‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (MGNREGS-ಮನರೇಗಾ) ಹೆಸರು ಬದಲಿಸುವ ಮತ್ತು ಯೊಜನೆಯನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಹೊಸ ಮಸೂದೆ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಮನರೇಗಾವನ್ನು ‘ವಿಕಸಿತ್ ಭಾರತ್ ರೋಜ್ಗಾರ್ ಆ್ಯಂಡ್ ಅಜೀವಿಕಾ ಮಿಷನ್-ಗ್ರಾಮೀಣ ಯೋಜನೆ’ (ವಿಬಿ ಜಿ ರಾಮ್ ಜಿ) ಎಂದು ಬದಲಿಸುವ ಕೇಂದ್ರದ ಪ್ರಸ್ತಾಪವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸಂಸದರು ಖಂಡಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹಿಡಿದು ಸಂಸದರು ಪ್ರತಿಭಟನೆ ನಡೆಸಿದ್ದಾರೆ. “ಪ್ರಸ್ತಾವಿತ ಹೊಸ ಮಸೂದೆಯು ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತದೆ. ಯೋಜನೆಯ ಗುರಿ, ಮಹತ್ವಾಕಾಂಕ್ಷೆಯನ್ನು ಅರಿಯದೆ, ಪೂರ್ವಾಗ್ರಹದ ಆಧಾರದ ಮೇಲೆ ಯಾವುದೇ ಮಸೂದೆಯನ್ನು ಅಂಗೀಕರಿಸಬಾರದು. ಮಸೂದೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿಯೂ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳು ಸೆಕ್ಷನ್ 72(1)ರ ಅಡಿಯಲ್ಲಿ ಮಸೂದೆಯನ್ನು ಪ್ರಿಯಾಂಕಾ ಗಾಂಧಿ ವಿರೋಧಿಸಿದ್ದಾರೆ. “ಮಸೂದೆಗೆ ನಾನು ಬಲವಾದ ಆಕ್ಷೇಪಣೆ ವ್ಯಕ್ತಪಡಿಸುತ್ತೇನೆ. ಗ್ರಾಮೀಣ ಭಾರತಕ್ಕೆ ಜೀವನೋಪಾಯವನ್ನು ಒದಗಿಸುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ 20 ವರ್ಷಗಳಿಂದ ಮನರೇಗಾ ಯಶಸ್ವಿಯಾಗಿದೆ. ಇದು ಎಷ್ಟು ಕ್ರಾಂತಿಕಾರಿ ಕಾನೂನೆಂದರೆ, ಇದನ್ನು ತಂದಾಗ, ಸಂಸತ್ತಿನಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದಿಂದ ಇದನ್ನು ಬೆಂಬಲಿಸಿದ್ದವು. ಇದು ಈ ದೇಶದ ಅತ್ಯಂತ ಬಡವರಿಗೆ ಒಂದು ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸುತ್ತದೆ” ಎಂದು ವಿವರಿಸಿದರು.
“ಮನರೇಗಾವನ್ನು 2005ರಲ್ಲಿ ಆಗಿನ ಯುಪಿಎ ಸರ್ಕಾರವು ತಂದಿತು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ವರ್ಷದಲ್ಲಿ 100 ದಿನಗಳ ವೇತನದ ಕೆಲಸವನ್ನು ಖಾತರಿಪಡಿಸಿತು. ಕಳೆದ ಎರಡು ದಶಕಗಳಲ್ಲಿ ಈ ಯೋಜನೆಯು ಗ್ರಾಮೀಣ ಆರ್ಥಿಕತೆಯಲ್ಲಿ ಒಂದು ಪ್ರಮುಖ ಬದಲಾವಣೆ ತಂದಿದೆ ಎಂದೇ ಪ್ರಶಂಸೆ ಪಡೆದಿದೆ. ಯೋಜನೆಯು ಬೇಡಿಕೆಯ ಆಧಾರದ ಮೇಲೆ ಕೆಲಸ ಒದಗಿಸುತ್ತದೆ. ಯೋಜನೆಗೆ ಕೇಂದ್ರ ಒದಗಿಸುವ ಹಣಕಾಸು ಕೂಡ ಬೇಡಿಕೆಗೆ ಆಧಾರಿತವಾಗಿದೆ. ಆದರೆ, ಹೊಸ ಮಸೂದೆಯು ಯೋಜನೆಗೆ ಕೇಂದ್ರ ಸರ್ಕಾರವು ಮೊದಲೇ ನಿಧಿ ಹಂಚಿಕೆಯನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
“ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕೆಲಸದ ಬೇಡಿಕೆಯನ್ನು ನಿರ್ಣಯಿಸಲು ಗ್ರಾಮ ಸಭೆಗಳಿಗೆ ಯೋಜನೆಯು ಅಧಿಕಾರ ನೀಡಿತ್ತು. ಆದರೆ, ಹೊಸ ಮಸೂದೆ ಗ್ರಾಮ ಸಭೆಗಳ ಪಾತ್ರವನ್ನು ದುರ್ಬಲಗೊಳಿಸುತ್ತದೆ. ತನ್ನಿಚ್ಛೆಯ ಪ್ರದೇಶಗಳಲ್ಲಿ, ತಾನು ನಿಗದಿಪಡಿಸಿದಷ್ಟು ಉದ್ಯೋಗಗಳನ್ನು ಮಾತ್ರವೇ ಒದಗಿಸುತ್ತದೆ. ಬೇಡಿಕೆಗೆ ಅವಕಾಶವೇ ಇಲ್ಲ. ಉದ್ಯೋಗದ ಹಕ್ಕನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಯೊಜನೆಯಡಿ ಹೆಚ್ಚಿನ ರಾಜ್ಯಗಳಿಗೆ ಕೇಂದ್ರದ ನಿಧಿ ಹಂಚಿಕೆಯನ್ನು 60%ಗೆ ಇಳಿಸಲಾಗಿದೆ. ಇದು, ಕೇಂದ್ರ ಸರ್ಕಾರವು ಬಾಕಿ ಉಳಿಸಿಕೊಂಡಿರುವ ಜಿಎಸ್ಟಿ ಹಂಚಿಕೆಗಾಗಿ ಕಾಯುತ್ತಿರುವ ರಾಜ್ಯಗಳ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.
ಈ ಲೇಖನ ಓದಿದ್ದೀರಾ?: ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
“ಪ್ರತಿಯೊಂದು ಯೋಜನೆಯ ಹೆಸರನ್ನು ಬದಲಾಯಿಸುವ ‘ಹುಚ್ಚು’ ಕೇಂದ್ರ ಸರ್ಕಾರಕ್ಕಿದೆ. ಇಂತಹ ಕ್ರಮಗಳನ್ನು ತೆಗೆದುಕೊಂಡಾಗಲೆಲ್ಲ ಹೆಸರು ಬದಲಾವಣೆಗಾಗಿಯೇಕೇಂದ್ರವು ಹೆಚ್ಚ ವೆಚ್ಚವನ್ನು ಭರಿಸುತ್ತದೆ. ಅದು ಜನರ ಹಣ. ಚರ್ಚೆಯಿಲ್ಲದೆ, ಸದನದ ಸಲಹೆಯನ್ನು ಪಡೆಯದೆ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಬಾರದು. ಈ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಕುಟುಂಬದ ಹೆಸರೆಂದು ಉಲ್ಲೇಖಿಸಿದ ಆಡಳಿತ ಪಕ್ಷದ ಸಂಸದರಿಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, “ಮಹಾತ್ಮಾ ಗಾಂಧಿ ನನ್ನ ಕುಟುಂಬದವರಲ್ಲ. ಆದರೆ, ಅವರು ನನ್ನ ಕುಟುಂಬದ ಸದಸ್ಯರಿದ್ದಂತೆ. ಗಾಂಧಿ ಅವರನ್ನು ಇಡೀ ದೇಶವು ಅದೇ ರೀತಿ ಭಾವಿಸುತ್ತದೆ” ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿಯ ಜೊತೆಗೆ, ಹಲವಾರು ವಿಪಕ್ಷಗಳ ಸಂಸದರು ಹೊಸ ಮಸೂದೆಯ ನಿಬಂಧನೆಗಳನ್ನು ವಿರೋಧಿಸಿದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಮಸೂದೆಯನ್ನು ವಿರೋಧಿಸಿದ್ದು, ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು ‘ಅನೈತಿಕ’ ಎಂದು ಹೇಳಿದರು.




