ಭಾರತದ ಆರ್ಥಿಕತೆ, ಹಣದುಬ್ಬರದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, “ನರೇಂದ್ರ ಮೋದಿ ಸರ್ಕಾರಕ್ಕೆ ದಿಕ್ಕು ದೆಸೆಯಿಲ್ಲ. ರಣನೀತಿಯೂ ಇಲ್ಲ” ಎಂದು ಹೇಳಿದ್ದಾರೆ.
ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಂಡು 100 ರತ್ತ ಸಾಗುತ್ತಿದೆ. ಕೈಗಾರಿಕಾ ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಇವೆಲ್ಲವೂ ಹಣದುಬ್ಬರದ ಸ್ಪಷ್ಟ ಸಂಕೇತವಾಗಿದೆ ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಾರ್ಮಿಕ ವಿರೋಧಿ ಸಂಹಿತೆಗಳು: ಮೋದಿ ಸರ್ಕಾರದ ವಿರುದ್ಧ CITU ಆಕ್ರೋಶ
“ಸರ್ಕಾರ ಇದನ್ನು ಸಾಮಾನ್ಯ ಎಂದು ಎಷ್ಟೇ ಹಣೆಪಟ್ಟಿ ಕಟ್ಟಲು ಯತ್ನಿಸಿದರೂ ವಾಸ್ತವ ಬೇರೆಯೇ ಆಗಿದೆ. ಉತ್ಪಾದನೆ ಮತ್ತು ಸಾರಿಗೆ ವೆಚ್ಚಗಳು ಹೆಚ್ಚಾಗುತ್ತಿವೆ. MSMEಗಳು ಇದರ ಪರಿಣಾಮದ ಭಾರವನ್ನು ಭರಿಸಬೇಕಾಗಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ. ವಿದೇಶಿ ಸಾಂಸ್ಥಿಕ ಹೂಡಿಕೆ (FII) ಬಂಡವಾಳವು ಇನ್ನೂ ವೇಗವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ಷೇರು ಮಾರುಕಟ್ಟೆಯ ಮೇಲೆ ಒತ್ತಡ ತೀವ್ರಗೊಳ್ಳುತ್ತದೆ” ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.
“ಮೂಲಭೂತವಾಗಿ, ಇದು ಪ್ರತಿಯೊಂದು ಕುಟುಂಬದ ಜೇಬಿನ ಮೇಲೆ ನೇರ ಮತ್ತು ಆಳವಾದ ಪರಿಣಾಮ ಬೀರುವುದು ಖಂಡಿತ. ಇದು ಕೇವಲ ಸಮಯದ ವಿಷಯ. ಚುನಾವಣೆಗಳು ಮುಗಿದ ನಂತರ, ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆಗಳೂ ಸಹ ಹೆಚ್ಚಳವಾಗಲಿದೆ” ಎಂದು ರಾಹುಲ್ ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ‘ಮತ ಕಳ್ಳತನ’ವನ್ನು ಸೋಲಿಸಿ ಗೆಲ್ಲುವುದೇ ‘ಇಂಡಿಯಾ’?
“ಮೋದಿ ಸರ್ಕಾರಕ್ಕೆ ಯಾವುದೇ ದಿಕ್ಕಿಲ್ಲ ಅಥವಾ ರಣನೀತಿಯೂ ಇಲ್ಲ. ಕೇವಲ ವಾಕ್ಚಾತುರ್ಯ ಮಾತ್ರ ಇರುವುದು. ಸರ್ಕಾರ ಏನು ಹೇಳುತ್ತಿದೆ ಎಂಬುದು ಪ್ರಸ್ತುತ ಪ್ರಶ್ನೆಯಲ್ಲ. ಬದಲಿಗೆ, ನಿಮ್ಮ ತಟ್ಟೆಯಲ್ಲಿ ಏನು ಉಳಿದಿದೆ ಎಂಬುದು ಪ್ರಶ್ನೆ” ಎಂದೂ ರಾಹುಲ್ ಗಾಂಧಿ ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಪ್ರಭಾವ ಬೀರಿದೆ. ಈಗಾಗಲೇ ದೇಶದ ಆರ್ಥಿಕ ನೀತಿಗಳ ಪ್ರಭಾವದಿಂದಾಗಿ ಡಾಲರ್ ಎದುರು ತನ್ನ ಮೌಲ್ಯ ಕಳೆದುಕೊಂಡಿದ್ದ ರೂಪಾಯಿ ಮೇಲೆಯೂ ಈ ಯುದ್ಧ ಪರಿಣಾಮ ಉಂಟಾಗಿದೆ. ಶುಕ್ರವಾರ ನಾಲ್ಕು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ರೂಪಾಯಿ ಇಳಿದಿದೆ. 82 ಪೈಸೆ ಅಥವಾ ಶೇಕಡಾ 0.95ರಷ್ಟು ಮೌಲ್ಯ ಕಳೆದುಕೊಂಡು 93.71ಕ್ಕೆ ತಲುಪಿದೆ.





