ಹಸು ಕಳ್ಳಸಾಗಣೆದಾರನೆಂದು ಶಂಕಿಸಿ ಸುಮಾರು 45 ವರ್ಷದ ವ್ಯಕ್ತಿಯನ್ನು ಭಾನುವಾರ ಮುಂಜಾನೆ ಸ್ವಘೋಷಿತ ಗೋ ರಕ್ಷಕರು ಥಳಿಸಿದ್ದಾರೆ. ದೆಹಲಿಯ ಸಫ್ದರ್ಗಂಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಹರಿಯಾಣದ ಪಲ್ವಾಲ್ ಜಿಲ್ಲೆಯ ಮುಂಡ್ಕಟಿ ಪೊಲೀಸ್ ಠಾಣಾ ವ್ಯಾಪ್ತಿಯ ಘುದ್ಪುರ ಗ್ರಾಮದ ನಿವಾಸಿ ಯೂಸುಫ್ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಗೋಹತ್ಯೆ ಶಂಕೆ: ವ್ಯಕ್ತಿಯನ್ನು ಥಳಿಸಿ ಕೊಂದ ಸ್ವಘೋಷಿತ ಗೋರಕ್ಷಕರು
ಈ ದಾಳಿಯ ಹಿಂದೆ ಸ್ವಯಂಘೋಷಿತ ಗೋ ರಕ್ಷಕರ ಕೈವಾಡವಿದೆ ಎಂದು ಯೂಸುಫ್ ಕುಟುಂಬದವರು ದೂರು ನೀಡಿದ್ದಾರೆ. ಕುಟುಂಬಸ್ಥರ ದೂರಿನ ಆಧಾರದಲ್ಲಿ ಮುಂಡ್ಕಟಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಸುಫ್ ಓರ್ವ ದನ ಸಾಕಣೆದಾರರಾಗಿದ್ದು, ಹಾಲು ವ್ಯಾಪಾರ ನಡೆಸುತ್ತಿದ್ದರು. ಅವರ ಮನೆಯಲ್ಲಿ ಸುಮಾರು 30 ಜಾನುವಾರುಗಳು ಇದ್ದವು. ಶುಕ್ರವಾರ ನಾಗ್ಲಾ ಗ್ರಾಮದಿಂದ ಕರು ಮತ್ತು ಹಸುವನ್ನು ಖರೀದಿಸಿ ಟೆಂಪೋದಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯೂಸುಫ್ ಬೈಕ್ನಲ್ಲಿ ಸಾಗುತ್ತಿದ್ದರು. ಜಾನುವಾರುಗಳಿದ್ದ ಟೆಂಪೋ ಅವರನ್ನು ಹಿಂಬಾಲಿಸುತ್ತಿತ್ತು. ಮಿತ್ರೋಲ್ ಗ್ರಾಮವನ್ನು ತಲುಪಿದಾಗ, ಬಾಡಿಗೆ ಟೆಂಪೋವನ್ನು ಕೆಲವು ಸ್ವಯಂಘೋಷಿತ ಗೋರಕ್ಷಕರು ತಡೆದಿದ್ದು ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಹೇಳಿ ಆರೋಪಿಸಿದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಸ್ವಘೋಷಿತ ಕೊಲೆಗಡುಕ, ಸ್ತ್ರೀ ಪೀಡಿಕ ಬ್ರಿಜ್ ಭೂಷಣ್ನ ಅಪರಾಧಗಳೆಷ್ಟು ಗೊತ್ತೇ ಕಂಬಳ ಆಯೋಜಕರೇ?
ಯೂಸುಫ್ ಅನ್ನು ತಡೆದು ಆತನಿಗೆ ತೀವ್ರವಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಯೂಸುಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದರು.
ಎಫ್ಐಆರ್ ದಾಖಲಾದ ನಂತರ ಕುಟುಂಬವು ಭಾನುವಾರ ತಡರಾತ್ರಿ ಅಂತ್ಯಸಂಸ್ಕಾರ ಮಾಡಿದೆ. ಯೂಸುಫ್ ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಕುಟುಂಬವು ಸರ್ಕಾರಕ್ಕೆ ಆರ್ಥಿಕ ಸಹಾಯವನ್ನು ನೀಡುವಂತೆ ಒತ್ತಾಯಿಸಿತು.
ಯೂಸುಫ್ ಯಾರೊಂದಿಗೂ ಯಾವುದೇ ವಿವಾದವನ್ನು ಹೊಂದಿಲ್ಲ. ಯಾವಾಗಲೂ ತನ್ನ ವ್ಯವಹಾರದಲ್ಲಿ ನಿರತರಾಗಿದ್ದರು ಎಂದು ಗ್ರಾಮದ ಸರಪಂಚ್ ಹೇಳಿದರು.
ಇದನ್ನು ಓದಿದ್ದೀರಾ? ಗೋ ರಕ್ಷಣೆಯ ಮರೆಯಲ್ಲಿ ಹಿಂದುತ್ವವಾದಿಗಳ ದನದ ವ್ಯಾಪಾರ, ವಸೂಲಿ ದಂಧೆಯಲ್ಲಿ ಸಾಯುವ ಡ್ರೈವರ್ಗಳು!
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸ್ವಘೋಷಿತ ಗೋ ರಕ್ಷಕರು ಅಮಾಯಕರ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಒಂದು ವೇಳೆ ಅವರು ಹಸು ಕಳ್ಳಸಾಗಣೆದಾರರು ಆಗಿದ್ದರೂ ಕೂಡಾ ಕಾನೂನು ಪ್ರಕಾರವಾಗಿ ಎಲ್ಲಾ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಅದರ ಬದಲಾಗಿ ಕಾನೂನು ಕೈಗೆ ಪಡೆದು ಥಳಿಸಿ ಹಲ್ಲೆ ಮಾಡುವ ಹಕ್ಕು ಯಾರಿಗೂ ಇಲ್ಲ. ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಈ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದಿರುವುದು ಶೋಚನೀಯ.





