‘ದ್ರಾವಿಡ ಕಳಗಂ ಮತ್ತು ನಂತರದ ಡಿಎಂಕೆ ಪಕ್ಷಗಳು ಕಳೆದ 100 ವರ್ಷಗಳಿಂದ ಹಿಂದು ಧರ್ಮಕ್ಕೆ ವಿರುದ್ಧವಾಗಿ ದಾಳಿ ಮಾಡುತ್ತಿವೆ. ಉದಯನಿಧಿ ಕೂಡ ಇದೇ ಸೈದ್ಧಾಂತಿಕ ಪರಂಪರೆಗೆ ಸೇರಿದ್ದಾರೆ. ಅವರ ಹೇಳಿಕೆಯು ಭಾರತದ ಸುಮಾರು 80% ಜನರನ್ನು ಗುರಿಯಾಗಿಸಿದೆ’ –ಇದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಶ್ರೀಮತಿ ಅವರ ಹೇಳಿಕೆ.
ಜನವರಿ 20ರಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮದ್ರಾಸ್ ಹೈಕೋರ್ಟ್ ನಡೆಸಿದೆ. ಮಾಳವೀಯ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಿದೆ. ಇದೇ ವೇಳೆ, ಸನಾತನ ಧರ್ಮದ ವಿರುದ್ಧ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಯನ್ನು ಟೀಕಿಸಿ ನ್ಯಾಯಾಧೀಶೆ ಶ್ರೀಮತಿ ಅವರು ಉಲ್ಲೇಖಿಸಿರುವ ಹೇಳಿಕೆಯು ದೇಶಾದ್ಯಂತ, ಮುಖ್ಯವಾಗಿ ತಮಿಳುನಾಡಿನಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ನ್ಯಾಯಾಧೀಶರು ಬಿಜೆಪಿ/ಸಂಘಪರಿವಾರ ಪ್ರತಿಪಾದಿಸುವ ಹಿಂದುತ್ವ/ಸನಾತನ ಧರ್ಮದಿಂದ ಪ್ರೇರಿತರಾಗಿದ್ದಾರೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣ ಮತ್ತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಗಮನಾರ್ಹವಾಗಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸನಾತನ ಧರ್ಮ ಕುರಿತಾದ ಚರ್ಚೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಈ ಚರ್ಚೆಗಳು ಹೈಕೋರ್ಟ್ಗಳ ಪಡಸಾಲೆಯನ್ನೂ ತಲುಪಿವೆ. ಇದೇ ಸಮಯದಲ್ಲಿ, ನ್ಯಾಯಮೂರ್ತಿ ಎಸ್ ಶ್ರೀಮತಿ ಅವರ ಹೇಳಿಕೆಗಳು, ನ್ಯಾಯಾಲಯ ಕೂಡ ‘ಸನಾತನ ಧರ್ಮ’ದ ವಿಚಾರದಲ್ಲಿ ಸಾಫ್ಟ್ ಆಗಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿವೆ.
2023ರ ಸೆಪ್ಟೆಂಬರ್ನಲ್ಲಿ ಚೆನ್ನೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ‘ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಅಥವಾ ಕರೋನಾ ರೋಗದಂತೆ. ಅದನ್ನು ಎದುರಿಸುವುದಲ್ಲ ಬುಡಸಮೇತ ಅಳಿಸಿಹಾಕಬೇಕು’ ಎಂದು ಹೇಳಿದ್ದರು. ಅವರ ಹೇಳಿಕೆಯ ವಿರುದ್ಧ ಹಿಂದುತ್ವ ಕೋಮುವಾದಿಗಳು ವಿವಾದ ಸೃಷ್ಟಿಸಿದ್ದರು. ಉದಯನಿಧಿ ವಿರುದ್ಧ ದೇಶದ ಹಲವೆಡೆ ಎಫ್ಐಆರ್ಗಳನ್ನು ದಾಖಲಿಸಿದ್ದರು. ಅಲ್ಲದೆ, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ಆದಾಗ್ಯೂ, ತಾವು ಕ್ಷಮೆಯಾಚಿಸುವುದಿಲ್ಲವೆಂದು ಉದಯನಿಧಿ ಖಡಾಖಂಡಿತವಾಗಿ ಹೇಳಿದ್ದರು. ಸನಾತನ ಧರ್ಮ ಕುರಿತ ತಮ್ಮ ಹೇಳಿಕೆ ಮತ್ತು ನಿಲುವಿಗೆ ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದರು.
ಉದಯನಿಧಿ ಅವರ ಹೇಳಿಕೆಯನ್ನು ಖಂಡಿಸಿದ್ದ ಅಮಿತ್ ಮಾಳವೀಯ, ”ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರು, ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂ ರೋಗಗಳೊಂದಿಗೆ ಹೋಲಿಸಿದ್ದಾರೆ. ಅದನ್ನು ಕೇವಲ ವಿರೋಧಿಸುವುದಲ್ಲದೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದಿದ್ದಾರೆ. ಅವರು ಸನಾತನ ಧರ್ಮವನ್ನು ಅನುಸರಿಸುವ ಭಾರತದ 80%ರಷ್ಟು ಜನಸಂಖ್ಯೆಯ ನರಮೇಧ ಅಥವಾ ಸಾಂಸ್ಕೃತಿಕ ಹತ್ಯೆಗೆ ಕರೆ ನೀಡುತ್ತಿದ್ದಾರೆ. ಡಿಎಂಕೆ ಪಕ್ಷವು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ಇದನ್ನೇ ಒಪ್ಪಂದ ಮಾಡಿಕೊಂಡಿದೆಯಾ” ಎಂದು ಪ್ರಶ್ನಿಸಿದ್ದರು.
