ಗೋಹತ್ಯೆ ನಿಷೇಧದ ಕಟ್ಟುನಿಟ್ಟಿನ ಕಾನೂನುಗಳ ನಡುವೆಯೂ ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಗೋಮಾಂಸ ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಅಕ್ರಮ ರಫ್ತು ಜಾಲದ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರನ ಕಂಪನಿಯ ಕೈವಾಡವಿದೆ ಎಂದು ‘ಕ್ಯಾರವಾನ್‘ ವರದಿ ಮಾಡಿದೆ.
ಹೈದರಾಬಾದ್ನಿಂದ ಮುಂಬೈಗೆ ಸಾಗಿಸುತ್ತಿದ್ದ ಬರೋಬ್ಬರಿ 28 ಟನ್ (ಅಂದಾಜು 60 ಲಕ್ಷ ರೂ. ಮೌಲ್ಯದ) ಗೋಮಾಂಸವನ್ನು ಲೊನಾವಾಲಾ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
2022ರ ಮಾರ್ಚ್ 10ರಂದು ಮುಂಜಾನೆ 3.30ರ ಸುಮಾರಿಗೆ ಬಂದ ಅನಾಮಧೇಯ ಕರೆಯ ಮೇರೆಗೆ, ಸಿನ್ಹಗಡ್ ಕಾಲೇಜು ಬಳಿ ಪುಣೆ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ‘NL 01 AB 5853’ ನೋಂದಣಿಯ ಟ್ರಕ್ ಅನ್ನು ಅಡ್ಡಗಟ್ಟಿದ ಪೊಲೀಸರು, ಚಾಲಕ ಮಾಗ್ನು ಅಶ್ರಫಿ ಪಾಸ್ವಾನ್ (35) ಮತ್ತು ಕ್ಲೀನರ್ ಶುಭಂ ಶರ್ಮಾ (25) ಎಂಬುವವರನ್ನು ಬಂಧಿಸಿದ್ದಾರೆ. ವಾಹನದಲ್ಲಿ 20 ಕೆ.ಜಿ.ಯ 1,400 ಕಾರ್ಟನ್ಗಳಲ್ಲಿ ಸಂಸ್ಕರಿಸಿದ ಗೋಮಾಂಸವಿತ್ತು. ಆದರೆ, ಸಾಗಾಟಕ್ಕೆ ಯಾವುದೇ ಅಧಿಕೃತ ದಾಖಲೆಗಳಿರಲಿಲ್ಲ. ಕೇವಲ ‘ರೇಹಾನ್ ಅಹ್ಮದ್ ಖುರೇಷಿ’ ಎಂಬಾತನ ಸೂಚನೆ ಮೇರೆಗೆ ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!
ಪ್ರಕರಣದ ಬೆನ್ನಲ್ಲೇ, ಮುಂಬೈ ಮೂಲದ ‘ರೆಂಬಲ್ ಆಗ್ರೋ ಅಂಡ್ ಫುಡ್ಸ್’ ಕಂಪನಿಯು, ಇದು ಹಸುವಿನ ಮಾಂಸವಲ್ಲ, ವಿಯೆಟ್ನಾಂಗೆ ರಫ್ತು ಮಾಡಲು ಉತ್ತರ ಪ್ರದೇಶದ ಅಲಿಗಢದಲ್ಲಿ ಖರೀದಿಸಿದ ಅಧಿಕೃತ ಎಮ್ಮೆ ಮಾಂಸ ಎಂದು ಹೇಳಿ ಪುಣೆಯ ವಾಡ್ಗಾಂವ್ ಮಾವಲ್ ನ್ಯಾಯಾಲಯದ ಮೊರೆಹೋಗಿತ್ತು. ಆದರೆ, ಕಂಪನಿ ಒದಗಿಸಿದ ದಾಖಲೆಗಳಲ್ಲಿನ ಗೊಂದಲ, ಹೈದರಾಬಾದ್ನ ಪಶುಸಂಗೋಪನಾ ಇಲಾಖೆಯ ಅನುಮತಿ ಇಲ್ಲದಿರುವುದು ಮತ್ತು ಇ-ವೇ ಬಿಲ್ ಅನ್ನು ನಾಗ್ಪುರ ಮೂಲದ ‘ಚೌಧರಿ ಎಂಟರ್ಪ್ರೈಸಸ್’ ಸೃಷ್ಟಿಸಿರುವುದನ್ನು ಗಮನಿಸಿದ ನ್ಯಾಯಾಧೀಶರು, ಮಾಂಸವು ಎಮ್ಮೆಯದ್ದೇ ಎಂಬುದಕ್ಕೆ ಪೂರಕ ದಾಖಲೆಗಳಿಲ್ಲದ ಕಾರಣ ಅದನ್ನು ಕೋಲ್ಡ್ ಸ್ಟೋರೇಜ್ನಲ್ಲಿಡಲು ಆದೇಶಿಸಿದ್ದಾರೆ.
