ದುರುಳ ವ್ಯಕ್ತಿಯೊಬ್ಬ ತನ್ನ ನವವಿವಾಹಿತ ಪತ್ನಿಯನ್ನು ಕೊಂದು, ಅಪಘಾತವೆಂದು ಬಿಂಬಿಸಿ ವಿಮಾ (ಇನ್ಶ್ಯೂರೆನ್ಸ್) ಹಣವನ್ನು ಪಡೆಯಲು ಯತ್ನಿಸಿರುವ ಘಟನೆ ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನು ಕೊಂದಿದ್ದ ದುರುಳನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮುಖೇಶ್ ಕುಮಾರ್ ಮೆಹ್ತಾ (30) ಎಂದು ಹೆಸರಿಸಲಾಗಿದೆ. ಆತ ನಾಲ್ಕು ತಿಂಗಳ ಹಿಂದೆಯಷ್ಟೇ ತನ್ನನ್ನು ವಿವಾಹವಾಗಿದ್ದ ಸೇವಂತಿ (23) ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ಅಕ್ಟೋಬರ್ 9ರ ರಾತ್ರಿ ನಡೆದಿದೆ ಎಂದು ಪದಮಾ ಔಟ್ ಪೋಸ್ಟ್ (OP) ಉಸ್ತುವಾರಿ ಸಂಚಿತ್ ಕುಮಾರ್ ದುಬೆ ತಿಳಿಸಿದ್ದಾರೆ.
ಸೇವಂತಿ ಅವರ ಹೆಸರಿನಲ್ಲಿ 30 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಲಾಗಿತ್ತು. ಆ ವಿಮಾ ಹಣವನ್ನು ಪಡೆಯಲು ಮುಖೇಶ್ ಸಂಚು ರೂಪಿಸಿದ್ದ. ಆಕೆಯನ್ನು ಕೊಲೆ ಮಾಡಿ, ರಸ್ತೆ ಅಪಘಾತವೆಂದು ಬಿಂಬಿಸಿದ್ದ ಎಂದು ತಿಳಿದುಬಂದಿದೆ.
“ಅಕ್ಟೋಬರ್ 9ರಂದು ರಾಷ್ಟ್ರೀಯ ಹೆದ್ದಾರಿ-33ರ ಪದಮಾ-ಇಟ್ಖೋರಿ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ದಂಪತಿಗಳು ಗಾಯಗೊಂಡಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ದೊರೆಯಿತು. ನಾವು ಸ್ಥಳಕ್ಕೆ ಧಾವಿಸಿ ಮೃತ ಸೇವಂತಿ ಕುಮಾರಿ ಮತ್ತು ಪ್ರಜ್ಞಾಹೀನರಂತೆ ನಟಿಸಿದ ಮುಖೇಶ್ಅನ್ನು ಆಸ್ಪತ್ರೆಗೆ ಕರೆತಂದೆವು. ಸೇವಂತಿ ಮೃತಪಟ್ಟಿದ್ದಾರೆಂದು ವೈದ್ಯರು ಅಧಿಕೃತವಾಗಿ ಘೋಷಿಸಿದ ಬಳಿಕ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಮೇಲ್ನೋಟಕ್ಕೆ ಗಾಯಗೊಂಡಿದ್ದ ಪತಿಗೆ ಚಿಕಿತ್ಸೆ ನೀಡಲಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ‘ಅನ್ನಭಾಗ್ಯ’ ಯೋಜನೆಯಲ್ಲಿ ‘ಇಂದಿರಾ ಕಿಟ್’; ಪೌಷ್ಠಿಕ ಆಹಾರ ಪೂರೈಕೆಗೆ ಹೊಸ ಮೈಲಿಗಲ್ಲು
ಆದಾಗ್ಯೂ, ಸೇವಂತಿ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಮುಖೇಶ್ನ ವರ್ತನೆಯನ್ನು ಕಂಡ ಸ್ಥಳೀಯರು ಅನುಮಾನ ವ್ಯಕ್ತಪಪಡಿಸಿದರು. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ತನಿಖೆ ಆರಂಭಿಸಿದಾಗ, ಮುಖೇಶ್ ತನ್ನ ಪತ್ನಿಯ ಹೆಸರಿನಲ್ಲಿದ್ದ 30 ಲಕ್ಷ ರೂ. ಅಪಘಾತ ವಿಮೆಯ ಕ್ಲೈಮ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಗೊತ್ತಾಯಿತು. ಅನುಮಾನಗೊಂಡು ಆತನನ್ನು ವಿಚಾರಣೆಗೆ ಒಳಪಡಿಸಿದೆವು ಎಂದು ಪೊಲೀಸರು ತಿಳಿಸಿದ್ದಾರೆ.
“ತೀವ್ರ ವಿಚಾರಣೆಯ ಸಮಯದಲ್ಲಿ, ಅವರು ವಿಮಾ ಹಣಕ್ಕಾಗಿ ಆಕೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಕ್ಟೋಬರ್ 9 ರಂದು ರಾತ್ರಿ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ತನ್ನ ಹೆಂಡತಿಯನ್ನು ಕರೆತಂದು ಹೆಲ್ಮೆಟ್ನಿಂದ ಹೊಡೆದಿದ್ದಾರೆ. ಬಳಿಕ, ಕತ್ತು ಹಿಸುಕಿ ಕೊಂದಿದ್ದಾರೆ. ಆ ನಂತರ, ತನಗೂ-ಬೈಕಿಗೂ ಹಾನಿ ಮಾಡಿಕೊಂಡು, ಅಪಘಾತವೆಂದು ಬಿಂಬಿಸಿದ್ದಾಗಿ ಒಪ್ಪಿಕೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನಾವು ಆರೋಪಿಯನ್ನು ಸೋಮವಾರ ಸಂಜೆ ಬಂಧಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಸಂಚಿತ್ ಕುಮಾರ್ ದುಬೆ ತಿಳಿಸಿದ್ದಾರೆ.




