ಸುಮಾರು 45 ವರ್ಷಗಳ ಹಿಂದೆ ನೂರು ರೂಪಾಯಿ ಮೌಲ್ಯದ ಗೋಧಿ ಕದ್ದ ಆರೋಪದಲ್ಲಿ ಅರವತ್ತೈದು ವರ್ಷದ ವೃದ್ಧರೊಬ್ಬರನ್ನು ಬಂಧಿಸಿದ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಇಷ್ಟು ವರ್ಷಗಳ ಕಾಲ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿಕೊಂಡಿದ್ದಾರೆ!
1980ರಲ್ಲಿ ಬಾಲ್ಕವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಾಲ್ಖಡ್ ಗ್ರಾಮದ ಬಳಿಯ ಬಾಲ್ಸಮುಂಡ್ ಕಾಕಡ್ ಪ್ರದೇಶದಲ್ಲಿ ಮುಜೀದ್ ಎಂಬವರ ಮಗ ಸಲೀಂ ಸೇರಿದಂತೆ ಏಳು ಯುವಕರ ಗುಂಪು ಹೊಲಗಳಿಗೆ ನುಗ್ಗಿ ಕೇವಲ ನೂರು ರೂಪಾಯಿ ಮೌಲ್ಯದ ಗೋಧಿಯನ್ನು ಕದ್ದಿದ್ದರು ಎಂದು ಆರೋಪಿಸಲಾಗಿದೆ. ಆ ಸಮಯದಲ್ಲಿ ಒಂದು ಕ್ವಿಂಟಾಲ್ ಉತ್ತಮ ಗುಣಮಟ್ಟದ ಗೋಧಿ ಬೆಲೆ ಸುಮಾರು 115 ರೂಪಾಯಿ ಆಗಿತ್ತು. ಅಂದರೆ ಸಲೀಂ ಗುಂಪಿನ ಮೇಲೆ ಇರುವುದು ಕೆಲವು ಕಿಲೋಗ್ರಾಂಗಳಷ್ಟು ಗೋಧಿಯನ್ನು ಕದ್ದ ಆರೋಪ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಅಂಧ ಮಹಿಳೆ ಮೇಲೆ ಬಿಜೆಪಿ ನಾಯಕಿ ಹಲ್ಲೆ
ಆಗ ಸುಮಾರು ಇಪ್ಪತ್ತು ವರ್ಷ ವಯಸ್ಸಿನವನಾಗಿದ್ದ ಸಲೀಂ ಈ ಕೃತ್ಯ ನಡೆದ ಬಳಿಕ ನಾಪತ್ತೆಯಾಗಿದ್ದ. “ಸಲೀಂ ಮತ್ತು ಅವನ ಕುಟುಂಬವು ಅಪರಾಧ ಘಟನೆ ನಡೆದ ಬಳಿಕ ಹಳ್ಳಿಯನ್ನು ತೊರೆದು ನೆರೆಯ ಧಾರ್ ಜಿಲ್ಲೆಗೆ ಹೋಗಿದ್ದರು. ಬಾಗ್ ಪ್ರದೇಶದಲ್ಲಿ ವಾಸಿಸುತ್ತಿದ್ದರು” ಎಂದು ಪೊಲೀಸರು ಹೇಳಿದ್ದಾರೆ.
ಸಲೀಂ ಕುಟುಂಬ ಒಂದು ಸಣ್ಣ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುತ್ತಿದ್ದಾರೆ. ಹಿಂದಿನ ಎಲ್ಲ ಘಟನೆಗಳನ್ನು ಮರೆತು ಬದುಕುತ್ತಿದ್ದರು. ಆದರೆ ಪೊಲೀಸರು ಅಪರಾಧ ಎಷ್ಟು ದೊಡ್ಡದು ಎಂದು ಲೆಕ್ಕಿಸದೆ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳ ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವವರ ಬಂಧನಕ್ಕೆ ರಾಜ್ಯಾದ್ಯಂತ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ 45 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಲೀಂ ಬಂಧನವಾಗಿದೆ.
ಆದರೆ ಅದೆಷ್ಟೋ ಮಂದಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದು, ಕೊಲೆ, ಅತ್ಯಾಚಾರ ಮಾಡಿ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಅವರ ಬಂಧನ ಮಾಡದ ಈ ಆಡಳಿತವು 45 ವರ್ಷಗಳ ಕೇವಲ ನೂರು ರೂಪಾಯಿ ಮೌಲ್ಯದ ಗೋಧಿ ಕದ್ದ ಕಾರಣಕ್ಕೆ ಇದೀಗ ಬಂಧಿಸಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಇಷ್ಟು ದೀರ್ಘಕಾಲದ ನಂತರ ಸಣ್ಣ ಅಪರಾಧಕ್ಕಾಗಿ ಕ್ರಮ ಕೈಗೊಳ್ಳುತ್ತಿರುವುದು ಆಶ್ಚರ್ಯಕರ ಮತ್ತು ಅನಗತ್ಯ ಎಂಬ ಅಭಿಪ್ರಾಯ ನೆಟ್ಟಿಗರದ್ದು.
ಈ ನಡುವೆ ಮಂಡೇಶ್ವರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDOP) ಶ್ವೇತಾ ಶುಕ್ಲಾ, “ಕಳ್ಳತನವು ಕೇವಲ ಒಂದು ಸಣ್ಣ ಪ್ರಮಾಣದ್ದಾಗಿದ್ದರೂ 1980ರಲ್ಲಿ ಏಳು ಮಂದಿಗಳನ್ನು ಒಳಗೊಂಡ ಗಮನಾರ್ಹ ಪ್ರಕರಣವಾಗಿತ್ತು. ಗಂಭೀರ ಪ್ರಕರಣವೇನಲ್ಲ” ಎಂದು ಹೇಳಿಕೊಂಡಿದ್ದಾರೆ.





