2023ರಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಿಂದಾಗಿ ಸ್ಥಳಾಂತರಗೊಂಡಿದ್ದ ಜನರು ತಮ್ಮ ಮನೆಗಳಿಗೆ ಮರಳಲು ಯತ್ನಿಸಿದ್ದು, ನಾಗರಿಗರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷ ನಡೆದಿರುವ ಘಟನೆ ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಡೆದಿದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದ ಕಾರಣ, 2023ರ ಮೇ ತಿಂಗಳಿನಲ್ಲಿ ಇಂಫಾಲ್ ಪೂರ್ವ ಜಿಲ್ಲೆಯ ಜನರು ವಿವಿಧ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದರು. ಇದೀಗ, ಹಿಂಸಾಚಾರವು ತಣ್ಣಗಾಗಿದ್ದು, ಜನರು ಗ್ವಾಲ್ತಾಬಿ ಪ್ರದೇಶದಲ್ಲಿರುವ ತಮ್ಮ ನಿವಾಸಗಳಿಗೆ ಮರಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಬೃಹತ್ ಪ್ರಮಾಣದ ಜನರು ತಮ್ಮ ಮನೆಗಳಿಗೆ ತೆರಳಲು ಯೈಂಗಂಗ್ಪೋಕ್ಪಿ ಪ್ರದೇಶಕ್ಕೆ ಬಂದಿದ್ದಾರೆ. ಆದರೆ, ಮುಂದೆ ತೆರಳದಂತೆ ಅವರನ್ನು ಭದ್ರತಾ ಪಡೆಗಳು ತಡೆದಿವೆ. ಪಡೆಗಳು ತಮ್ಮನ್ನು ತಡೆದಿದ್ದನ್ನು ಖಂಡಿಸಿ, ಸ್ಥಳದಲ್ಲಿಯೇ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಮುಂದೆ ಸಾಗಲು ಯತ್ನಿಸಿದ್ದಾರೆ. ಈ ವೇಳೆ, ಅವರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗ ಮಾಡಿದ್ದು, ಘರ್ಷಣೆ ಉಂಟಾಗಿದೆ.
“ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ಮರುಸ್ಥಾಪನೆಯಾಗಿದೆ ಎಂಬುದಾಗಿ ಸರ್ಕಾರ ಹೇಳುತ್ತಿದ್ದಾರೆ. ಆದ್ದರಿಂದಲೇ, ನಾವು ನಮ್ಮ ಮನೆಗಳಿಗೆ ಮರಳಲು ಉಂದಾಗಿದ್ದಾರೆ. ಹಾಗಿದ್ದರೂ, ನಾವು ಮನೆಗೆ ಹೋಗಲು ಯಾಕಾಗಿ ಅವಕಾಶ ನೀಡುತ್ತಿಲ್ಲ” ಎಂದು ಪ್ರತಿಭಟನಾಕಾರ್ತಿ ಎಸ್. ಇಬೆಮ್ಚಾ ದೇವಿ ಪ್ರಶ್ನಿಸಿದ್ದಾರೆ.




