ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಸೌಂದಲ ಗ್ರಾಮವು ತನ್ನನ್ನು ಜಾತಿ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡಿದೆ. ಗ್ರಾಮದಲ್ಲಿ ಜಾತಿ ಆಧಾರಿತ ತಾರತಮ್ಯ ಅಥವಾ ಜನರನ್ನು ಜಾತಿ ಆಧಾರದಲ್ಲಿ ಗುರುತಿಸುವುದು ಇದೀಗ ಈ ಗ್ರಾಮದಲ್ಲಿ ನಿಷೇಧವಾಗಿದೆ. ಸಂವಿಧಾನ ಮತ್ತು ಅದರ ಪೀಠಿಕೆಯನ್ನು ನೆನಪಿಸಿಕೊಂಡು ಇತ್ತೀಚೆಗೆ ನಡೆದ ಸೌಂದಲ ಗ್ರಾಮಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
“ಇಂದಿನಿಂದ, ಸೌಂದಲ ಗ್ರಾಮದಲ್ಲಿ ಯಾರೂ ಜಾತಿಯನ್ನು ಅನುಸರಿಸುವುದಿಲ್ಲ ಅಥವಾ ಯಾವುದೇ ರೀತಿಯ ಜಾತಿ ಪದ್ಧತಿಗಳಲ್ಲಿ ತೊಡಗುವುದಿಲ್ಲ. ನಾವು ಮಾನವೀಯತೆಯನ್ನು ಧರ್ಮವಾಗಿ ಅನುಸರಿಸುತ್ತೇವೆ. ಗ್ರಾಮಸ್ಥರು ಅನುಸರಿಸಬೇಕಾದ ಏಕೈಕ ಧರ್ಮ ಮಾನವೀಯತೆ” ಎಂದು ನಿರ್ಣಯದಲ್ಲಿ ಬರೆಯಲಾಗಿದೆ.
ಇದನ್ನು ಓದಿದ್ದೀರಾ? ಸಾಮಾಜಿಕ ಬಹಿಷ್ಕಾರ ಹಾಕಿದ್ರೆ ಕಂಬಿ ಎಣಿಸೋದು ಪಕ್ಕಾ!
ಈ ನಿರ್ಣಯವನ್ನು ಸರಪಂಚ್ ಶರದ್ ಅರ್ಗಡೆ ಪ್ರಸ್ತಾಪಿಸಿದ್ದು, ಗ್ರಾಮದ ನಿವಾಸಿ ಬಾಬಾಸಾಹೇಬ್ ಭೋಡಕ್ ಅನುಮೋದಿಸಿದರು. ಹಾಗೆಯೇ ಜಾತಿ ಮುಕ್ತ ಸಮಾಜವನ್ನು ಸ್ಥಾಪಿಸಲು ಬಿ.ಆರ್. ಅಂಬೇಡ್ಕರ್, ಜ್ಯೋತಿಭಾ ಫುಲೆ, ಶಾಹು ಮಹಾರಾಜ್, ಛತ್ರಪತಿ ಶಿವಾನಿ ಮಹಾರಾಜ್ ಮತ್ತು ಮಹಾತ್ಮ ಗಾಂಧಿ ಅವರಿಂದ ಈ ಗ್ರಾಮ ಸ್ಫೂರ್ತಿ ಪಡೆದಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
“ನನ್ನ ಜಾತಿ ಮಾನವೀಯತೆ. ಇನ್ನು ಮುಂದೆ ಸರ್ಕಾರ ಮತ್ತು ಸಮುದಾಯ ಸೇವೆಗಳು ಎಲ್ಲಾ ಜನರಿಗೆ ಮುಕ್ತವಾಗಿರುತ್ತವೆ. ಜಾತಿ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಶಾಲೆಗಳು, ಸಮುದಾಯ ಭವನ, ದೇವಾಲಯಗಳು, ಬಾವಿ ಮತ್ತು ಸ್ಮಶಾನ ಎಲ್ಲರಿಗೂ ಮುಕ್ತವಾಗಿರುತ್ತದೆ. ಸಮಾಜವನ್ನು ವಿಭಜಿಸುವ ಯಾವುದೇ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾರೂ ಬರೆಯುವಂತಿಲ್ಲ. ಯಾರಾದರೂ ಈ ನಿರ್ಣಯ ಪಾಲಿಸದಿದ್ದರೆ, ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳುತ್ತದೆ. ಇನ್ನು ಮುಂದೆ, ಈ ಗ್ರಾಮವು ಜಾತಿ ಮುಕ್ತವಾಗಿದೆ” ಎಂದು ನಿರ್ಣಯವನ್ನು ಗ್ರಾಮ ಸಭೆಯಲ್ಲಿ ಓದಲಾಗಿದೆ.
