ಉತ್ತರಾಖಂಡದ ಪೌರಿ ಜಿಲ್ಲೆಯ ಕೋಟ್ದ್ವಾರ ಪಟ್ಟಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಅಂಗಡಿಯ ಹೆಸರು ಬದಲಾಯಿಸುವಂತೆ ಬಜರಂಗದಳ ಸದಸ್ಯರು ಒತ್ತಡ ಹೇರಿದಾಗ ಹಿಂದೂ ಯುವಕನೊಬ್ಬ ಬಜರಂಗದಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಈ ಯುವಕನ ವಿರುದ್ಧ ಬಜರಂಗದಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದು, ಉತ್ತರಾಖಂಡದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದೆ.
75 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು ಬಾಬಾ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯನ್ನು ಹೊಂದಿದ್ದು, 30 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಬಜರಂಗದಳದವರು ‘ಬಾಬಾ’ ಎಂಬ ಪದವನ್ನು ಫಲಕದಿಂದ ತೆಗೆದುಹಾಕುವಂತೆ ಒತ್ತಡ ಹೇರಿದ್ದರು. ಇದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದರು. ಈ ವೇಳೆ ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುವ ದೀಪಕ್ ಕುಮಾರ್ ಕಶ್ಯಪ್ ವೃದ್ಧ ವ್ಯಾಪಾರಿ ಪರವಾಗಿ ನಿಂತಿದ್ದರು. ಸಂಘಪರಿವಾರದವರು ನಿನ್ನ ಹೆಸರೇನು ಎಂದು ಕೇಳಿದಾಗ ದೀಪಕ್, “ಮೊಹಮ್ಮದ್ ದೀಪಕ್ ಕುಮಾರ್” ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಇದನ್ನು ಓದಿದ್ದೀರಾ? ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರಿ ಶಾಲು ವ್ಯಾಪಾರಿಗಳ ಮೇಲೆ ಹಲ್ಲೆ: ಕೋಮುವಾದಿಗಳಿಂದ ಬೆದರಿಕೆ
ಹಾಗೆಯೇ ಕೋಮು ದ್ವೇಷ ಹರಡಲು ಯತ್ನಿಸುತ್ತಲೇ ಇರುವ ಈ ಗುಂಪಿಗೆ ಸೇರಿದ ಡೆಹ್ರಾಡೂನ್, ಋಷಿಕೇಶ್ ಮತ್ತು ಹರಿದ್ವಾರದ 150 ಮಂದಿ ಕೋಟ್ದ್ವಾರದಲ್ಲಿ ಶನಿವಾರ ಸೇರಿ ಪ್ರತಿಭಟಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಕಶ್ಯಪ್ ಕೆಲಸ ಮಾಡುವ ಜಿಮ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ದೀಪಕ್ ಕಶ್ಯಪ್, “ಬಾಬಾ ಕಲೆಕ್ಷನ್ ಎಂಬ ಅಂಗಡಿಯು 30 ವರ್ಷಗಳಿಂದ ಇದೆ. ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಈ ಗುಂಪು ಸುಖಾಸುಮ್ಮನೆ ಗಲಾಟೆ ಮಾಡುತ್ತಿದೆ. ಅದಕ್ಕಾಗಿ ನಾನು ಆ ವ್ಯಾಪಾರಿಯನ್ನು ಬೆಂಬಲಿಸಿ ಮಾತನಾಡಿದೆ. ಆದರೆ ಈಗ ನನ್ನನ್ನು ಗುರಿಯಾಗಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಅವರು ನನ್ನ ಜಿಮ್ ಬಳಿ ವಾಹನಗಳಲ್ಲಿ ಬಂದಿದ್ದರು, ಕೆಲವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ನನ್ನ ಕುಟುಂಬಸ್ಥರನ್ನು ನಿಂದಿಸಿದರು. ಇನ್ಸ್ಟಾಗ್ರಾಮ್ನಲ್ಲಿ ಪ್ರಚೋದನಕಾರಿ ಪೋಸ್ಟ್ಗಳನ್ನು ನೋಡಿರುವ ನಾನು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದರೆ ಆಡಳಿತದ ಆರಂಭಿಕ ಪ್ರತಿಕ್ರಿಯೆ ಏಕಪಕ್ಷೀಯವಾಗಿ ಕಂಡುಬಂದಿದೆ” ಎಂದು ದೂರಿದರು.
ಇನ್ನು ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಕಂಡು ಬಂದಾಗ ಪೊಲೀಸರು ಮಧ್ಯಪ್ರವೇಶಿಸಿದ್ದು, ಅಧಿಕಾರಿಗಳು ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ನೀಡಿದ್ದಾರೆ ಎಂದು ಪೌರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಪನ್ವಾರ್ ಹೇಳಿದ್ದಾರೆ. “ಕೋಮು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಡೆಹ್ರಾಡೂನ್ನಿಂದ ಕೆಲವರು ಕೋಟ್ದ್ವಾರಕ್ಕೆ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ನಾವು ಎಫ್ಐಆರ್ ದಾಖಲಿಸಿದ್ದೇವೆ. ಬಾಬಾ ಗಾರ್ಮೆಂಟ್ಸ್ ಮಾಲೀಕರ ದೂರಿನ ಆಧಾರದ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ನಡುವೆ ಉತ್ತರಾಖಂಡ ಕಾಂಗ್ರೆಸ್ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಾನಾ ಕಶ್ಯಪ್ಗೆ ತಕ್ಷಣ ಭದ್ರತೆ ನೀಡಬೇಕು ಎಂದು ಕೋರಿದ್ದಾರೆ. ಮುಖ್ಯ ಕಾರ್ಯದರ್ಶಿ ಆನಂದ್ ವರ್ಧನ್ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಹೇಳಿದ್ದಾರೆ. ದ್ವೇಷ ಹರಡುವವರಿಗೆ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ.
ನಾವೆಲ್ಲರೂ ಒಂದೇ ಎಂದು ಹೇಳಿ ಕೋಮು ಸೌಹಾರ್ದತೆ ಮೆರೆದ ಯುವಕನ ವಿರುದ್ಧವೇ ಪ್ರತಿಭಟಿಸಿದ ಬಜರಂಗದಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.





