ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಮರಗಳನ್ನು ಕಡಿಯುವುದನ್ನು, ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಸೈನಿಕರ ಬಲಿದಾನಕ್ಕೆ ಹೋಲಿಸಿರುವ ಮಹಾರಾಷ್ಟ್ರ ಪರಿಸರ ಸಚಿವೆ ಪಂಕಜಾ ಮುಂಡೆ ಅವರ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮುಂಬೈ ಕ್ಲೈಮೇಟ್ ವೀಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಂಕಜಾ ಮುಂಡೆ, ಅಭಿವೃದ್ಧಿಗಾಗಿ ಮರ ಕಡಿಯುವುದನ್ನು ಸಮರ್ಥಿಸಿ ಈ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
“ಒಬ್ಬ ತಾಯಿ ತನ್ನ ಮಗನನ್ನು ಪೋಷಿಸಿ-ಬೆಳೆಸಿ ದೇಶಕ್ಕಾಗಿ ಹೋರಾಡಲು ಎಂಥ ಧೈರ್ಯದಿಂದ ಗಡಿಗೆ ಕಳುಹಿಸುತ್ತಾಳೆಯೋ, ಅದೇ ರೀತಿ ನಾವು ಮರಗಳನ್ನು ಬೆಳೆಸಿದರೆ ಕೆಲವೊಮ್ಮೆ ಅವುಗಳನ್ನು ಕಡಿಯಬೇಕಾಗುತ್ತದೆ. ಆದರೆ, ಒಂದು ಕಡೆ ಕಡಿದರೆ ನಾವು ಬೇರೆ ಕಡೆ ಅವುಗಳನ್ನು ನೆಡಬಹುದು. ಮರಗಳನ್ನು ಉಳಿಸಬೇಕು ಎಂಬ ಕಾರಣಕ್ಕಾಗಿ ಅಭಿವೃದ್ಧಿಯನ್ನು ಬೇಡ ಎನ್ನಲಾಗದು. ಪ್ರಗತಿಗಾಗಿ ನಾವು 5 ಮರಗಳನ್ನು ಕಡಿದರೆ, 10 ಮರಗಳನ್ನು ಬೆಳೆಸಬಹುದು. ಇದೊಂದೆ ಮಾರ್ಗ” ಎಂದು ಬಿಜೆಪಿ ನಾಯಕಿ ಹಾಗೂ ಸಚಿವೆಯಾಗಿರುವ ಮುಂಡೆ ಹೇಳಿದ್ದಾರೆ.
“ಮರಗಳನ್ನು ಸೈನಿಕರ ರೀತಿ ಭಾವಿಸಿ. ಅವು ಬದುಕಿರುವವರೆಗೆ ನಮ್ಮನ್ನು ರಕ್ಷಿಸುತ್ತವೆ ಹಾಗೂ ಅವುಗಳನ್ನು ತೆಗೆದುಹಾಕಿದಾಗಲೂ ಅವು ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ” ಎಂದು ಮರಗಳ ನಾಶವನ್ನು ಸೈನಿಕರ ಸೇವೆಗೆ ಹೋಲಿಸಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್: ನಾರ್ಕೊ-ಟೆರರಿಸಂ ಕಪಿಮುಷ್ಠಿಯಲ್ಲಿ ಗಡಿರಾಜ್ಯ; ಮನೆ ಬಾಗಿಲಿಗೆ ಡ್ರಗ್ಸ್ ಡೆಲಿವರಿ!
ಸಾಮಾಜಿಕ ಜಾಲತಾಣಗಳ ಆಕ್ರೋಶ
ಮುಂಡೆ ಅವರ ಈ ವಿಡಿಯೋ ಹೇಳಿಕೆಯನ್ನು ಸಾಮಾಜಿಕ ಹೋರಾಟಗಾರ್ತಿ ಅಂಜಲಿ ದಮಾನಿಯಾ ಅವರು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿದ್ದು”ಈ ಪರಿಸರ ಸಚಿವೆಯ ಬುದ್ಧಿಮತ್ತೆಯನ್ನು ನೋಡಿ ನನಗೆ ಸಂಕಟವಾಗುತ್ತಿದೆ” ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನೆಟ್ಟಿಗರು ಸಚಿವೆಯ ಹೇಳಿಕೆಯನ್ನು ವಿರೋಧಿಸಿದ್ದು, ದೇಶಾಭಿಮಾನದ ಹೆಸರಿನಲ್ಲಿ ಪರಿಸರ ನಾಶವನ್ನು ಸಮರ್ಥಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.





