ವ್ಯಕ್ತಿಯೊಬ್ಬರ ಪರವಾಗಿ ತೀರ್ಪು ನೀಡಲು 15 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಹಣ ಪಡೆದ ಆರೋಪದಲ್ಲಿ ನ್ಯಾಯಾಧೀಶ ಮತ್ತು ಅದೇ ನ್ಯಾಯಾಲಯದ ಗುಮಾಸ್ತನ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಮುಂಬೈನ ಮಝಗಾಂವ್ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಎಜಾಝುದ್ದೀನ್ ಸಲಾವುದ್ದೀನ್ ಕಾಝಿ ಮತ್ತು ಗುಮಾಸ್ತ ಚಂದ್ರಕಾಂತ್ ಹನ್ಮಂತ್ ವಾಸುದೇವ್ ವಿರುದ್ಧ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ, ನ್ಯಾಯಾಧೀಶ ಮತ್ತು ಗುಮಾಸ್ತನ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿಕೊಂಡಿದೆ.
“ದೂರುದಾತ ವ್ಯಕ್ತಿಯ ಪತ್ನಿ 2015ರಲ್ಲಿ ಭೂ ಕಬಳಿಕೆ ಆರೋಪದ ಕುರಿತು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. 2016ರ ಏಪ್ರಿಲ್ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮೂರನೇ ವ್ಯಕ್ತಿಗಳ ಹಕ್ಕು ರಚನೆ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಆದಾಗ್ಯೂ, ಆಸ್ತಿಯ ಮೌಲ್ಯ 10 ಕೋಟಿ ರೂ.ಗಿಂತ ಕಡಿಮೆ ಇರುವುದರಿಂದ, 2024ರ ಮಾರ್ಚ್ನಲ್ಲಿ ಈ ದಾವೆಯನ್ನು ವಾಣಿಜ್ಯ ಮೊಕದ್ದಮೆಯಾಗಿ ಮಝಗಾಂವ್ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು” ಎಂದು ಎಸಿಬಿ ನೀಡಿರುವ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
“ಸಿವಿಲ್ ನ್ಯಾಯಾಲಯದಲ್ಲಿ ಕಳೆದ ತಿಂಗಳು (ಸೆಪ್ಟೆಂಬರ್) 9ರಂದು ವಿಚಾರಣೆ ನಡೆದಿದೆ. ಇದೇ ಸಂದರ್ಭದಲ್ಲಿ ದೂರುದಾರರನ್ನು ಸಂಪರ್ಕಿಸಿದ ನ್ಯಾಯಾಲಯದ ಗುಮಾಸ್ತ ವಾಸುದೇವ್, ತನ್ನನ್ನು ಭೇಟಿ ಯಾಗುವಂತೆ ತಿಳಿಸಿದ್ದರು. ಸೆಪ್ಟೆಂಬರ್ 12ರಂದು ಚೆಂಬೂರಿನ ಸ್ಟಾರ್ ಬಕ್ಸ್ನಲ್ಲಿ ದೂರುದಾರ ಮತ್ತು ವಾಸುದೇವ್ ಭೇಟಿ ಯಾಗಿದ್ದರು. ಆಗ, ತಮ್ಮ ಪರವಾಗಿ ತೀರ್ಪು ನೀಡಲು ಒಟ್ಟು 25 ಲಕ್ಷ ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ, 10 ಲಕ್ಷ ರೂ. ತನಗೂ ಮತ್ತು 15 ಲಕ್ಷ ರೂ. ನ್ಯಾಯಾಧೀಶರಿಗೂ ಹಂಚಿಕೆಯಾಗುವುದಾಗಿ ಹೇಳಿದ್ದರು. ಆದರೆ, ಲಂಚ ಕೊಡಲು ದೂರುದಾರರು ನಿರಾಕರಿಸಿದ್ದರು” ಎಂದು ಎಸಿಬಿ ಮಾಹಿತಿ ನೀಡಿರುವುದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಅವಕಾಶವನ್ನು ಕೈ ಚೆಲ್ಲುವ ಕಾಂಗ್ರೆಸ್ – ಚೆಲ್ಲಿದ್ದನ್ನು ಗಬಕ್ಕನೆ ಕಬಳಿಸುವ ಬಿಜೆಪಿ
“ಆದಾಗ್ಯೂ, ಇದಾದ ಹಲವು ವಾರಗಳ ನಂತರ, ಮತ್ತೊಮ್ಮೆ ಲಂಚದ ಬೇಡಿಕೆ ಬಂದಿತ್ತು. ಆಗ, ಲಂಚದ ಬೇಡಿಕೆಯು 15 ಲಕ್ಷ ರೂ.ಗೆ ಇಳಿಕೆಯಾಗಿತ್ತು. ಗುಮಾಸ್ತನ ನಿರಂತರ ಕಿರುಕುಳ ತಾಳಲಾರದೆ, ದೂರುದಾರರು ನವೆಂಬರ್ 10ರಂದು ಎಸಿಬಿಗೆ ನ್ಯಾಯಾಧೀಶ ಮತ್ತು ಗುಮಾಸ್ತನ ವಿರುದ್ಧ ದೂರು ನೀಡಿದ್ದರು. ನ.11ರಂದು ಕಾರ್ಯಾಚರಣೆ ನಡೆಸಿದ ಎಸಿಬಿ, 15 ಲಕ್ಷ ರೂ. ಹಣವನ್ನು ದೂರುದಾರನಿಗೆ ಕೊಟ್ಟು, ವಾಸುದೇವ್ ಕೊಡುವಂತೆ ಸೂಚಿಸಿತ್ತು. ದೂರುದಾರನಿಂದ ವಾಸುದೇವ್ ಆ ಹಣವನ್ನು ಪಡೆಯುವಾಗ, ಆತನನ್ನು ಎಸಿಬಿ ರೆಡ್ಹ್ಯಾಂಡ್ಆಗಿ ಹಿಡಿದಿದೆ’ ಎಂದು ಎಸಿಬಿ ವಿವರಿಸಿದೆ.
ನ್ಯಾಯಾಧೀಶ ಕಾಝಿ ಮತ್ತು ವಾಸುದೇವ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 7A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.