ಅಮಿತ್ ಮಾಳವಿಯಾ ಅವರು ‘ನರಮೇಧ’, ‘ಜನಾಂಗೀಯ ಹತ್ಯೆ’ ಎಂಬ ಪದಗಳನ್ನು ಬಳಸಿ ಮತ್ತು ಉದಯನಿಧಿ ಅವರ ಹೇಳಿಕೆಯನ್ನು ತಿರುಚಿ ಪ್ರಚೋದನೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಯಿತು. ಅವರ ವಿರುದ್ಧ ತಿರುಚನಾಪಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ಅನ್ನು ರದ್ದುಗೊಳಿಸುವಂತೆ ಕೋರಿ, ಮದ್ರಾಸ್ ಹೈಕೋರ್ಟ್ನಲ್ಲಿ ಅಮಿತ್ ಮಾಳವಿಯಾ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಶ್ರೀಮತಿ ಅವರ ಪೀಠವು, ಮಾಳವಿಯಾ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಿದೆ. ಅಲ್ಲದೆ, ಉದಯನಿಧಿ ಅವರ ಹೇಳಿಕೆಯ ಕುರಿತು ಪ್ರಸ್ತಾಪಿಸಿದ ನ್ಯಾಯಾಧೀಶರು, ”ಉದಯನಿಧಿ ಹೇಳಿಕೆಯು ದ್ವೇಷ ಭಾಷಣವಾಗಿದೆ. ‘ಒಝಿಪ್ಪು’ (ನಿರ್ಮೂಲನೆ) ಎಂಬ ಪದವು ಕೇವಲ ವಿರೋಧಿಸುವುದಲ್ಲ, ಬದಲಿಗೆ ಸಂಪೂರ್ಣ ಅಸ್ತಿತ್ವವನ್ನೇ ತೊಡೆದು ಹಾಕುವುದು ಎಂದರ್ಥ” ಎಂದು ಬಣ್ಣಿಸಿದ್ದಾರೆ.
ಮುಂದುವರೆದು, ”ದ್ರಾವಿಡ ಕಳಗಂ ಮತ್ತು ನಂತರದ ಡಿಎಂಕೆ ಪಕ್ಷಗಳು ಕಳೆದ 100 ವರ್ಷಗಳಿಂದ ಹಿಂದು ಧರ್ಮಕ್ಕೆ ವಿರುದ್ಧವಾಗಿ ದಾಳಿ ಮಾಡುತ್ತಿವೆ. ಉದಯನಿಧಿ ಕೂಡ ಇದೇ ಸೈದ್ಧಾಂತಿಕ ಪರಂಪರೆಗೆ ಸೇರಿದ್ದಾರೆ. ಅವರ ಹೇಳಿಕೆಯು ಭಾರತದ ಸುಮಾರು 80% ಜನರನ್ನು ಗುರಿಯಾಗಿಸಿದೆ” ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮುಂದುವರೆದ ತಮಿಳುನಾಡು ರಾಜ್ಯಪಾಲರ ಮೊಂಡಾಟ: ಸುಪ್ರೀಂ ತಪರಾಕಿಗೂ ಬೆಲೆ ಇಲ್ಲವೇ?
”ಅಮಿತ್ ಮಾಳವೀಯ ಅವರ ಹೇಳಿಕೆಯು ಉದಯನಿಧಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಂದಿದೆ. ಉದಯನಿಧಿ ಆರಂಭಿಸಿದ ವಿವಾದದಲ್ಲಿ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ, ಪ್ರತಿಕ್ರಿಯೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಅನ್ಯಾಯ” ಎಂದು ಹೇಳಿದ್ದಾರೆ. ಮಾಳವೀಯ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ನ ತೀರ್ಪನ್ನು ಬಿಜೆಪಿ ಮತ್ತು ಸಂಘಪರಿವಾರವು ಸಂಭ್ರಮಿಸಿವೆ. ಆದಾಗ್ಯೂ, ಈ ತೀರ್ಪನ್ನು ಡಿಎಂಕೆ ಪಕ್ಷವು ‘ತಪ್ಪು’ ಎಂದು ಬಣ್ಣಿಸಿದೆ. ‘ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗಳು ತೀರ್ಪಿನ ಮೇಲೆ ಪ್ರಭಾವ ಬೀರಿವೆ. ನ್ಯಾಯಾಧೀಶರ ಹೇಳಿಕೆಗಳು ಅಪಾಯಕಾರಿ ಮತ್ತು ವಿಪರ್ಯಾಸ’ ಎಂದು ಸಿಪಿಐಎಂ ಹೇಳಿದೆ.
ಈ ತೀರ್ಪು, ಚುನಾವಣಾ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ದ್ರಾವಿಡ ಮತ್ತು ಸನಾತನ ನಡುವಿನ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತಂದಿದೆ.