ಪ್ರಮುಖ ವಿಷಯವೇನಂದರೆ, ಈ ಗೋಮಾಂಸ ರಫ್ತು ಜಾಲವು ನಿತಿನ್ ಗಡ್ಕರಿ ಅವರ ಪುತ್ರ ನಿಖಿಲ್ ಗಡ್ಕರಿ ಅವರಿಗೆ ಸಂಬಂಧಿಸಿದ ‘ಸಿಯಾನ್ ಆಗ್ರೋ’ (Cian Agro) ಹಾಗೂ ರೆಂಬಲ್ ಕಂಪನಿಗಳೊಂದಿಗೆ ನೇರ ನಂಟು ಹೊಂದಿದೆ ಎಂದು ಕ್ಯಾರವಾನ್ ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಪ್ರಮುಖವಾಗಿದ್ದ ರೆಂಬಲ್ ಆಗ್ರೋ ಕಂಪನಿಯು ಈಗ ವೆನಾಡ್ ಫುಡ್ ಇಂಡಸ್ಟ್ರೀಸ್ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬದ ವ್ಯವಹಾರ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ದಾಖಲೆಗಳು ಸೂಚಿಸುತ್ತವೆ.
ನಿಖಿಲ್ ಗಡ್ಕರಿ ನಿರ್ವಹಿಸುವ ಸಿಯಾನ್ ಆಗ್ರೋ ಸಂಸ್ಥೆಯೊಂದಿಗೆ ರೆಂಬಲ್ ಆರ್ಥಿಕ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ರೆಂಬಲ್ ನಿರ್ದೇಶಕರು ಮತ್ತು ಷೇರುದಾರರಿಗೆ ಗಡ್ಕರಿ ಸಂಬಂಧಿತ ಸಂಸ್ಥೆಗಳು ಹಣಕಾಸು ನೆರವು ಒದಗಿಸಿದ್ದರು. ಗಡ್ಕರಿಯವರ ಪತ್ನಿ ಕಾಂಚನ್ ಅಧ್ಯಕ್ಷತೆಯಲ್ಲಿರುವ ಸಮೃದ್ಧಿ ಸಹಕಾರಿ ಬ್ಯಾಂಕಿನಿಂದಲೂ ರೆಂಬಲ್ ಸಾಲ ಪಡೆದಿದೆ. ರೆಂಬಲ್ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ಕುಮಾರ್ ಪಿಳ್ಳೈ ಹಿಂದೆ ಗಡ್ಕರಿ ಸಂಸ್ಥೆಯೊಂದನ್ನು ಅದೇ ವಿಳಾಸದಲ್ಲಿ ನಿರ್ವಹಿಸಿದ್ದವರಾಗಿದ್ದಾರೆ ಎಂದು ಕ್ಯಾರವಾನ್ ವರದಿ ತಿಳಿಸಿದೆ.
ಗೋರಕ್ಷಣೆಯ ಕಾಯ್ದೆಗಳಿದ್ದರೂ ಇಂತಹ ದೈತ್ಯ ಸಂಸ್ಥೆಗಳು ಲಾಭಕೋರತನಕ್ಕೆ ಇಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.





