ಇಸ್ರೇಲ್-ಇರಾನ್ ನಡುವೆ ಸಂಘರ್ಷ ಉಲ್ಬಣಿಸಿದೆ. ಇಸ್ರೇಲ್ನ ಹೈಫಾ ಬಂದರನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ನ (ಅದಾನಿ ಪೋರ್ಟ್) ಷೇರುಗಳ ಮೌಲ್ಯವು 3.2%ರಷ್ಟು ಕುಸಿತ ಕಂಡಿದೆ. ಹೈಫಾ ನಿರ್ವಹಣೆಗಾಗಿ ಅದಾನಿ ಪೋರ್ಟ್ನಲ್ಲಿ ಹೂಡಿಕೆ ಮಾಡಿರುವ ಎಲ್ಐಸಿಯ ಹಣದ ಭವಿಷ್ಯ ಪ್ರಶ್ನೆಯಲ್ಲಿದೆ!
ಇಸ್ರೆಲ್ನ ಹೈಫಾ ಬಂದರು ನಿರ್ವಹಣೆಯ ಗುತ್ತಿಗೆಯನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. ಹೈಫಾ ಬಂದರಿನ ಮೇಲೆ ಅದಾನಿ ಗ್ರೂಪ್ ಹೂಡಿಕೆ ಮಾಡುತ್ತಿರುವ ಬಂಡವಾಳದಲ್ಲಿ ಲೈಫ್ ಇನ್ಸುರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (LIC) ಬರೋಬ್ಬರಿ 5,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಅಂದರೆ, ಒಟ್ಟು ಬಂಡಾವಳದಲ್ಲಿ ಎಲ್ಐಸಿ ಪಾಲು 7.75% ಇದೆ. ಪ್ರಧಾನಿ ಮೋದಿ ಅವರ ಕೃಪಾಕಟಾಕ್ಷದಿಂದ ಅದಾನಿ ಗ್ರೂಪ್ನ ಗುತ್ತಿಗೆ ಕಾಮಗಾರಿಕೆ ಎಲ್ಐಸಿ ಹೂಡಿಕೆ ಮಾಡಿದೆ ಎಂಬ ಆರೋಪಗಳಿವೆ. ಈ ನಡುವೆ, ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಹೈಫಾ ಬಂದರು ಅಪಾಯಕ್ಕೆ ಸಿಲುಕಿದೆ. ಹೀಗಾಗಿ, ಎಲ್ಐಸಿಯ ಹೂಡಿಕೆ ಮಾಡಿರುವ ಬಂಡವಾಳದ (ಸಾರ್ವಜನಿಕ ಹಣ) ಸುರಕ್ಷತೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾಗಿವೆ.
ಹೈಫಾ ಬಂದರು ನಿರ್ವಹಣೆಗೆ ಸಂಬಂಧಿಸಿದಂತೆ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ (ಎಪಿಎಸ್ಇಜಡ್) ಜೊತೆಗೆ ಎಲ್ಐಸಿ 2025ರ ಮೇ ತಿಂಗಳಿನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಯ ಪ್ರಕಾರ, ಹೈಫಾ ಬಂದರಿನ ಮೇಲಿನ ಒಟ್ಟು ಹೂಡಿಕೆಯಲ್ಲಿ ಎಲ್ಐಸಿ ಪಾಲು 7.75% ಇರಲಿದೆ. ಈ ಹೂಡಿಕೆಯು ಅದಾನಿ ಗ್ರೂಪ್ನ ಸಾಲದ ಮೆಚ್ಯೂರಿಟಿ ಪ್ರೊಫೈಲ್ನ್ನು ಹೆಚ್ಚಿಸಲು ಮತ್ತು ಸಾಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಅಂದಹಾಗೆ, ಈ ಹೈಫಾ ಪೋರ್ಟ್ ಇಸ್ರೇಲ್ನ 2ನೇ ಅತಿದೊಡ್ಡ ವಾಣಿಜ್ಯ ಬಂದರು ಆಗಿದ್ದು, ಆ ದೇಶದ 50% ಸರಕು ಸಾಗಾಟ ವಹಿವಾಟು ಮತ್ತು ಪ್ರಯಾಣಿಕರ ಹಡಗುಗಳ ಸಂಚಾರವನ್ನು ನಿರ್ವಹಿಸುತ್ತದೆ. ಈ ಬಂದರಿನ ನಿರ್ವಹಣೆಗಾಗಿ ಇಸ್ರೇಲ್ನ ಗಡೋಟ್ ಗ್ರೂಪ್ನೊಂದಿಗೆ ಅದಾನಿ ಗ್ರೂಪ್ 2023ರಲ್ಲಿ 70:30ರಂತೆ ಒಡಂಬಡಿಕೆ ಮಾಡಿಕೊಂಡಿತು. ಬಂದರಿನ ಮೇಲೆ 70% (1.2 ಶತಕೋಟಿ ಡಾಲರ್ – ಸುಮಾರು 9,422 ಕೋಟಿ ರೂ.) ಷೇರನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. ಈ ಒಡಂಬಡಿಕೆಯು ಭಾರತ ಮತ್ತು ಇಸ್ರೇಲ್ನ ನಡುವಿನ ವ್ಯಾಪಾರವನ್ನು ವೃದ್ಧಿಗೊಳಿಸುವ ಮತ್ತು ಸುಯೆಜ್ ಕಾಲುವೆಯನ್ನು ಅವಲಂಬಿಸದೆ, ಮೆಡಿಟರೇನಿಯನ್ ಮತ್ತು ಗಲ್ಫ್ ಪ್ರದೇಶಗಳನ್ನು ಸಂಪರ್ಕಿಸುವ ಕಾರಿಡಾರ್ಅನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿತ್ತು.
