ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬುಧವಾರ ತಿಳಿಸಿದೆ. ಆ ಭಾಗದಲ್ಲಿ ನಡೆಯುತ್ತಿರುವ ಯುದ್ಧದ ವೇಳೆ ಗುರಿಯಾಗಿಸಿದ ವಾಣಿಜ್ಯ ಹಡಗುಗಳಲ್ಲಿ ಈ ಭಾರತೀಯರು ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ಅಗತ್ಯ ಬೆಂಬಲವನ್ನು ಒದಗಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
”ಕೆಲವು ಪ್ರಾಣಹಾನಿಗಳಾಗಿರುವ ವರದಿಗಳು ಬಂದಿವೆ. ನಾವು ಇಬ್ಬರು ಭಾರತೀಯರನ್ನು ಕಳೆದುಕೊಂಡಿದ್ದೇವೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ದಾಳಿಗೊಳಗಾದ ವಾಣಿಜ್ಯ ಹಡಗುಗಳಲ್ಲಿ ಅವರು ಇದ್ದಾಗ ಈ ಘಟನೆ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ.
ಕೊಲ್ಲಿ ರಾಷ್ಟ್ರಗಳಲ್ಲಿ (ಗಲ್ಫ್) ಗಾಯಗೊಂಡಿರುವ ಹಲವಾರು ಭಾರತೀಯರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನೂ ಎಂಇಎ ಖಚಿತಪಡಿಸಿದೆ. ಅಧಿಕಾರಿಗಳ ಪ್ರಕಾರ, ದುಬೈನಲ್ಲಿ ಗಾಯಗೊಂಡಿರುವ ಓರ್ವ ಭಾರತೀಯ ಪ್ರಜೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
”ನಮ್ಮ ರಾಯಭಾರ ಕಚೇರಿಯು ಅವರೊಂದಿಗೆ ಸಂಪರ್ಕದಲ್ಲಿದೆ. ದುಬೈನಲ್ಲಿ ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿರುವ ಬಗ್ಗೆ ಇಂದು ಬೆಳಿಗ್ಗೆ ವರದಿಗಳು ಬಂದಿವೆ. ನಮ್ಮ ರಾಯಭಾರ ಕಚೇರಿಯು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಾವು ನಿಯಮಿತವಾಗಿ ನಿಗಾವಹಿಸಿದ್ದೇವೆ” ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್ಕೀಪರ್’ ಈಗ ಇರಾನ್ನ ಪರಮೋಚ್ಚ ನಾಯಕ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆ ಪ್ರದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಸಂಬಂಧಿಸಿದ ಆತಂಕಗಳಿಗೆ ಸ್ಪಂದಿಸಲು ಭಾರತ ಸರ್ಕಾರವು ನಿಯಂತ್ರಣ ಕೊಠಡಿಯೊಂದನ್ನು ಆರಂಭಿಸಿದೆ.
”ವಿದೇಶಾಂಗ ಸಚಿವಾಲಯದಲ್ಲಿ ನಾವು ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಿದ್ದು, ಅದು ಕಾರ್ಯನಿರ್ವಹಿಸುತ್ತಿದೆ. ಭಾರತೀಯರ ಸ್ಥಿತಿಗತಿ ಮತ್ತು ಅವರ ಯೋಗಕ್ಷೇಮದ ಬಗ್ಗೆ ನಮಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಕರೆ ಮಾಡುವವರಿಗೆ ನಾವು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ವಾಣಿಜ್ಯ ಹಡಗುಗಳ ಸಂಚಾರವು ಹೆಚ್ಚುತ್ತಿರುವ ಅಪಾಯಗಳನ್ನು ಎದುರಿಸುತ್ತಿರುವ ಸಮಯದಲ್ಲಿಯೇ ಈ ಸಾವು-ನೋವುಗಳು ಸಂಭವಿಸಿವೆ. ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಇತ್ತೀಚಿನ ದಿನಗಳಲ್ಲಿ ಹಲವಾರು ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್ಗಳ ಮೇಲೆ ದಾಳಿಗಳು ನಡೆದಿವೆ. ಬುಧವಾರವೊಂದೇ ಜಲಸಂಧಿಯ ಸಮೀಪ ಕನಿಷ್ಠ ಮೂರು ವಾಣಿಜ್ಯ ಹಡಗುಗಳಿಗೆ ಕ್ಷಿಪಣಿಗಳು ಬಡಿದಿವೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿರುವ ಯುದ್ಧ ತೀವ್ರಗೊಂಡಾಗಿನಿಂದ ಅನೇಕ ಹಡಗುಗಳು ಹಾನಿಗೊಳಗಾಗಿವೆ.
ಈ ಕಿರಿದಾದ ಜಲಮಾರ್ಗವು ಜಾಗತಿಕ ತೈಲ ಸಾಗಣೆಯ ಶೇಕಡಾ 20ರಷ್ಟನ್ನು ನಿರ್ವಹಿಸುತ್ತದೆ. ಈ ದಾಳಿಗಳಿಂದಾಗಿ ಇಂಧನ ಪೂರೈಕೆಗೆ ತೀವ್ರ ಅಡ್ಡಿಯಾಗಿದೆ. ಭದ್ರತಾ ಕಾರಣಗಳಿಗಾಗಿ ಹಡಗು ಕಂಪನಿಗಳು ತಮ್ಮ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿವೆ ಅಥವಾ ಮಾರ್ಗವನ್ನು ಬದಲಾಯಿಸಿವೆ, ಹಾಗೂ ನೂರಾರು ಟ್ಯಾಂಕರ್ಗಳನ್ನು ಸುತ್ತಮುತ್ತಲಿನ ಸಮುದ್ರ ಪ್ರದೇಶದಲ್ಲಿ ಲಂಗರು ಹಾಕುವಂತೆ ಸೂಚಿಸಲಾಗಿದೆ.





