ಮುಂಬೈ–ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಪಾಲ್ಘರ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭಾರೀ ಸಂಚಾರ ದಟ್ಟಣೆಯಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನೂರಾರು ಪ್ರಯಾಣಿಕರು 12 ಗಂಟೆಗಳ ಕಾಲ ವಾಹನಗಳಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸಿದರು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮುಂಬೈ ಹಾಗೂ ಥಾಣೆ ಪ್ರದೇಶದ ವಿವಿಧ ಶಾಲೆಗಳ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಕೆಲವು ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತಿದ್ದ 12 ಬಸ್ಗಳು ವಸೈ ಸಮೀಪ ಮಂಗಳವಾರ ಸಂಜೆ 5.30ರ ವೇಳೆಗೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಬುಧವಾರ ಬೆಳಿಗ್ಗೆವರೆಗೆ ಹಾಗೆಯೇ ನಿಂತಿದ್ದವು.
ವಿರಾರ್ ಬಳಿ ಶಾಲಾ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳು ಆಹಾರ ಮತ್ತು ನೀರಿಲ್ಲದೆ ಹಲವು ಗಂಟೆಗಳ ಕಾಲ ಬಸ್ಸುಗಳಲ್ಲಿ ಕಾಯಬೇಕಾಯಿತು.
ವಸೈ ಸಂಚಾರಿ ಉಪ ಪೊಲೀಸ್ ಆಯುಕ್ತೆ ಪೂರ್ಣಿಮಾ ಚೌಗಲೆ-ಶ್ರಿಂಗಿ, ಟ್ರಾಫಿಕ್ ಸಂಪೂರ್ಣವಾಗಿ ಇನ್ನೂ ತೆರವಾಗಿಲ್ಲ. ವಾಹನಗಳು ಅತಿ ನಿಧಾನವಾಗಿ ಮಾತ್ರ ಮುಂದೆ ಸಾಗುತ್ತಿವೆ ಎಂದು ಹೇಳಿದರು.
ಸ್ಥಳೀಯ ಸಾಮಾಜಿಕ ಸಂಘಟನೆಗಳ ಸದಸ್ಯರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ, ಸಿಲುಕಿಕೊಂಡಿದ್ದ ಮಕ್ಕಳಿಗೆ ನೀರು ಮತ್ತು ಬಿಸ್ಕತ್ ವಿತರಿಸಿದರು ಹಾಗೂ ಚಾಲಕರಿಗೆ ವಾಹನಗಳ ಸಂಚಾರ ಸುಗಮವಾಗುವಂತೆ ಸಹಾಯ ಮಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್ಎಸ್ಎಸ್ಗೆ ಸುಲಭವಲ್ಲ!
“ಮಕ್ಕಳು ಹಸಿವಿನಿಂದ ಮತ್ತು ಆಯಾಸದಿಂದ ಅಳುತ್ತಿದ್ದರು. ಅದನ್ನು ನೋಡಲು ತುಂಬಾ ಕಷ್ಟವಾಯಿತು. ಸರಿಯಾದ ಟ್ರಾಫಿಕ್ ನಿರ್ವಹಣೆ ಇಲ್ಲದ ಕಾರಣ ಈ ಸ್ಥಿತಿ ಉಂಟಾಗಿದೆ” ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಥಾಣೆಯ ಘೋಡಬಂದರ್ ಹೆದ್ದಾರಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಭಾರೀ ವಾಹನಗಳನ್ನು ಮುಂಬೈ–ಅಹಮದಾಬಾದ್ ಹೆದ್ದಾರಿಯ ಕಡೆಗೆ ತಿರುಗಿಸಿದ ಪರಿಣಾಮ ಈ ತೀವ್ರ ಸಂಚಾರದ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮೀರಾ-ಭಾಯಂದರ್-ವಸೈ-ವಿರಾರ್ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳು, “ಟ್ರಾಫಿಕ್ ನಿಧಾನವಾಗಿ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ” ಎಂದಿದ್ದಾರೆ.
ಕೆಲವು ಬಸ್ಗಳು ಪರ್ಯಾಯ ಮಾರ್ಗಗಳನ್ನು ಹಿಡಿದು ಹೊರಬಂದರೆ, ಇನ್ನೂ ಕೆಲವು ನಿಧಾನವಾಗಿ ಟ್ರಾಫಿಕ್ನಿಂದ ಪಾರಾದವು. ಕೊನೆಯ ಬಸ್ ಬುಧವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ತಲುಪಿತು ಎಂದು ಮೂಲಗಳು ತಿಳಿಸಿವೆ.
“ನಮ್ಮ ಮಕ್ಕಳು ಹಲವು ಗಂಟೆಗಳ ಕಾಲ ಸಹಾಯವಿಲ್ಲದೆ ಬಸ್ಸಿನಲ್ಲಿ ಸಿಲುಕಿಕೊಂಡಿದ್ದರು. ಪೊಲೀಸರ ಸಹಾಯವಿಲ್ಲ, ಯಾವುದೇ ಮಾಹಿತಿ ಇಲ್ಲ” ಎಂದು ಸಿಲುಕಿಕೊಂಡಿದ್ದ ಮಕ್ಕಳ ಪೋಷಕರು ಮತ್ತು ಸ್ಥಳೀಯರು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