ಆದರೆ, ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಇರಾನ್ ಸಂಘರ್ಷವನ್ನು ಒಡಂಬಡಿಕೆಯ ಎಲ್ಲ ಉದ್ದೇಶಗಳನ್ನು ಬುಡಮೇಲು ಮಾಡಿದೆ. ಹೈಫಾ ಬಂದರು ನಿರ್ವಹಣೆಗಾಗಿ ಅದಾನಿ ಗ್ರೂಪ್ನಲ್ಲಿ ಎಲ್ಐಸಿ ಹೂಡಿಕೆ ಮಾಡಿರುವ ಸಾರ್ವಜನಿಕ ಹಣದ ಬಗ್ಗೆ ಕಳವಳ, ಆತಂಕವನ್ನು ಸೃಷ್ಟಿಸಿದೆ.
ಮೂರು ದಿನಗಳ ಹಿಂದೆ ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿತು. ಇಸ್ರೇಲ್ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ನ ದಕ್ಷಿಣ ಭಾಗದ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ಗಳ ದಾಳಿ ಮಾಡಿದೆ. ಹೈಫಾ ಬಂದರು ಇಸ್ರೇಲ್ನ ಉತ್ತರ ಭಾಗದಲ್ಲಿದ್ದುರೂ, ಹೈಫಾ ನಗರದ ಮೇಲೂ ದಾಳಿಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಹೈಫಾ ನಗರದಲ್ಲಿ ಯಾವುದೇ ಗಂಭೀರ ಹಾನಿ ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ. ಆದರೂ, ಕಾಲು ಕೆರೆದುಕೊಂಡು ದಾಳಿಗಿಳಿದಿರುವ ಇಸ್ರೇಲ್ ಮೇಲೆ ಮುಂದಿನ ದಿನಗಳಲ್ಲಿ ಇರಾನ್ ಭಾರೀ ದಾಳಿಗಳನ್ನು ನಡೆಸಬಹುದು. ಅಂತಹ ದಾಳಿಗಳು ಹೈಫಾ ಬಂದರಿನಲ್ಲಿ ಭೀಕರ ಹಾನಿಗೆ ಕಾರಣವಾಗಬಹುದು, ಬಂದರಿನ ಕಾರ್ಯಾಚರಣೆಗೆ ಅಡ್ಡಿಯಾಗಬಹುದು, ಇದರಿಂದ, ಸರಕು ರಫ್ತು ಮತ್ತು ವ್ಯಾಪಾರ ಮಾರ್ಗಗಳು ಬದಲಾಗಬಹುದು. ಇದೆಲ್ಲವೂ ಬಂದರನ್ನು ನಿರ್ವಹಿಸುವ ಹೊಣೆ ಹೊತ್ತಿರುವ ಅದಾನಿ ಗ್ರೂಪ್ಗೆ ಭಾರೀ ನಷ್ಟ ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ, ಇಸ್ರೇಲ್-ಇರಾನ್ ಸಂಘರ್ಷ ಆರಂಭವಾದ ಒಂದೇ ದಿನದಲ್ಲಿ ಅದಾನಿ ಷೇರುಗಳ ಮೌಲ್ಯವು 3.2%ರಷ್ಟು ಕುಸಿತ ಕಂಡಿವೆ.
