ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಐಇಡಿ ಸ್ಫೋಟವಾಗಿ 20 ವರ್ಷದ ಯುವಕನೋರ್ವ ಸಾವನ್ನಪ್ಪಿದ್ದಾನೆ. ಈ ಐಇಡಿಯನ್ನು ಮಾವೋವಾದಿಗಳು ಇಟ್ಟಿದ್ದಾರೆ ಎಂದು ಆರೋಪಿಸಿರುವ ಭದ್ರತಾ ಪಡೆಗಳು ಸದ್ಯ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಭಾನುವಾರ ಸಮೀಪದ ಉಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿಪಾಡ್ ಗ್ರಾಮದ ನಿವಾಸಿ ಆಯ್ತಾ ಕುಹ್ರಾಮಿ ಹತ್ತಿರದ ಕಾಡಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಯುವಕ ಆಕಸ್ಮಿಕವಾಗಿ ಐಇಡಿ ಸಮೀಪ ಹೋಗಿದ್ದು ಅದು ಸ್ಫೋಟಗೊಂಡಿದೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಛತ್ತೀಸ್ಗಢ| ಬಸ್ತಾರ್ ಮತಗಟ್ಟೆ ಬಳಿ ಸ್ಫೋಟ: ಸಿಆರ್ಪಿಎಫ್ ಯೋಧ ಸಾವು
ಹೆಚ್ಚಿನ ಐಇಡಿಗಳನ್ನು ಇರಿಸಲಾಗಿದೆಯೇ ಎಂದು ಪರಿಶೀಲಿಸಲು ಭದ್ರತಾ ಸಿಬ್ಬಂದಿಗಳು ಸದ್ಯ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಅರಣ್ಯಗಳು ಮತ್ತು ದೂರದ ಪ್ರದೇಶಗಳಿಗೆ ಹೋಗುವಾಗ ಗ್ರಾಮಸ್ಥರು ತೀವ್ರ ಎಚ್ಚರಿಕೆ ವಹಿಸಬೇಕು. ಯಾವುದೇ ಅನುಮಾನಾಸ್ಪದ ವಸ್ತುಗಳು, ಚಟುವಟಿಕೆಗಳು ಅಥವಾ ವಸ್ತುಗಳು ಕಂಡುಬಂದರೆ ಸಮೀಪದ ಪೊಲೀಸ್ ಠಾಣೆ ಅಥವಾ ಭದ್ರತಾ ಶಿಬಿರಕ್ಕೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ಮಾವೋವಾದಿ ನಾಯಕರುಗಳು ಮತ್ತು ಭದ್ರತಾ ಪಡೆಗಳ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ. ಕಾಡುಗಳಲ್ಲಿರುವ ಮಾವೋವಾದಿಗಳು ತಮ್ಮನ್ನು ಬಂಧಿಸಲು ಬರುವ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಈ ಐಇಡಿಗಳನ್ನು ಇರಿಸುತ್ತಾರೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಬಳಿಕ ಅಂದರೆ 2014ರಿಂದ ಮಾವೋವಾದಿ ನಾಯಕರುಗಳನ್ನು ಎನ್ಕೌಂಟರ್ ನೆಪದಲ್ಲಿ ನೇರವಾಗಿ ಹತ್ಯೆ ಮಾಡಲಾಗುತ್ತಿದೆ. 2014ರಿಂದ ಈವರೆಗೆ ಒಟ್ಟು 2,089ಕ್ಕೂ ಹೆಚ್ಚು ಮಾವೋವಾದಿಗಳನ್ನು ಎನ್ಕೌಂಟರ್ಗಳಲ್ಲಿ ಹತ್ಯೆ ಮಾಡಲಾಗಿದೆ. ಆದರೆ ಮಾವೋವಾದಿ ನಾಯಕರುಗಳು ಹೇಳುವಂತೆ 4 ಸಾವಿರಕ್ಕೂ ಅಧಿಕ ಮಂದಿಯನ್ನು ಭದ್ರತಾ ಪಡೆ ಹತ್ಯೆಗೈದಿದೆ, ಇದರಲ್ಲಿ ಆದಿವಾಸಿಗಳೂ ಸೇರಿದ್ದಾರೆ.