ನಿರ್ಣಯವನ್ನು ಬಹುಮತದ ಮೂಲಕ ಅಂಗೀಕರಿಸಲಾಗಿದ್ದು, ಸಂವಿಧಾನದ ನೀತಿಗಳನ್ನು ಉಲ್ಲಂಘಿಸಿದರೆ ದಂಡ ತೆರಬೇಕಾಗಿತ್ತದೆ ಎಂದು ನಿರ್ಣಯದಲ್ಲಿ ಬರೆಯಲಾಗಿದೆ. ಪ್ರತಿಯೊಬ್ಬರೂ ಹೊಸ ನಿಯಮವನ್ನು ಅನುಸರಿಸಬೇಕು ಎಂದು ಸರಪಂಚ್ ತಾಕೀತು ಮಾಡಿದ್ದಾರೆ. ಹಾಗೆಯೇ “ಈ ನಿಯಮಗಳು ಯಾವುದೇ ರೀತಿಯಲ್ಲಿ ಕಾನೂನು ಮತ್ತು ಸಂವಿಧಾನ ವಿರೋಧಿಯಾಗಿಲ್ಲ” ಎಂದೂ ಸರಪಂಚ್ ಶರದ್ ಅರ್ಗಡೆ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ
ಇತ್ತೀಚೆಗೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಪಂಚೇವಾ ಗ್ರಾಮ ಪಂಚಾಯತ್ ಗ್ರಾಮದ ಯುವತಿಯರು ಪ್ರೇಮ ವಿವಾಹವಾದರೆ ಅಥವಾ ಮನೆ ತೊರೆದು ಹೋಗಿ ವಿವಾಹವಾದರೆ ಯುವತಿಯ ಕುಟುಂಬಕ್ಕೆ ಮತ್ತು ಅವರಿಗೆ ಬೆಂಬಲ ನೀಡುವವರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹಾಕಲಾಗುವುದು ಎಂದು ಘೋಷಿಸಿತ್ತು.
ಒಂದೇ ಗ್ರಾಮದ ಯುವಕ-ಯುವತಿಯರು ಪರಸ್ಪರ ವಿವಾಹವಾದರೆ ಅವರನ್ನು ಗ್ರಾಮದಿಂದ ಹೊರಹಾಕಲು ಮತ್ತು ಅವರ ಕುಟುಂಬಗಳಿಗೆ ಬಹಿಷ್ಕಾರ ಹಾಕಲು ಪಂಜಾಬ್ನ ಅಜ್ನಾಲಾ ಪ್ರದೇಶದ ಗ್ರಾಮ ನಿರ್ಣಯ ಅಂಗೀಕರಿಸಿತ್ತು. ಸಂವಿಧಾನ ವಿರೋಧಿ ನಿರ್ಣಯಗಳು ಸುದ್ದಿಯಾಗುತ್ತಿರುವ ನಡುವೆಯೇ ಸೌಂದಲ ಗ್ರಾಮವು ಅಸ್ಪೃಶ್ಯತೆಯನ್ನು ಪಾಲಿಸಲ್ಲ ಎಂದು ಸಕಾರಾತ್ಮಕ ನಿರ್ಣಯ ಕೈಗೊಂಡ ಗ್ರಾಮವಾಗಿದೆ.





