ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ವಂಚಿಸಿ, ದೇಶದಿಂದ ಪರಾರಿಯಾಗಿರುವ ಉದ್ಯಮಿ ಮೇಹುಲ್ ಚೋಕ್ಸಿಗೆ ಸಂಬಂಧಿಸಿದ 46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹರಾಜು ಹಾಕಲು ಮುಂಬೈ ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ. ಹರಾಜಜಿನಿಂದ ಬಂದ ಹಣವನ್ನು ನ್ಯಾಯಾಲಯದ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿ ಇರಿಸುವಂತೆ ಸೂಚಿಸಿದೆ.
ಮುಂಬೈನಲ್ಲಿರುವ ತಮ್ಮ ‘ಗೀತಾಂಜಲಿ ಜೆಮ್ಸ್ ಲಿಮಿಟೆಡ್’ ಸಂಸ್ಥೆಯ ಹೆಸರಿನಲ್ಲಿ ಚೋಕ್ಸಿ ಅವರು ಪಿಎನ್ಬಿಯಿಂದ ಬೃಹತ್ ಮೊತ್ತದ ಸಾಲ ಪಡೆದುಕೊಂಡಿದ್ದರು. ಸಾವವನ್ನು ಮರುಪಾವತಿ ಮಾಡದೆ, 2014ರಿಂದ 17ರವರೆಗೆ 14,850 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮೇಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ಫ್ಲಾಟ್ಗಳು ಮತ್ತು ರತ್ನಗಳು ಸೇರಿದಂತೆ 13 ಅಸುರಕ್ಷಿತ ಆಸ್ತಿಗಳನ್ನು ಹರಾಜು ಹಾಕಲು ಪಿಎನ್ಬಿ ನಿರ್ಧರಿಸಿತ್ತು. ಅದಕ್ಕಾಗಿ, ನ್ಯಾಯಾಲಯದ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯವು, ಹರಾಜಿಗೆ ಅನುಮತಿ ನೀಡಿದೆ.
ಹರಾಜು ಹಾಕಲು ಗುರುತಿಸಲಾಗಿರುವ ಆಸ್ತಿಗಳಲ್ಲಿ ಬೋರಿವಲಿಯಲ್ಲಿರುವ ನಾಲ್ಕು ಫ್ಲಾಟ್ಗಳು (ಸುಮಾರು ರೂ.2.6 ಕೋಟಿ), ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿನ ಭಾರತ್ ಡೈಮಂಡ್ ಬೋರ್ಸ್ನ ವಾಣಿಜ್ಯ ಘಟಕ (ಸುಮಾರು ರೂ.19.7 ಕೋಟಿ), ಗೋರೆಗಾಂವ್ ಪೂರ್ವದಲ್ಲಿ ಆರು ಕೈಗಾರಿಕಾ ಗಾಲಾಗಳು ಹಾಗೂ ಗೋರೆಗಾಂವ್ನ ಉದ್ಯೋಗ್ ನಗರದಲ್ಲಿ ಮತ್ತೊಂದು ಗಾಲಾ ಸೇರಿವೆ. ಜೊತೆಗೆ,ಜೈಪುರದಲ್ಲಿರುವ ಬೆಳ್ಳಿ ಇಟ್ಟಿಗೆಗಳು, ಹವಳದ ಕಲ್ಲುಗಳು ಹಾಗೂ ಯಂತ್ರಗಳನ್ನು ಸಹ ಒಳಗೊಂಡಿದೆ. ಈ ಆಸ್ತಿಗಳ ಮೌಲ್ಯಮಾಪನವನ್ನು 2018ರಲ್ಲಿ ಮಾಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಜೋಕ್ಸಿಯನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ಚೋಕ್ಸಿ ಭಾರತದಿಂದ ಪರಾರಿಯಾಗಿದ್ದು, ಬೆಲ್ಜಿಯಂನಲ್ಲಿ ನೆಲೆಸಿದ್ದರು. ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು, ಬೆಲ್ಜಿಯಂ ನ್ಯಾಯಾಲಯವು ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ.
ಬೆಲ್ಜಿಯಂ ನ್ಯಾಯಾಲಯದ ಆದೇಶದ ಪ್ರಕಾರ, ಚೋಕ್ಸಿ ಬೆಲ್ಜಿಯಂ ಪ್ರಜೆಯಲ್ಲ. ಅವರು ವಿದೇಶಿ ಪ್ರಜೆ. ಚೋಕ್ಸಿ ವಿರುದ್ಧ ಕ್ರಿಮಿನಲ್ ಗ್ಯಾಂಗ್ನಲ್ಲಿ ಭಾಗವಹಿಸುವುದು, ವಂಚನೆ, ಭ್ರಷ್ಟಾಚಾರ ಹಾಗೂ ನಕಲಿ ದಾಖಲೆಗಳ ಬಳಕೆ ಆರೋಪಗಳಿವೆ. ಇವೆಲ್ಲವನ್ನೂ ಗಂಭೀರ ಅಪರಾಧಗಳೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಹೇಳಿತ್ತು.
ಬೆಲ್ಜಿಯಂ ನ್ಯಾಯಾಲಯದ ಆದೇಶವನ್ನು ಚೋಕ್ಸಿ ಅವರು ಬೆಲ್ಜಿಯಂನ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.




