ಆರು ದಶಕಗಳಲ್ಲಿಯೇ ದೇಶದ ವಿರುದ್ಧ ಉಂಟಾದ ಹೀನ ಪ್ರಾದೇಶಿಕ ಹಿನ್ನಡೆಯನ್ನು ಮುಚ್ಚಿಹಾಕಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೆಶ್ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, “ಚೀನಾದ ಸೈನಿಕರು ಮೇ 2020 ರಿಂದ ಲಡಾಖ್ ಪೂರ್ವದ ಆಯಕಟ್ಟಿನ ಸ್ಥಳಗಳಾದ ಡೆಪ್ಸಾಂಗ್, ಡೆಮ್ಚೋಕ್ ಮತ್ತು ಇತರ ಪ್ರದೇಶಗಳಿಗೆ ಭಾರತೀಯ ಸೈನಿಕರ ಗಸ್ತು ಪ್ರವೇಶವನ್ನು ನಿರಾಕರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಲಡಾಖ್ ಮೂಲದ ರಾಜಕಾರಣಿ ಕೊಂಚೋಕ್ ಸ್ಟಾಂಜಿನ್ ಅವರ ಪೋಸ್ಟ್ ಅನ್ನು ಉಲ್ಲೆಖಿಸಿರುವ ಜೈರಾಮ್ ರಮೇಶ್, “ಲಡಾಖ್ನಲ್ಲಿ 1962 ರ ಭಾರತ – ಚೀನಾ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ನೆನಪಿನ ಭಾಗವಾಗಿ ನಿರ್ಮಿಸಲಾದ ರೆಜಾಂಗ್ ಲಾ ಸ್ಮಾರಕವನ್ನು ಚೀನಾದೊಂದಿಗೆ ನಡೆದ ಮಾತುಕತೆಯ ಪ್ರಕ್ರಿಯೆಯ ಭಾಗವಾಗಿ ಸೇನೆಯು ಕೆಡವಿರುವುದು ಅತ್ಯಂತ ನೋವಿನ ಸಂಗತಿ” ಎಂದು ಹೇಳಿದ್ದಾರೆ.
“2021 ರಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸಿದ್ದ ಸಂದರ್ಭದಲ್ಲಿ ಬಫರ್ ವಲಯಗಳನ್ನು ಬಿಟ್ಟುಕೊಡುವುದಕ್ಕಾಗಿ ಮೇಜರ್ ಸಿಂಗ್ ಸ್ಮಾರಕವನ್ನು ಕೆಡವಲಾಗಿದೆ. ಇದು ವೀರ ಯೋಧ ಮೇಜರ್ ಸಿಂಗ್ ಅವರಿಗೆ ಹಾಗೂ ಭಾರತದ ಯೋಧರಿಗೆ ಮಾಡಿದ ದೊಡ್ಡ ಅವಮಾನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?
“ಮೋದಿ ಸರ್ಕಾರವು ಮಾತುಕತೆ ನಡೆಸಿದ ಬಫರ್ ವಲಯಗಳು ಈ ಹಿಂದೆ ಭಾರತದಿಂದ ನಿಯಂತ್ರಿಸಲ್ಪಟ್ಟ ಪ್ರದೇಶದಲ್ಲಿವೆ ಎಂಬುದಕ್ಕೆ ವೀರ ಯೋಧ ಮೇಜರ್ ಸಿಂಗ್ ಸ್ಮಾರಕ ಪ್ರದೇಶ ಬಿಟ್ಟುಕೊಟ್ಟಿರುವುದೇ ಸಾಕ್ಷಿಯಾಗಿದೆ. ಇದು ಖಂಡಿತಾ ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.
“ಕಳೆದ ನಾಲ್ಕು ವರ್ಷಗಳಿಂದ, ಮೋದಿ ಸರ್ಕಾರವು ಲಡಾಖ್ನ ಡಿಡಿಎಲ್ಜೆ ಸಮೀಪದ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದು, ದೇಶಕ್ಕೆ ಆರು ದಶಕಗಳಲ್ಲಿಯೇ ಅತ್ಯಂತ ಹೀನವಾದ ಪ್ರಾದೇಶಿಕ ಹಿನ್ನಡೆಯನ್ನು ಮುಚ್ಚಿಡಲು ಪ್ರಯತ್ನಿಸಿದೆ. ಮೇ 2020 ರಿಂದ, ಚೀನಾದ ಪಡೆಗಳು ಲಡಾಖ್ ಪ್ರದೇಶದಲ್ಲಿ ಭಾರತೀಯ ಗಸ್ತುಪಡೆಗೆ ಪ್ರವೇಶವನ್ನು ನಿರಾಕರಿಸುವುದನ್ನು ಮುಂದುವರೆಸಿವೆ”ಎಂದು ಜೈರಾಮ್ ತಿಳಿಸಿದ್ದಾರೆ.
2017 ರಲ್ಲಿ ಲಡಾಕ್ನ ಡೋಕ್ಲಾಮ್ನಲ್ಲಿ ಭಾರತದ ವಿಜಯೋತ್ಸವವನ್ನು ಚೀನಾ ನಿರಾಕರಿಸಿದ್ದು, ಇದರ ಜೊತೆಗೆ ಭೂತಾನ್ ಭೂಮಿಯಲ್ಲಿಯೂ ತನ್ನ ಅತಿಕ್ರಮಣ ಸ್ಥಾಪಿಸಲು ಹೊರಟಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
“ಭಾರತದ ಜನರಿಗೆ ಪ್ರಧಾನಿ ಸತ್ಯವನ್ನು ಹೇಳುವುದಕ್ಕೆ, ಲಡಾಖ್ನಲ್ಲಿ ಯಥಾಸ್ಥಿತಿಯನ್ನು ಹೇಗೆ ಮತ್ತು ಯಾವಾಗ ಪುನಃಸ್ಥಾಪಿಸಲಾಗುತ್ತದೆ ಎಂಬುದನ್ನು ವಿವರಿಸಲು ಇದು ಸುಸಮಯ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.