ಹೀಗಿರುವಾಗ, ಹೈಫಾ ಬಂದರಿನ ನಿರ್ವಹಣೆ ಮೇಲೆ ಅದಾನಿ ಗ್ರೂಪ್ನಲ್ಲಿ ಎಲ್ಐಸಿ ಹೂಡಿಕೆ ಮಾಡಿರುವ 5,000 ಕೋಟಿ ರೂಪಾಯಿ ಕತೆ ಮುಗಿದಂತೆಯೇ ಎಂದು ಹಲವರು ಹೇಳುತ್ತಿದ್ದಾರೆ. ಒಂದು ವೇಳೆ, ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದು, ಗಂಭೀರ ಪರಿಣಾಮಗಳು ಎದುರಾದರೆ, ಎಲ್ಐಸಿ ಹೂಡಿಕೆಯು ನೆಲಕಚ್ಚಿದರೆ, ಹೂಡಿಕೆಯ ಮೌಲ್ಯವು ಕಡಿಮೆಯಾಗಬಹುದು. ಮಾತ್ರವಲ್ಲ, ಎಲ್ಐಸಿಯ ಅರ್ಥಿಕ ಸ್ಥಿರತೆಯ ಮೇಲೆ ಹೊಡೆತ ಬೀಳಬಹುದು. ಸಾರ್ವಜನಿಕರ ಹಣ ನಷ್ಟವಾಗಬಹುದು ಎಂಬ ಗಂಭೀರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯ: ಜಗತ್ತನ್ನು ಮೂರನೇ ಮಹಾಯುದ್ಧದತ್ತ ದೂಡುವ ಅಪಾಯ
ಹೀಗಾಗಿಯೇ, ಪ್ರಧಾನಿ ಮೋದಿ ಅವರು ತಮ್ಮ ಆಪ್ತಮಿತ್ರ ಅದಾನಿಗಾಗಿ ಹೈಫಾ ಬಂದರಿನ ಮೇಲೆ ಎಲ್ಐಸಿಯ ಸಾರ್ವಜನಿಕ ಹಣವನ್ನು ಸುರಿದಿದ್ದಾರೆ. ಸಾಮಾನ್ಯ ಜನರ ಹಣದ ಭವಿಷ್ಯವನ್ನು ಸರ್ಕಾರ ನೀತಿಗಳು ಅಪಾಯಕ್ಕೆವೊಡ್ಡಿವೆ ಎಂದು ಹಲವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇದೆಲ್ಲದರ ನಡುವೆ, ಹೈಫಾ ಪೋರ್ಟ್ನ ಒಡಂಬಡಿಕೆಯನ್ನು ಅದಾನಿ ಗ್ರೂಪ್ ಪಡೆದುಕೊಳ್ಳುವ ಸಮಯದಲ್ಲಿ, ಚೀನಾ ಕಂಪನಿಗಳು ಬಿಡ್ ಮಾಡದಂತೆ ಅಮೆರಿಕದ ನೆರವಿನಿಂದ ತಡೆಯಲಾಗಿತ್ತು ಎಂಬ ಗಂಭೀರ ಆರೋಪಗಳೂ ಇವೆ. ಭಾರತ-ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಚೀನಾ ಕಂಪನಿಗಳ ಮೇಲೆ ಅಮೆರಿಕ ಒತ್ತಡ ಹೇರುವ ಮೂಲಕ ರಾಜಕೀಯ ಕುತಂತ್ರ ನಡೆಸಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಆರೋಪಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ.
ಸದ್ಯ, ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಭಾರತದ ಎಲ್ಐಸಿ ಅಂದರೆ, ಸಾರ್ವಜನಿಕ ಹಣದ ಕುರಿತಾದ ವಿಚಾರವು ಪ್ರಶ್ನಾರ್ಥವಾಗಿ ಉಳಿದಿದೆ. ಇಸ್ರೇಲ್-ಇರಾನ್ ನಡುವಿನ ಅಸ್ಥಿರತೆ, ಅನಿಶ್ಚಿತತೆಯಲ್ಲಿ ಎಲ್ಐಸಿ ಸಿಲುಕಿಕೊಂಡಿದೆ. ಎಲ್ಐಸಿ ಹೂಡಿಕೆ ಮಾಡಿರುವ ಹಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದಾದ ಅಪಾಯಗಳು ಇವೆ. ಈಗ, ಅದಾನಿ ಗ್ರೂಪ್ ಮತ್ತು ಎಲ್ಐಸಿ ಎದುರು ಗಂಭೀರ ಸವಾಲು ಎದುರಾಗಿದೆ. ಅದನ್ನು ಪಾರದರ್ಶಕತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸುವ ಅಗತ್ಯವಿದೆ. ಸಾರ್ವಜನಿಕರ ಹಣವನ್ನು ಒಳಗೊಂಡಿರುವ ಈ ಹೂಡಿಕೆಯು ಒಂದು ಸಂಸ್ಥೆಯ ಮೇಲೆ ಮಾತ್ರವಲ್ಲ, ದೇಶದ ಜನಸಾಮಾನ್ಯದ ಭಿವಿಷ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಸಾರ್ವಜನಿಕ ಉದ್ದಿಮೆಗಳು ಹೂಡಿಕೆ ಮಾಡುವಾಗ ಎಚ್ಚಿನ ಎಚ್ಚರಿಕೆವಹಿಸುವ ಅಗತ್ಯವಿದೆ.




