ್ಮ ಭೂಮಿಯನ್ನು ಕಡಿಮೆ ಬೆಲೆಗೆ ಮಾರಿ ಗ್ರಾಮವನ್ನೇ ತೊರೆದಿದ್ದಾರೆ. ಆತನ ಕೃತ್ಯಗಳನ್ನು ವಿರೋಧಿಸಲು ಧೈರ್ಯ ಮಾಡಿದವರ ಮೇಲೆ ಭೀಕರ ಹಲ್ಲೆಗಳು ನಡೆದಿವೆ. ರಾಮಸ್ವರೂಪ್ ಅವರು ನಗರ್ನ ಭಯೋತ್ಪಾದನಾ ಕೃತ್ಯಕ್ಕೆ ಮಣಿಯಲು ನಿರಾಕರಿಸಿದ್ದರು. ತಮ್ಮ ಜಮೀನನ್ನು ನಗರ್ಗೆ ಕೊಡುವುದಿಲ್ಲವೆಂದು ದೃಢನಿರ್ಧಾರ ಮಾಡಿದ್ದರು. ಭೂ ಉಳಿಸಿಕೊಳ್ಳುವ ಹೋರಾಟದಲ್ಲಿ ಅವರು ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು” ಎಂದು ಗ್ರಾಮಸ್ಥರು ಹೇಳಿರುವುದಾಗಿ ವರದಿಯಾಗಿದೆ.
ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDOP–ಬಮೋರಿ) ವಿವೇಕ್ ಅಸ್ಥಾನಾ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, “ಮೃತ ರೈತ ಮತ್ತು ಸ್ಥಳೀಯ ಬಿಜೆಪಿ ನಾಯಕನ ನಡುವಿನ ದೀರ್ಘಕಾಲದ ಭೂ ದ್ವೇಷವೇ ಈ ಕ್ರೂರ ಹತ್ಯೆಗೆ ಕಾರಣ” ಎಂದು ಹೇಳಿದ್ದಾರೆ.
“ಮಹೇಂದ್ರ, ಕನ್ಹಯ್ಯಾ ಹಾಗೂ ಕೆಲವು ಮಹಿಳೆಯರು ಸೇರಿದಂತೆ 13–14 ಜನರು ರಾಮಸ್ವರೂಪ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ, ರಾಮಸ್ವರೂಪ್ ಅವರ ದೇಹದ ಹಲವು ಮೂಳೆಗಳು ಮುಗಿದುಹೋಗಿವೆ. ಅವರ ಹೆಣ್ಣುಮಕ್ಕಳ ಮೇಲೂ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿದ್ದವರನ್ನು ಗುಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ವಿವೇಕ್ ತಿಳಿಸಿದ್ದಾರೆ.
ಮಹೇಂದ್ರ ನಗರ್, ಅವರ ಪುತ್ರರಾದ ನಿತೇಶ್ ಮತ್ತು ದೇವೇಂದ್ರ, ಪತ್ನಿ ಕಮಲೇಶ್ ಬಾಯಿ ನಗರ್, ಸೋದರಳಿಯ ಜಿತೇಂದ್ರ ಮತ್ತು ನಗರ್ ಕುಟುಂಬದ ಇತರ ಇಬ್ಬರು ಮಹಿಳೆಯರು ಸೇರಿದಂತೆ 14 ಜನರ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ, ಹಲ್ಲೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಬಿಎನ್ಎಸ್ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು
ಆರೋಪಿಗಳಲ್ಲಿ ಒಬ್ಬರಾದ ಮಹೇಂದ್ರ ಎಂಬಾತನ ಅಣ್ಣ ಹುಕುಮ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮಹೇಂದ್ರ ನಗರ್ ಪಕ್ಷದ ಕಾರ್ಯಕರ್ತ ಮತ್ತು ಸ್ಥಳೀಯ ಬೂತ್ ಮುಖ್ಯಸ್ಥನಾಗಿದ್ದಾರೆ. ಅವರನ್ನು ತಕ್ಷಣವೇ ಪಕ್ಷದಿಂದ ತೆಗೆದುಹಾಕುವಂತೆ ನಾವು ಪಕ್ಷದ ಹಿರಿಯ ನಾಯಕರಿಗೆ ಪತ್ರ ಬರೆದಿದ್ದೇವೆ” ಎಂದು ಗುಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಧರ್ಮೇಂದ್ರ ಸಿಕಾರ್ವಾರ್ ಹೇಳಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, 2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ 22 ಬೆಂಬಲಿಗರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರುವ ಮೂಲಕ ಕಮಲ್ ನಾಥ್ ನೇತೃತ್ವದ ಸರ್ಕಾರವನ್ನು ಉರುಳಿಸಿದಾಗ, ಬಿಜೆಪಿಗೆ ಸೇರಿದ ಕಾರ್ಯಕರ್ತರಲ್ಲಿ ಮಹೇಂದ್ರ ನಗರ್ ಕೂಡ ಒಬ್ಬರು. ಮಹೇಂದ್ರ ನಗರ್ ವಾಸವಾಗಿರುವ ಗುಣಾ ಲೋಕಸಭಾ ಕ್ಷೇತ್ರವನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಪ್ರತಿನಿಧಿಸುತ್ತಿದ್ದಾರೆ.




