ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಮುಂಬೈ ಪಾಲಿಕೆಯ ಮೇಲೆ ಠಾಕ್ರೆ ಕುಟುಂಬಕ್ಕಿದ್ದ ದಶಕಗಳ ಸುದೀರ್ಘ ಹಿಡಿತ ಅಂತ್ಯಗೊಂಡಿದ್ದು, ಬರೋಬ್ಬರಿ 28 ವರ್ಷಗಳ ನಂತರ ‘ಠಾಕ್ರೆ ಕೋಟೆ’ ಪತನವಾಗಿದೆ.
ಬಿಎಂಸಿ ಚುನಾವಣಾ ಫಲಿತಾಂಶದ ಪ್ರಕಾರ, ಮಹಾಯುತಿ ಒಕ್ಕೂಟವು ಸ್ಪಷ್ಟ ಬಹುಮತ ಸಾಧಿಸಿದ್ದು, ದೀರ್ಘಕಾಲದ ಅಂತರದ ನಂತರ ಮುಂಬೈ ಮಹಾನಗರಿಗೆ ಬಿಜೆಪಿ-ಶಿವಸೇನೆ ಮೈತ್ರಿಕೂಟದ ಮೇಯರ್ ಆಯ್ಕೆಯಾಗುವುದು ಖಚಿತವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ʼಪುರುಷಹಂಕಾರʼದ ದೌರ್ಜನ್ಯಕ್ಕೆ ಕೊನೆ ಎಂದು?
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಬಿಜೆಪಿ, ತನ್ನ ಹಿಂದಿನ ಸಾಧನೆಗಿಂತಲೂ ಉತ್ತಮ ಪ್ರದರ್ಶನ ನೀಡಿದೆ. 2017ರ ಚುನಾವಣೆಯಲ್ಲಿ 82 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಆ ದಾಖಲೆಯನ್ನು ಮುರಿದು ಒಟ್ಟು 227 ವಾರ್ಡ್ಗಳ ಪೈಕಿ 90 ಸ್ಥಾನಗಳಲ್ಲಿ ಜಯಗಳಿಸುವ ಅಥವಾ ಮುನ್ನಡೆ ಸಾಧಿಸುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ.
ಇನ್ನೊಂದೆಡೆ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ (ಶಿಂಧೆ ಬಣ) 28 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದರೊಂದಿಗೆ ಮಹಾಯುತಿ ಒಕ್ಕೂಟವು ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ಸಂಖ್ಯೆಯಾದ 114ರ ಗಡಿಯನ್ನೂ ದಾಟಿದೆ.





