ಮಣಿಪುರ ರಾಜ್ಯದಲ್ಲಿ ಮೂರು ತಿಂಗಳ ಹಿಂದೆ ಜನಾಂಗೀಯ ದ್ವೇಷಕ್ಕೆ ಶುರುವಾದ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಹೊಸ ಗುಂಡಿನ ದಾಳಿ ವರದಿಯಾಗಿವೆ.
ಮಣಿಪುರದ ಫೌಗಕ್ಚಾವೊ, ಟೋರ್ಬಂಗ್ ಮತ್ತು ಕ್ವಾಕ್ಟಾದಲ್ಲಿ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಪ್ರದೇಶಗಳಲ್ಲಿ ಕೆಲವು ಗುಂಪುಗಳು ಮಣಿಪುರ ಪೊಲೀಸ್ ಕಮಾಂಡೋಗಳ ಮೇಲೆ ಗುಂಡು ಹಾರಿಸುತ್ತಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಲವು ಗುಂಪುಗಳು ಹಳ್ಳಿಗಳಲ್ಲಿ ಕನಿಷ್ಠ 30 ಬಾಂಬ್ಗಳು ಹಾಗೂ ಸ್ಫೋಟಕಗಳನ್ನು ಉಡಾಯಿಸಿವೆ.
ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಹಿಂಸಾಚಾರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹೆಚ್ಚಿನ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಇವೆಲ್ಲ ಗುಂಡಿನ ಘಟನೆಗಳು ಮಣಿಪುರದ ಮೊರೆಹ್ ಜಿಲ್ಲೆಯಲ್ಲಿ ಉಂಟಾದ ಸಣ್ಣ ಗಲಭೆ ನಡೆದ ಒಂದು ದಿನದ ನಂತರ ಶುರುವಾಗಿದೆ. ಬುಧವಾರ(ಜುಲೈ 27) ಮ್ಯಾನ್ಮಾರ್ ಗಡಿಯ ಸಮೀಪದಲ್ಲಿರುವ ಮೊರೆಹ್ ಮಾರುಕಟ್ಟೆ ಪ್ರದೇಶದಲ್ಲಿ ಜನಸಮೂಹವು ಕನಿಷ್ಠ 30 ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಕಾರ್ಯಕ್ರಮದಲ್ಲಿ ನನ್ನ ಭಾಷಣ ಕೈಬಿಡಲಾಗಿದೆ: ರಾಜಸ್ಥಾನ ಸಿಎಂ ಆರೋಪ
ಈ ಬೆಂಕಿಯ ಕೃತ್ಯದ ನಂತರ ದಾಳಿಕೋರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಪರಿಸ್ಥಿತಿ ಉಲ್ಬಣಗೊಂಡ ನಂತರ ಜನಸಮೂಹವನ್ನು ಚದುರಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಹೆಚ್ಚಿನ ಭದ್ರತಾ ಪಡೆಗಳು ಆಗಮಿಸಿವೆ.
ಈ ವಾರದ ಆರಂಭದಲ್ಲಿ ಮತ್ತೊಂದು ತೊಂದರೆಗೀಡಾದ ಘಟನೆಯಲ್ಲಿ, ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್ಗಳನ್ನು ಜನಸಮೂಹವು ಸುಟ್ಟು ಹಾಕಿತು. ಮಣಿಪುರ ನೋಂದಣಿ ಸಂಖ್ಯೆಗಳನ್ನು ಪ್ರದರ್ಶಿಸುವ ಬಸ್ಸುಗಳು ದಿಮಾಪುರದಿಂದ ವಾಪಸಾಗುತ್ತಿದ್ದ ಸಪೋರ್ಮಿನಾದಲ್ಲಿ ದಾಳಿ ಸಂಭವಿಸಿದೆ.
ಸ್ಥಳೀಯ ಒಂದು ಸಮುದಾಯದ ನಿವಾಸಿಗಳು ಬಸ್ಸನ್ನು ತಡೆದು ಬೇರೆ ಸಮುದಾಯದವರು ಬಸ್ಸಿನಲ್ಲಿದ್ದಾರೆಯೆ ಎಂದು ಪರಿಶೀಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಪರಿಣಾಮವಾಗಿ, ಅಪ್ರಾಪ್ತ ವಯಸ್ಕ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ನಂತರ ಬಂಧಿಸಿದ್ದಾರೆ.
ಮಣಿಪುರ ರಾಜ್ಯವು ಸುಮಾರು ಮೂರು ತಿಂಗಳಿಂದ ಜನಾಂಗೀಯ ಹಿಂಸಾಚಾರದೊಂದಿಗೆ ನಲುಗುತ್ತಿದೆ. ಇದರ ಪರಿಣಾಮವಾಗಿ 160 ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದಾರೆ.





