ತಮಿಳುನಾಡು ರಾಜ್ಯ ಬಿಎಸ್ಪಿ ಅಧ್ಯಕ್ಷ ಕೆ ಆರ್ಮ್ಸ್ಟ್ರಾಂಗ್ ಅವರನ್ನು ಚೆನ್ನೈನ ಪಕ್ಷದ ಕಚೇರಿಯಲ್ಲಿ ಅಂತಿಮ ಸಂಸ್ಕಾರ ನಡೆಸುವುದಕ್ಕೆ ಸಲ್ಲಿಸಲಾಗಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಆರ್ಮ್ಸ್ಟ್ರಾಂಗ್ ಅವರನ್ನು ತಿರುವಳ್ಳೂರ್ ಜಿಲ್ಲೆಯ ಪೊತೂರ್ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಸುವುದಕ್ಕೆ ಕೋರ್ಟ್ ಅನುಮತಿ ನೀಡಿದೆ.
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ವಿ ಭವಾನಿ ಸುಬ್ರಮಣಿಯಂ ಅವರು ಚೆನ್ನೈನ ಪಕ್ಷದ ಕಚೇರಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡಬೇಕೆಂದು ಆರ್ಮ್ಸ್ಟ್ರಾಂಗ್ ಅವರ ಪತ್ನಿ ಕೆ ಪೋರ್ಕಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ ತೀರ್ಪು ನೀಡಿದರು.
ವಸತಿ ಪ್ರದೇಶವಾದ ಕಾರಣ ಪಕ್ಷದ ಕಚೇರಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡಬಾರದು ಎಂದು ಆಡಳಿತರಾರೂಢ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಪೆರಂಬೂರ್ನಲ್ಲಿನ ಪಾಲಿಕೆ ಶಾಲೆಯಲ್ಲಿ ಆರ್ಮ್ಸ್ಟ್ರಾಂಗ್ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಬಿಎಸ್ಪಿ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಚೆನ್ನೈಗೆ ಆಗಮಿಸಿ ಕೆ ಆರ್ಮ್ಸ್ಟ್ರಾಂಗ್ ಅಂತಿಮ ದರ್ಶನ ಮಾಡಿದರು.
ಅದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಬಂಧಿಸಿದವರು ನಿಜವಾದ ಅಪರಾಧಿಗಳಲ್ಲ. ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು. ಆರ್ಮ್ಸ್ಟ್ರಾಂಗ್ ಹತ್ಯೆಯ ರೀತಿಯನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ ಎಂಬುವುದನ್ನು ತೋರಿಸುತ್ತದೆ. ಆರ್ಮ್ಸ್ಟ್ರಾಂಗ್ಗೆ ನ್ಯಾಯ ದೊರೆಯುವಂತೆ ಸ್ಟಾಲಿನ್ ನೋಡಿಕೊಳ್ಳಬೇಕು. ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು” ಎಂದು ತಮಿಳುನಾಡು ಸಿಎಂ ಅವರಿಗೆ ಮನವಿ ಮಾಡಿದರು.
52 ವರ್ಷದ ಕೆ ಆರ್ಮ್ಸ್ಟ್ರಾಂಗ್ ಅವರು ಚೆನ್ನೈನ ತಮ್ಮ ನಿವಾಸದ ಎದುರು ಶುಕ್ರವಾರ ಸಂಜೆ ಅಪರಿಚಿತರಿಂದ ಭೀಕರವಾಗಿ ಹತ್ಯೆಗೀಡಾಗಿದ್ದರು.





