ಕಳೆದ ಐದು ವರ್ಷಗಳಲ್ಲಿ (2020-2024) ನಿವೃತ್ತ ಸೇನಾ ಅಧಿಕಾರಿಗಳು ಬರೆದ ಬರೋಬ್ಬರಿ 35 ಪುಸ್ತಕಗಳ ಪ್ರಕಟಣೆಗೆ ರಕ್ಷಣಾ ಸಚಿವಾಲಯವು ಹಸಿರು ನಿಶಾನೆ ತೋರಿದೆ. ಆದರೆ, ಈ ಪೈಕಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರ ಆತ್ಮಕಥನ ಮಾತ್ರ ಇನ್ನೂ ಅನುಮತಿಯ ನಿರೀಕ್ಷೆಯಲ್ಲಿ ಬಾಕಿ ಉಳಿದಿದೆ ಎಂಬ ಸ್ಫೋಟಕ ಮಾಹಿತಿ ಆರ್ಟಿಐ (ಮಾಹಿತಿ ಹಕ್ಕು) ಅಡಿಯಲ್ಲಿ ಲಭ್ಯವಾಗಿದೆ.
ದಿ ಇಂಡಿಯನ್ ಎಕ್ಸ್ಪ್ರೆಸ್ನ ಹಿರಿಯ ಪತ್ರಕರ್ತೆ ರಿತು ಸರೀನ್ ಅವರು ಸಲ್ಲಿಸಿದ ಆರ್ಟಿಐ ಅರ್ಜಿಗೆ ರಕ್ಷಣಾ ಸಚಿವಾಲಯ ನೀಡಿದ ಉತ್ತರದ ಪ್ರಕಾರ, 2020 ರಿಂದ 2024ರ ನಡುವೆ ಸಚಿವಾಲಯದ ಅನುಮತಿಗಾಗಿ ಹಲವಾರು ಹಸ್ತಪ್ರತಿಗಳು ಸಲ್ಲಿಕೆಯಾಗಿದ್ದವು. ಆಶ್ಚರ್ಯಕರ ಸಂಗತಿಯೆಂದರೆ, ಇವುಗಳಲ್ಲಿ ಜನರಲ್ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಕೃತಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಕೃತಿಗಳ ಪ್ರಕಟಣೆಗೆ ತಡೆ ಇಲ್ಲದೆ ಅನುಮತಿ ನೀಡಲಾಗಿದೆ.
ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2020ರಲ್ಲಿ ಕೇವಲ ಒಂದು ಹಸ್ತಪ್ರತಿ ವಿಮರ್ಶೆಗೆ ಬಂದಿದ್ದರೆ, 2021ರಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಿರಲಿಲ್ಲ. 2022ರಲ್ಲಿ ನಾಲ್ಕು ಕೃತಿಗಳು ಬಂದವು. ಆದರೆ 2023ರಲ್ಲಿ ಈ ಸಂಖ್ಯೆ ಏಕಾಏಕಿ ಏರಿಕೆಯಾಗಿ, ನರವಣೆ ಅವರ ಕೃತಿ ಸೇರಿದಂತೆ ಒಟ್ಟು 16 ಹಸ್ತಪ್ರತಿಗಳು ಸಲ್ಲಿಕೆಯಾಗಿದ್ದವು. 2024ರ ಸೆಪ್ಟೆಂಬರ್ವರೆಗೆ 14 ಕೃತಿಗಳು ಬಂದಿದ್ದು, ಇವುಗಳಲ್ಲಿ ಬಹುತೇಕ ಪುಸ್ತಕಗಳಿಗೆ ಒಪ್ಪಿಗೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಅನುಮತಿ ಪಡೆದ ಪ್ರಮುಖರಲ್ಲಿ ಲೆಫ್ಟಿನೆಂಟ್ ಜನರಲ್ ಎಸ್.ಎ. ಹಸ್ನೈನ್, ಮೇಜರ್ ಜನರಲ್ ಜಿ.ಡಿ. ಬಕ್ಷಿ ಮತ್ತು ಲೆಫ್ಟಿನೆಂಟ್ ಜನರಲ್ ಯೋಗೇಶ್ ಕುಮಾರ್ ಜೋಶಿ ಅವರಂತಹ ಹಿರಿಯ ಅಧಿಕಾರಿಗಳಿದ್ದಾರೆ. ಆದರೆ, 2023ರಲ್ಲೇ ಸಲ್ಲಿಕೆಯಾದ ನರವಣೆ ಅವರ ಕೃತಿ ಮಾತ್ರ ಇನ್ನೂ ‘ಪರಿಶೀಲನಾ ಹಂತ’ದಲ್ಲಿಯೇ ಉಳಿದಿದೆ.
2019 ರಿಂದ 2022ರವರೆಗೆ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ನರವಣೆ ಅವರು, ತಮ್ಮ ಕೃತಿಯಲ್ಲಿ 2020ರ ಗಲ್ವಾನ್ ಸಂಘರ್ಷದ ಸಮಯದ ಸೂಕ್ಷ್ಮ ವಿಚಾರಗಳನ್ನು ಮತ್ತು ಅಂದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗಿನ ಮಾತುಕತೆಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಗ್ನಿಪಥ್ ಯೋಜನೆ ಕುರಿತಂತೆಯೂ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳಿವೆ. ಈ ಸೂಕ್ಷ್ಮ ಸಂಗತಿಗಳೇ ಪುಸ್ತಕದ ಬಿಡುಗಡೆಗೆ ತಡೆಯಾಗಿರಬಹುದು ಎಂದು ಹೇಳಲಾಗುತ್ತಿದೆ.
ಸಂಸತ್ತಿನಲ್ಲಿಯೂ ಇತ್ತೀಚೆಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಪುಸ್ತಕದ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಒಟ್ಟಿನಲ್ಲಿ, ಇತರ ನಿವೃತ್ತ ಅಧಿಕಾರಿಗಳ ಕೃತಿಗಳು ಸುಲಲಿತವಾಗಿ ಮಾರುಕಟ್ಟೆ ಸೇರುತ್ತಿದ್ದರೂ, ಮಾಜಿ ಸೇನಾ ಮುಖ್ಯಸ್ಥರ ಕೃತಿ ಮಾತ್ರ ಸರ್ಕಾರದ ಕಪಾಟಿನಲ್ಲಿ ಬಂದಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.





